ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರದ ಅಗತ್ಯವನ್ನು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ. ರೇಣುಕಾಪ್ರಸಾದ್ ಅವರು ಪ್ರತಿಪಾದಿಸಿದ್ದನ್ನು ಮಾಜಿ ಶಾಸಕ ಎಸ್. ರಾಜಣ್ಣ ಅವರು ಅವೈಜ್ಞಾನಿಕ ಎಂದು ವಿರೋಧಿಸಿದ್ದು ನಿಜವಾಗಿಯೂ ಅಚ್ಚರಿಯ ವಿಷಯ.
ಬದುಕಿನ ಕೊನೆಯ ಕ್ಷಣದವರೆಗೆ ಯಜಮಾನ, ಯಜಮಾನಿಗೆ ಪ್ರೀತಿ ತೋರಿಸಿದ ನಾಯಿ, ಬೆಕ್ಕುಗಳ ಶವಗಳನ್ನು ಬೆಂಗಳೂರಿನಂತಹ ಊರಲ್ಲಿ ಏನು ಮಾಡಬೇಕು. ಜನರಿಗೆ ವಾಸಕ್ಕೆ ಭೂಮಿ ಸಿಗುವುದೇ ಕಷ್ಟ. ಹಾಗಿರುವಾಗ ಅವುಗಳನ್ನು ಎಲ್ಲಿ ಹೂಳಬೇಕು. ದುಡ್ಡಿದ್ದವರ ಸಾಕು ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಬೆಂಗಳೂರಿನ ಹೊರ ವಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ನಿಜ. ಇದು ದುಬಾರಿಯಾದುದು.
ಆದರೆ ಮಧ್ಯಮ ಮತ್ತು ಬಡ ವರ್ಗ ಎಲ್ಲಿಗೆ ಹೋಗಬೇಕು. ಬೆಳಿಗ್ಗೆ ಕಸ ಕೊಂಡೊಯ್ಯಲು ಬರುವ ಲಾರಿಗೆ ಶವಕೊಟ್ಟು ಜೀವಮಾನ ಇಡೀ ಪಶ್ಚಾತ್ತಾಪಪಟ್ಟವರು ಇದ್ದಾರೆ. ಮಾಜಿ ಶಾಸಕರು ವಿದ್ಯುತ್ ಚಿತಾಗಾರವನ್ನು ವಿರೋಧಿಸುವಾಗ ವಿದ್ಯುತ್ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ವಿದ್ಯುತ್ ಸಮಸ್ಯೆ ತಾತ್ಕಾಲಿಕ. ಬೆಂಗಳೂರಿನಲ್ಲಿ ಮಾಲ್ ಗಳಿಗೆ ಬಳಸುವ ವಿದ್ಯುತ್ನ ಪ್ರಮಾಣ ಗಮನಿಸಿದರೆ ಗಾಬರಿಯಾಗಬೇಕು.
ಕುಲಪತಿಯವರ ಸಲಹೆ ಶ್ಲಾಘನಾರ್ಹ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಯೋಗ್ಯವಾದುದು.