ಎಚ್.ಜಿ. ಸೋಮಶೇಖರ ರಾವ್ ಅವರ ‘ಬ್ಯಾಂಕುಗಳಲ್ಲಿ ಕನ್ನಡಿಗರು’ ಪತ್ರಕ್ಕೆ (ವಾ.ವಾ., ಮೇ 4) ಪೂರಕವಾಗಿ ಇನ್ನಷ್ಟು ಮಾಹಿತಿ. ನಾನೂ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತನಾಗಿ 15 ವರ್ಷಗಳಾಗಿವೆ.
ನಾನು ಸೇವೆ ಸಲ್ಲಿಸಿದ ಬ್ಯಾಂಕ್ನ ಪ್ರಧಾನ ಕಚೇರಿ ಮದ್ರಾಸಿನಲ್ಲಿತ್ತು. ಆಗ ಕರ್ನಾಟಕದ ಎಲ್ಲಾ ಶಾಖೆಗಳಲ್ಲಿ ತಮಿಳರೇ ಅಧಿಕಾರಿ ವರ್ಗದಲ್ಲಿದ್ದರು. ಅವರೆಲ್ಲಾ ಕನ್ನಡ ಭಾಷೆಯನ್ನು ಕಲಿಯದೆ ಇಂಗ್ಲೆಂಡ್ ನಿವಾಸಿಗಳು ಎಂಬಂತೆ ಸಾರ್ವಜನಿಕರೊಂದಿಗೆ ಬರಿ ಇಂಗ್ಲಿಷ್ನಲ್ಲೇ ಮಾತಾಡುತ್ತಿದ್ದರು. ಕನ್ನಡಿಗ ಬ್ಯಾಂಕ್ ಸಿಬ್ಬಂದಿಯನ್ನು ಕಡೆಗಣಿಸುತ್ತಿದ್ದರು.
ಕನ್ನಡ ಮಾತನಾಡುವ ಸಿಬ್ಬಂದಿಗೆ ಬಡ್ತಿಯಲ್ಲಿ ಅವಕಾಶಗಳು ಸಿಗುತ್ತಿರಲಿಲ್ಲ. ಈ ಬ್ಯಾಂಕ್ನ ಹೆಡ್ ಆಫೀಸ್ ಬೆಂಗಳೂರಲ್ಲಿ ಸ್ಥಾಪನೆಯಾದರೂ ತಮಿಳರ ಪ್ರಾಬಲ್ಯ ಕಡಿಮೆಯಾಗಲಿಲ್ಲ. ನೇಮಕಾತಿಯಲ್ಲಿ ಕನ್ನಡಿಗರಿಗೆ ಮತ್ತೆ ಅನ್ಯಾಯಗಳಾದವು.
ಕರ್ನಾಟಕದಲ್ಲಿನ ಶಾಖೆಗಳಿಗೆ ತಮಿಳು, ತೆಲುಗು, ಮಲಯಾಳಿಗಳ ನೇಮಕಾತಿಗಳು ಈಗಲೂ ಮುಂದುವರಿದಿವೆ. ನೇಮಕಾತಿ ಮಂಡಳಿಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಇಲ್ಲ ಎಂಬಷ್ಟಿದೆ. ಹೀಗಾಗಿ ಕನ್ನಡಿಗರು ಪ್ರತಿಭೆಯಲ್ಲಿ ಕಡಿಮೆಯಿಲ್ಲದಿದ್ದರೂ ಅನ್ಯ ಭಾಷಿಕರೇ ಕರ್ನಾಟಕದ ವಿವಿಧ ಪ್ರದೇಶಗಳಿಗೆ ನೇಮಕಾತಿ ಆಗುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ವಿರೋಧದ ನಡುವೆಯೂ ಅನ್ಯಭಾಷಿಕರ ಹಾವಳಿ ಹಾಗೇ ಇದೆ. ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಿಸಲು ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಒತ್ತಡ ತರಬೇಕು.