ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ಸೇರಿಸಬೇಕು ಎಂದು ಚುನಾವಣಾ ಆಯೋಗ, ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಇದೊಂದು ರೀತಿಯಲ್ಲಿ ಜನರನ್ನು ಮರುಳುಗೊ ಳಿಸುವ ಪ್ರಯತ್ನಕ್ಕೆ ತಡೆಹಾಕುವ ಕ್ರಮ.
ಚುನಾವಣೆ ಘೋಷಣೆಯಾದ ನಂತರ ಸರ್ಕಾರಗಳು ಮತದಾರರನ್ನು ಸೆಳೆಯುವಂತಹ ಯೋಜನೆಗಳನ್ನು ಪ್ರಕಟಿಸಲು, ಉದ್ಘಾಟಿಸಲು, ಶಿಲಾನ್ಯಾಸ ನೆರವೇರಿಸಲು ಸಾಧ್ಯವಿಲ್ಲ. ಇದಕ್ಕೆ ನೀತಿ ಸಂಹಿತೆಯ ನಿರ್ಬಂಧ ಇದೆ. ಆದರೆ ನೀತಿ ಸಂಹಿತೆ ಜಾರಿಗೆ ಬರುವ ಸ್ವಲ್ಪ ಮೊದಲು ಇಂತಹ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಆಡಳಿತ ನಡೆಸುವ ಸರ್ಕಾರಕ್ಕೆ ಅವಕಾಶವಿದೆಯಲ್ಲವೆ? ಈಚೆಗೆ ಕೇಂದ್ರ ಸರ್ಕಾರ ಇಂತಹ ಅನೇಕ ತೀರ್ಮಾನಗಳನ್ನು ಕೈಗೊಂಡಿರುವುದು ಒಂದು ರೀತಿಯಲ್ಲಿ ನೀತಿ ಸಂಹಿತೆಯನ್ನು ಅಣಕಿಸುವಂತೆ ಕಾಣುತ್ತಿದೆ.
ನೌಕರರಿಗೆ ತುಟ್ಟಿಭತ್ಯೆ ಏರಿಕೆ ಒಳಗೊಂಡಂತೆ ಕೊನೆಯ ಹಂತದಲ್ಲಿ ನಿರ್ಣಯಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಅವಕಾಶ ಕೇವಲ ಸರ್ಕಾರಗಳಿಗೆ ಮಾತ್ರ ಇರುವುದರಿಂದ, ಅವುಗಳ ನೇತೃತ್ವ ವಹಿಸಿದ ಪಕ್ಷಗಳು ಇದರ ಲಾಭವನ್ನು ಪಡೆಯಲು ಅವಕಾಶವಾಗುವುದಿಲ್ಲವೆ?
ಸರ್ಕಾರ ಅಥವಾ ಆಡಳಿತ ಪಕ್ಷ ಚುನಾವಣೆ ನಡೆಯುವ ಆರು ತಿಂಗಳ ಮೊದಲು ಯಾವುದೇ ಜನಪರ ಅಥವಾ ಮತದಾರರ ಮೇಲೆ ಪ್ರಭಾವ ಬೀರುವಂಥ ನಿರ್ಣಯಗಳನ್ನು ಕೈಗೊಳ್ಳಬಾರದು ಎನ್ನುವ ನಿಯಮ ಜಾರಿಗೆ ಬಂದರೆ ಆಗ ಇಂತಹ ದುರುಪಯೋಗವನ್ನು ಸ್ವಲ್ಪವಾದರೂ ತಡೆ ಯಲು ಸಾಧ್ಯ.