ಈ ಚುನಾವಣೆ ಅನೇಕರಿಗೆ ಅನೇಕ ಪಾಠಗಳನ್ನು ಕಲಿಸಿದೆ. ಮೊದಲನೆಯದು ಎಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಆಡಳಿತದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸ್ಥಿರತೆ ಇಲ್ಲದಿದ್ದಲ್ಲಿ ಜನ ಅದನ್ನು ಕ್ಷಮಿಸಲಾರರು ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ನಿರ್ಧಾರವಾಗಿದೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಗಿರುವ ಅಭಿವೃದ್ಧಿ ಅದರ ಹಿಂದಿನ ಹತ್ತಾರು ವರ್ಷಗಳಲ್ಲಿ ಆಗಿರಲಿಲ್ಲ ಎಂಬುದನ್ನು ಯಾವ ವಿರೋಧಿಯೂ ಒಪ್ಪುತ್ತಾನೆ. ವಿಶೇಷವಾಗಿ ರಾಜ್ಯಾದ್ಯಂತ ರಸ್ತೆ, ನೀರು ಮುಂತಾದ ಜನಪರ ಯೋಜನೆಗಳಲ್ಲಿ ಆಗಿರುವ ಸುಧಾರಣೆ, ಸ್ಥಳೀಯ ಸಂಸ್ಥೆಗಳಿಗೆ ಹರಿದುಬಂದಿರುವ ಅನುದಾನ ಇವು ಕಣ್ಣಿಗೆ ಕಟ್ಟುವಂತಹ ಅಭಿವೃದ್ಧಿಗಳು. ಆದರೆ ನೀರಿನಲ್ಲಿ ಹೋಮ ಮಾಡಿದಂತೆ ಇವೆಲ್ಲವನ್ನೂ ಮೀರಿ ಆದ ಗೊಂದಲ, ಅಸ್ಥಿರತೆ ಜನತೆಯನ್ನು ನಿರಾಶೆಗೆ ದೂಡಿದವು.
ಆಡಳಿತ ಪಕ್ಷದಲ್ಲಿನ ಒಡಕಿನಿಂದಾಗಿ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ಎಂಬ ಹಿರಿಮೆಗೆ ಪಾತ್ರವಾದ ಬಿಜೆಪಿ ತಲೆ ಎತ್ತದಷ್ಟು ಹೊಡೆತ ಅನುಭವಿಸುವಂತಾಯಿತು. ಕಟ್ಟಿದ ಮನೆಯನ್ನು ಕಟ್ಟಿದವರೇ ಎಷ್ಟು ವ್ಯವಸ್ಥಿತವಾಗಿ ಕೆಡವಬಹುದೆಂಬುದನ್ನು ತೋರಿಸಿಕೊಡಲಾಯಿತು.
-ಎಚ್.ಎಸ್. ಮಂಜಪ್ಪ, ಸೊರಬ .