ನಾವು ದಿನನಿತ್ಯ ಬಳಸುವ ದವಸ–ಧಾನ್ಯ, ಹಾಲು ಹಾಗೂ ಅಗತ್ಯ ಸೇವೆಗಳಾದ ಬಸ್ ಪ್ರಯಾಣ ಮುಂತಾದವುಗಳು ತೀರಾ ದುಬಾರಿ ಆಗಬಾರದು. ಆದರೆ ಇವುಗಳ ದರ ಈಗ ಗಗನಕ್ಕೇರಿದೆ. ಎಲ್ಲ ವರ್ಗದ ಜನರಿಗೂ ಇದರ ಬಿಸಿ ತಟ್ಟಿದೆ. ಉಳ್ಳವರು ಹೇಗೊ ಹಣ ಹೊಂದಿಸಿಕೊಳ್ಳಬಹುದು. ಆರ್ಥಿಕ ಚೈತನ್ಯ ಇಲ್ಲದವರ ಬದುಕು ದಿನೇ ದಿನೇ ನರಕಸದೃಶವಾಗುತ್ತಿದೆ. ಸರ್ಕಾರ ಮಾತ್ರ ತನ್ನ ಖಜಾನೆಯನ್ನು ತುಂಬಿಸುವತ್ತ ಗಮನಹರಿಸುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ವಿಪರೀತ ಅನ್ನಿಸುವಷ್ಟು ತಗ್ಗಿದ್ದರೂ ಅದರ ಪ್ರಯೋಜನವನ್ನು ಪೆಟ್ರೋಲ್, ಡೀಸೆಲ್ ಬಳಕೆದಾರರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ. ಡೀಸೆಲ್ ಬೆಲೆ ಏರಿದಾಗ ಬಸ್ ಪ್ರಯಾಣ ದರ ಹೆಚ್ಚಿಸುವ ರಾಜ್ಯ ಸರ್ಕಾರಕ್ಕೆ ಬೆಲೆ ಇಳಿದಾಗ ಅದಕ್ಕೆ ತಕ್ಕಂತೆ ಬಸ್ ದರ ಇಳಿಸಲು ಮನಸ್ಸು ಬರುವುದಿಲ್ಲ. ಸಬೂಬು ಹೇಳುತ್ತಾ ಕಾಲ ದೂಡುತ್ತದೆ.
ನಮ್ಮಲ್ಲಿ ಕೆಲಸಕ್ಕೆ ಬಾರದ, ರಾಜಕೀಯ ಲಾಭವನ್ನೇ ಗಮನದಲ್ಲಿ ಇರಿಸಿಕೊಂಡು ಜಾರಿಗೊಳಿಸಿರುವಂಥ ಅನೇಕ ಯೋಜನೆಗಳಿವೆ. ಅಂಥವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಬಿಟ್ಟು, ಅದರಿಂದ ಉಳಿತಾಯವಾಗುವ ಹಣವನ್ನು ಅಗತ್ಯ ಸೇವೆಗಳ ನಿರ್ವಹಣೆಗೆ ನೀಡಿದರೆ, ದರ ಹೆಚ್ಚಳದ ಹೊರೆಯನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸಬಹುದು. ಇನ್ನಾದರೂ ನಮ್ಮ ಸರ್ಕಾರಗಳು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಿ.