ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಅಂತಿಮ ಯಾತ್ರೆಯನ್ನು ಮಾಧ್ಯಮಗಳ ಬೆಂಬಲದಿಂದ ದೇಶದ ಕೋಟ್ಯಂತರ ಜನ ವೀಕ್ಷಿಸಿದರು. ಈ ರಾಷ್ಟ್ರೀಯ ದುರಂತದ ನೋವಿನ ಹಿನ್ನೆಲೆಯಲ್ಲಿ ಇನ್ನೊಂದು ನೋವು ನಮ್ಮನ್ನು ಕಾಡಿತು. ಅದೆಂದರೆ; ಗಂಡ ಸತ್ತ ಮೇಲೆ ಹೆಂಡತಿ ವಿಧವೆಯೆಂದು ಪರಿಗಣಿಸಿ ಅವಳ ತಾಳಿ, ಬಳೆ, ಕುಂಕುಮ ತೆಗೆಯುವ ಅನಿಷ್ಟ ಪದ್ಧತಿಗೆ ನಾವೆಲ್ಲ ಸಾಕ್ಷಿಯಾದೆವು. ಅನೇಕ ಸ್ವಾಮಿಗಳು ಮತ್ತು ರಾಜಕೀಯ ಮುಖಂಡರು ಇದನ್ನು ಪ್ರತ್ಯಕ್ಷ ಕಂಡರು.
ಗಂಡ ಸತ್ತ ಮೇಲೆ ಹೆಂಡತಿಯನ್ನು ‘ವಿಧವೆ’, ‘ರಂಡೆ’ ಎಂದೆಲ್ಲ ಪರಿಗಣಿಸುವ ನಮ್ಮ ಪುರುಷ ಪ್ರಧಾನ ಸಮಾಜದ ಅನಿಷ್ಟ ಪರಂಪರೆಗೆ ಉತ್ತರ ಇಲ್ಲವೇ? ದೇಶಕ್ಕಾಗಿ ಸೈನಿಕ ವೀರಮರಣ ಅಪ್ಪಿದರೆ ಅವನ ಹೆಂಡತಿಗೆ ವಿಧವಾಪಟ್ಟ ಕಟ್ಟುವುದು, ಅವಳ ಮುತ್ತೈದೆ ಸಂಕೇತಗಳನ್ನು ಅಳಿಸಿ ಹಾಕುವುದು ಯಾವ ನ್ಯಾಯ?
ಯಾವುದೇ ಸ್ತ್ರೀ, ಪತಿಯನ್ನು ಕಳೆದುಕೊಂಡರೆ ಅವಳಿಂದ ಅವಳ ಚಾರಿತ್ರಿಕ ಹಕ್ಕಾಗಿರುವ ಮುತ್ತೈದೆ ಸಂಕೇತಗಳನ್ನು ಕಸಿದುಕೊಳ್ಳುವುದು ಯಾರು ಬರೆದಿಟ್ಟ ನಿಯಮ ? ಗಂಡ ಇದ್ದರೆ ಅವಳು ‘ಮುತ್ತೈದೆ’, ಗಂಡ ಸತ್ತುಹೋದರೆ ಅವಳು ‘ಮಹಾಮುತ್ತೈದೆ’ ಎಂದು ಪರಿಗಣಿಸಿ ಅವಳನ್ನು ಸಾಂಸ್ಕೃತಿಕ ಶೋಷಣೆಗಳಿಂದ ನಾವು ತಪ್ಪಿಸಲಾರೆವೇ? ನಮ್ಮೊಂದಿಗೆ ತಾಯಿಯಾಗಿ, ಮಡದಿಯಾಗಿ, ತಂಗಿಯಾಗಿ, ಮಗಳಾಗಿ ಬಾಳು ಬೆಳಗುವ ಮಹಿಳೆಗೆ ಇದೆಂಥಾ ಅವಜ್ಞೆ?