ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅವರು ಮಂಗಳವಾರ ಕನಕಪುರ ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ದಿಢೀರ್ ದಾಳಿ ನಡೆಸಿ ಅಲ್ಲಿನ ಅಕ್ರಮ ವ್ಯವಹಾರಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಯೋಗೀಶ್ವರ್ ಅವರು ರಾಮನಗರ ಜಿಲ್ಲೆಯ ರಾಜಕಾರಣಿ. ಬಿಜೆಪಿಗೆ ಬರುವ ಮುನ್ನ ಕಾಂಗ್ರೆಸ್ನಲ್ಲಿ ಇದ್ದವರು. ತಮ್ಮ `ಬೇಳೆ~ ಬೇಯಿಸಿಕೊಳ್ಳುವ ರಾಜಕಾರಣಕ್ಕಾಗಿ ಬಿಜೆಪಿಗೆ ಬಂದು ಮಂತ್ರಿಯಾದರು ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಚುನಾವಣೆ ಹತ್ತಿರ ಬರುತ್ತಿರುವ ವಾಸನೆ ಹಿಡಿದು ಜಿಲ್ಲೆಯ ಅರಣ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.
ರಾಮನಗರ ಜಿಲ್ಲೆಯ ಗಣಿಗಾರಿಕೆ ಇಂದು ನಿನ್ನೆಯದಲ್ಲ. ಜನಾರ್ದನ ರೆಡ್ಡಿ ಗಣಿ ಅಕ್ರಮಕ್ಕಾಗಿ ಜೈಲು ಕಂಬಿ ಎಣಿಸುತ್ತಿದ್ದಾರೆ. ಅವರು ಬಿಜೆಪಿಯವರು ಎಂಬುದನ್ನೇ ಯೋಗೀಶ್ವರ್ ಮರೆತಿದ್ದಾರೆ. ಗಣಿ ಅಕ್ರಮಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಮತ್ತು ಕ್ರಮ ಕೈಗೊಳ್ಳುವ ಶಕ್ತಿ ಸಚಿವರಿಗೆ ಇದೆಯೇ?
ಅಕ್ರಮ ಗಣಿಗಾರಿಕೆಯ ಕಾರಣದಿಂದಲೇ ಇವತ್ತು ಆನೆಗಳೂ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ನಾಡಿನ ಕಡೆಗೆ ಬರುತ್ತಿವೆ ಎಂಬ ಮಾತನ್ನೂ ಸಚಿವರೇ ಆಡಿದ್ದಾರೆ. ಈ ನುಡಿ ಮುತ್ತುಗಳನ್ನು ಸಚಿವರು ಇಷ್ಟು ದಿನ ಏಕೆ ಆಡಲಿಲ್ಲವೋ?