ಬಳ್ಳಾರಿಯಲ್ಲಿ ಮತ್ತೊಂದು ಉಪ ಚುನಾವಣೆ. ದೇಶದ ಕೋಟ್ಯಂತರ ರೂಪಾಯಿ ಸಂಪತ್ತಿನ ಮಾರಣ ಹೋಮ.
ಸರ್ಕಾರಿ ಅಧಿಕಾರಿಗಳ, ನೌಕರರ ಅಪಾರ ಸಮಯದ, ಶ್ರಮದ ನಾಶ. ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಮತದಾರರಿಗೆ ಅವರು ಬಯಸದೇ ಬಂದ ಚುನಾವಣಾ ಬವಣೆಗಳ ಸರಣಿ.
ಇದಕ್ಕೆಲ್ಲಾ ಹೊಣೆಗಾರರು ಯಾರು ? ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರನ್ನೂ ಸೇರಿಸಲಾಗಿದೆ, ಆದ್ದರಿಂದ ನೈತಿಕತೆಯ ನೆಲೆಯಲ್ಲಿ ತಾವು ಶಾಸಕರಾಗಿ ಮುಂದುವರೆಯುವುದು ಸರಿಯಲ್ಲ ಎಂಬ ಕಾರಣವನ್ನು ಮುಂದೊಡ್ಡಿ, ಶಾಸನ ಸಭೆಗೆ ತಮ್ಮನ್ನು ಆರಿಸಿ ಕಳಿಸಿದ ಮತದಾರರೆಲ್ಲರ ಸಹಾನುಭೂತಿಯೂ ತಮ್ಮದಾಗಿರುತ್ತದೆ ಎಂಬ ಭ್ರಮೆಗೆ ಒಳಗಾಗಿ, ಶಾಸಕ ಸ್ಥಾನವನ್ನು ತ್ಯಜಿಸಿ, ಉಪ ಚುನಾವಣೆಯ ಹೊರೆ ಪ್ರಜೆಗಳ ಮೇಲೆ ಬೀಳುವಂತೆ ಮಾಡಿದವರೇ ಅಲ್ಲವೇ?
ವಿಧಾನ ಸಭೆಯ ತಮ್ಮ ಹಿಂದಿನ ಸದಸ್ಯತ್ವವನ್ನು ತೊರೆಯಲು ಕಾರಣವಾದ ಅವರ ಸ್ವಘೋಷಿತ ನೈತಿಕತೆಯು, ಮುಂಬರುವ ಉಪ ಚುನಾವಣೆಯಲ್ಲಿ ಒಬ್ಬ ಉಮೇದುವಾರರಾಗಿ ಸ್ಪರ್ಧಿಸದಿರಲೂ ಕಾರಣವಾಗಿರುತ್ತದೆ ಎಂಬ ಪರಿಜ್ಞಾನ ಪ್ರಾಮಾಣಿಕತೆ ಅವರಲ್ಲಿ ಇರುವುದೇ ಹೌದಾಗಿದ್ದರೆ, ಅವರು ಮತ್ತೆ ಚುನಾವಣಾ ಕಣಕ್ಕೆ ಇಳಿಯಬಾರದು.
ಹಾಗೆ ನಡೆದುಕೊಂಡರೆ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಈ ಗುರುತರ ಸಂಗತಿಯು ಇಡೀ ದೇಶದ ರಾಜಕಾರಣಕ್ಕೇ ಹೆಮ್ಮೆಪಡುವಂಥಾ ಒಂದು ಮಾದರಿ ಆಗಬಹುದು.