ರಾಜಧಾನಿ ಬೆಂಗಳೂರು ನಗರದಲ್ಲಿ ಕರ್ನಾಟಕದ ವೃತ್ತಿರಂಗಭೂಮಿಯವರಿಗೆ ಇರುವ ಏಕೈಕ ರಂಗಮಂದಿರ ‘ಗುಬ್ಬಿ ವೀರಣ್ಣ ರಂಗ ಮಂದಿರ’. ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿರುವ 15-20 ನಾಟಕ ಕಂಪೆನಿಗಳು ಇಲ್ಲಿ ಸರದಿಯ ಮೇಲೆ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿವೆ. ಒಂದೊಂದು ನಾಟಕ ಕಂಪೆನಿಗೆ ಒಂದು, ಒಂದೂವರೆ ವರ್ಷಗಳ ಕಾಲ ರಂಗಮಂದಿರವನ್ನು ಬಾಡಿಗೆಗೆ ನೀಡಲಾಗುತ್ತದೆ. ನಗರಪಾಲಿಕೆಗೆ ಇದರಿಂದ ಒಳ್ಳೆಯ ಆದಾಯವೂ ಇದೆ.
ವೈಭವದಿಂದ ಮೆರೆದ ವೃತ್ತಿ ರಂಗಭೂಮಿಯ ಪಳೆಯುಳಿಕೆಯನ್ನು ವೀಕ್ಷಿಸಬೇಕೆನ್ನುವ ರಾಜಧಾನಿಯ ಮಂದಿಗೆ ಇದೊಂದೇ ಆಶ್ರಯ ತಾಣ ಇರುವುದು.
ಮೆಜೆಸ್ಟಿಕ್ ಪ್ರದೇಶದಲ್ಲಿ ಈ ರಂಗಮಂದಿರ ಇರುವುದರಿಂದ ಒಂದೆರಡು ದಿನ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಬಂದವರಲ್ಲಿ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರು ಇಲ್ಲಿ ನಾಟಕ ನೋಡಲು ಬರುತ್ತಾರೆ.
ಇನ್ನು ಕರ್ನಾಟಕದ ಬೇರೆ ಬೇರೆ ಭಾಗದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ವೃತ್ತಿ ರಂಗಭೂಮಿ ಕಲಾವಿದರ ಭೇಟಿಯ ಸ್ಥಳವೂ ಈ ರಂಗಮಂದಿರ ಆಗಿದೆ. ರಾಜ್ಯದ ಒಟ್ಟು ವೃತ್ತಿ ಕಲಾವಿದರ ಕೂಡು ತಾಣವೇ ಇದಾಗಿದೆ. ನಗರದ ಹೃದಯ ಭಾಗದಲ್ಲಿರುವ ಇಂತಹ ಮಹತ್ವದ ರಂಗ ಮಂದಿರವನ್ನು ದುರಸ್ತಿಯ ನೆಪದಲ್ಲಿ ಮುಚ್ಚಿ 7-8 ತಿಂಗಳೇ ಗತಿಸಿದವು. ಇದರಿಂದ ನಾಟಕ ಪ್ರೇಮಿಗಳು ವಂಚಿತರಾ ಗಿದ್ದಾರೆ. ದುರಸ್ತಿಗೆ ಎಷ್ಟು ದಿನ ಬೇಕು?