‘ಅಧಿಕ ಬಡ್ಡಿ ವಿರುದ್ಧ ಹೋರಾಟ ಅಗತ್ಯ’ (ಪ್ರ.ವಾ., ಆ. 11). ಚಿತ್ರದುರ್ಗ ಹತ್ತಿರದ ಮದಕರಿಪುರದಲ್ಲಿ ಶಿವಮೂರ್ತಿ ಮುರುಘಾ ಶರಣರು ‘ಬೆಳ್ಳಿಹಬ್ಬ: ಹಳ್ಳಿಗೊಂದು ಅಭಿವೃದ್ಧಿ’ ಎಂಬ ಚಿಂತನಾಗೋಷ್ಠಿಯಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
ಅಧಿಕ ಬಡ್ಡಿ ದಂಧೆ ವಿರುದ್ಧ ಹೋರಾಟ ಮಾಡುವ ಅಗತ್ಯ ನಿಜಕ್ಕೂ ಇದೆ. ಅದರಲ್ಲೂ ಚಳ್ಳಕೆರೆ, ಚಿತ್ರದುರ್ಗದಲ್ಲಿ ಅಧಿಕ ಬಡ್ಡಿ ದಂಧೆಯ ಕರಾಳ ಮುಖಗಳು ಈ ಭಾಗದ ಎಲ್ಲರಿಗೂ ತಿಳಿದಿರುವಂತಹುದೇ. ಈ ಭಾಗದಲ್ಲಿ ಇದನ್ನು ‘ಮೀಟರ್ ಬಡ್ಡಿ’ ಅಂತಲೂ ಕರೆಯುವುದುಂಟು. ಅಂದರೆ, ಗಂಟೆಗಿಷ್ಟು, ದಿನಕ್ಕಿಷ್ಟು ಬಡ್ಡಿ ಎಂದು ಬಡ್ಡಿಕೋರರು ನಿಗದಿ ಮಾಡಿ ಅಸಹಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ.
ಇಂತಹ ಬಡ್ಡಿ ದಂಧೆಯಿಂದ ಅನೇಕರು ಬೀದಿಗೆ ಬಂದ ನಿದರ್ಶನಗಳಿವೆ. ಆದರೂ, ಇಂತಹ ಪ್ರಕರಣಗಳು ಬಹಿರಂಗಗೊಳ್ಳುವುದು ಕಡಿಮೆ. ಮೀಟರ್ ಬಡ್ಡಿಕೋರರು ಇಂದು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ಚಿನ್ನದ ಸರ, ಉಂಗುರಗಳನ್ನು ಧರಿಸಿ ಮಿಂಚುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ದಂಧೆ ಬಗ್ಗೆ ಶರಣರಿಗೆ ಮಾಹಿತಿ ಇರುವ ಕಾರಣಕ್ಕೇ ಹೋರಾಟ ಅಗತ್ಯ ಎಂದಿದ್ದಾರೆ. ಮುರುಘಾ ಶರಣರೇ ಈ ಹೋರಾಟದ ನೇತೃತ್ವ ವಹಿಸಿದರೆ ಜಿಲ್ಲೆಯ ಮಟ್ಟಿಗಾದರೂ ಈ ಶೋಷಣೆ ತಪ್ಪಿಸಬಹುದು