ಬಿಹಾರದಲ್ಲಿ ರೈಲ್ವೆ ಹಳಿ ದಾಟುವಾಗ ಶಿವ ಭಕ್ತರು ಮೃತರಾದ ಹೃದಯ ವಿದ್ರಾವಕ ಸುದ್ದಿ ಓದಿ ಮನಸ್ಸು ಕಲಕಿತು. ಜನಸಾಮಾನ್ಯರಿಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದಿರುವ ಸ್ಥಿತಿಯನ್ನು ಕಲ್ಪಿಸಿಕೊಂಡು ಅಷ್ಟೇ ಕನಿಕರ ಎನಿಸಿತು.
ರೈಲ್ವೆ ಹಳಿಯನ್ನು ಯಾವ ಸಂದರ್ಭದಲ್ಲೂ ದಾಟಬಾರದು ಎನ್ನುವುದು ರೈಲ್ವೆ ನಿಯಮ. ಆದರೆ ಜನ ಅದನ್ನು ಪಾಲಿಸುವುದೇ ಇಲ್ಲ ಎಂಬುದನ್ನು ರೈಲು ನಿಲ್ದಾಣಗಳಲ್ಲಿ ನಿತ್ಯ ಕಾಣುತ್ತೇವೆ. ಹತ್ತಿರದ ದಾರಿ ಎನ್ನುವ ಕಾರಣಕ್ಕಾಗಿ ಬಹುಪಾಲು ಜನ ರೈಲ್ವೆ ಹಳಿ ದಾಟುತ್ತಾರೆ.
ಮೇಲುಸೇತುವೆ ಅಥವಾ ಸುರಂಗ ಮಾರ್ಗ ಬಳಸುವುದು ಕಡಿಮೆ. ರೈಲ್ವೆ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ನೋಡಿ ತಡೆಯುತ್ತಾರೆ, ಅಷ್ಟೇ. ಬಹುತೇಕ ಸಂದರ್ಭಗಳಲ್ಲಿ ಅವರೂ ಇದನ್ನು ಗಮನಿಸಿದರೂ ಗಮನಿಸದಂತೆ ಇರುತ್ತಾರೆ. ಆ ಬಗ್ಗೆ ತಿಳಿಹೇಳುವುದಕ್ಕೆ ಹೊರಟರೆ ಜನ ಅದನ್ನು ಒಳ್ಳೆಯ ಅರ್ಥದಲ್ಲಿ ಗ್ರಹಿಸದೆ ಜಗಳಕ್ಕೇ ಬರುತ್ತಾರೆ.