ಏಕೆಂದರೆ, ಯಾವುದೇ ಒಂದು ಪ್ರತಿಮೆಯನ್ನು ನೋಡುವುದರಿಂದ ವ್ಯಕ್ತಿಯ ನಡೆನುಡಿಯಲ್ಲಿ ಏನೊಂದೂ ಬದಲಾವಣೆ ಆಗುವುದಿಲ್ಲ. ಪ್ರತಿಮೆಯು ನೋಡುವ ಕಣ್ಣುಗಳಿಗೆ ಮುದ ನೀಡುವ ಕಲಾಕೃತಿಯೇ ಹೊರತು ಮತ್ತೇನಲ್ಲ. ಜನಸಮುದಾಯಕ್ಕೆ ಬೇಕಾಗಿರುವುದು ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವೇ ಹೊರತು ಪ್ರತಿಮೆಗಳಲ್ಲ. ಜನಪರವಾದ ಸಂಗತಿಗಳಿಗಾಗಿ ಹೋರಾಟ ಮಾಡುತ್ತಿರುವ ಸಂಘ ಸಂಸ್ಥೆಗಳು ಈ ಸಾಮಾಜಿಕ ವಾಸ್ತವವನ್ನು ಮನಗಂಡರೆ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅನೇಕ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಅನಗತ್ಯವಾದ ಸಮಸ್ಯೆಯ ಸುಳಿಯಿಂದ ಪಾರಾಗಬಹುದು.