<p>ಸಾಮಾಜಿಕ ಕಾರ್ಯದಲ್ಲಿ ತೊಡಗಿದವರಿಗೆ ತಮ್ಮ ಅರಿವಿಗೇ ಬಾರದಂತೆ ಕ್ರಮೇಣವಾಗಿ ಅಹಂಕಾರ ಬೆಳೆಯುವ ಅಪಾಯ ಇರುತ್ತದೆ. ಈ ಕ್ಷೇತ್ರಕ್ಕೆ ಇಳಿಯುವ ಬಹುತೇಕರು ಉನ್ನತ ಆದರ್ಶಗಳೊಂದಿಗೆ ತಾವು ಕೈಗೊಳ್ಳುವ ಕಾರ್ಯದ ಮೂಲಕ ಆತ್ಮಶೋಧನೆಯಲ್ಲಿ ತೊಡಗುವ ಉದ್ದೇಶ ಹೊಂದಿರುತ್ತಾರೆ.<br /> <br /> ಆದರೆ ಈ ಹಾದಿಯಲ್ಲಿ ತಮಗೇ ಅರಿಯದಂತೆ ತಮ್ಮನ್ನು ತಾವೇ ಕಳೆದುಕೊಳ್ಳುವ ಅಪಾಯ ಇರುತ್ತದೆ.ಆದರೆ, ವಿವೇಕಾನಂದರ ಬಳಿ ಇದಕ್ಕೂ ಉತ್ತರವಿದೆ. ಈ ಸವಾಲಿನ ಬಗ್ಗೆ ಅವರು ಸಮಗ್ರವಾಗಿ ಚಿಂತಿಸಿದ್ದರು. <br /> <br /> ವೇದಿಕೆಯ ಮೇಲೆ ನಿಂತು, ಬಡಜನರೇ ನನ್ನ ಮಾತನ್ನು ಆಲಿಸಿರಿ, ನಾನು ನೀಡುವ ಈ ಐದು ಕಾಸುಗಳನ್ನು ತೆಗೆದುಕೊಳ್ಳಿ ಎಂದು ಯಾವತ್ತೂ ಹೇಳಬೇಡಿ. ಅದಕ್ಕೆ ಬದಲಾಗಿ, ಬಡಜನರು ಇರುವುದರಿಂದಲೇ ಅವರ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದೆ ಎಂದೇ ಭಾವಿಸಿರಿ ಎಂದು ಅವರು ಹೇಳಿದ್ದರು.<br /> <br /> ಸಮಾಜದೊಂದಿಗೆ ನಾವು ಹೆಚ್ಚು ಹೆಚ್ಚು ಭಾಗಿಯಾಗುತ್ತಾ, ಅದಕ್ಕೆ ನಮಗೆ ಮನ್ನಣೆ ಹೆಚ್ಚಾಗುತ್ತಾ ಹೋದಂತೆ, ನಮ್ಮ ಗಮನ `ನಮ್ಮಿಂದ ಏನು ಕಾರ್ಯ ಆಗುತ್ತಿದೆ~ ಎಂಬುದಕ್ಕಿಂತ ಹೆಚ್ಚಾಗಿ `ನಾವು ಕೆಲಸ ಮಾಡುತ್ತಿದ್ದೇವೆ~ ಎಂದು ಅಂದುಕೊಳ್ಳುವುದರತ್ತಲೇ ಕೇಂದ್ರೀಕೃತವಾಗುತ್ತದೆ. <br /> <br /> ನಮ್ಮ ಕೆಲಸ, ನಮಗೆ ಬಂದ ಪ್ರಶಸ್ತಿ ಇತ್ಯಾದಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಿ, ಮನ್ನಣೆ ಇನ್ನಷ್ಟು ಹೆಚ್ಚಾದಾಗ ನಾವು ದಿಕ್ಕುತಪ್ಪುವ ಸಾಧ್ಯತೆ ಇರುತ್ತದೆ. ನಾವು ಅಗಾಧವಾದ ರಚನಾತ್ಮಕ ಕಾರ್ಯ ಮಾಡುತ್ತಿದ್ದೇವೆ ಎಂಬ ಭ್ರಮೆ ನಮ್ಮಲ್ಲಿ ಮೊಳೆಯತೊಡಗುತ್ತದೆ.<br /> <br /> ಸಾಮಾಜಿಕ ಕಾರ್ಯದಲ್ಲಿ ತೊಡಗುವ ನಿಜವಾದ ಉದ್ದೇಶವನ್ನು ಎಷ್ಟು ಬೇಗ ಮರೆತೇಬಿಡುತ್ತೇವೆ ಎಂಬುದಕ್ಕೆ ನನ್ನ ಸ್ವಂತ ಅನುಭವವನ್ನೇ ಇಲ್ಲಿ ಹೇಳುತ್ತೇನೆ.<br /> ಸ್ವಾಮಿ ವಿವೇಕಾನಂದ ಯುವ ಆಂದೋಲನ ಸ್ಥಾಪಿಸಿ ಹಲವು ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ನನ್ನ ಅಂತರಂಗದ ಪ್ರಯಾಣವೂ ಆರಂಭವಾಗಿತ್ತು. <br /> <br /> ಹಲವು ವರ್ಷಗಳ ಕಾಲ ಈ ಸೇವಾ ಕಾರ್ಯ ನನ್ನೊಳಗಿನ ಆಧ್ಯಾತ್ಮಿಕ ವಿಕಸನದ ಬಾಹ್ಯ ಅಭಿವ್ಯಕ್ತಿಗೆ ಒಂದು ವೇದಿಕೆ ಎಂದೇ ನಾನು ಭಾವಿಸಿದ್ದೆ. ನಮ್ಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದಂತೆಯೇ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ಬಂದು, ಅದರಲ್ಲಿ ತೊಡಗಿಸಿಕೊಂಡಿದ್ದ ನಮ್ಮೆಲ್ಲರಿಗೂ ಮನ್ನಣೆಯೂ ಹೆಚ್ಚಾಗುತ್ತಾ ಹೋಯಿತು.<br /> <br /> ನಮ್ಮ ಶಾಲೆಗಳಲ್ಲಿ ನೂರಾರು ಆದಿವಾಸಿ ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಓದುತ್ತಿದ್ದಾರೆಂಬ ಹಾಗೂ ನಮ್ಮ ಆಸ್ಪತ್ರೆಗಳಿಂದ ಸಾವಿರಾರು ರೋಗಿಗಳಿಗೆ ಪ್ರಯೋಜನವಾಗುತ್ತಿದೆ ಎಂಬ ಕಾರಣಕ್ಕೆ ಸಮಾಜದಿಂದ ಶ್ಲಾಘನೆ ಜಾಸ್ತಿಯಾಗುತ್ತಿದ್ದಂತೆಯೇ ನನ್ನ ಆಂತರಿಕ ವಿಕಸನಕ್ಕೆ ಕತ್ತಲು ಕವಿಯಿತು.<br /> <br /> ನಮ್ಮ ಕಾರ್ಯದ ಬಗ್ಗೆ ದಿನಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಲೇಖನಗಳು/ ವರದಿಗಳು ಪ್ರಕಟವಾದಾಗ ಪ್ರಸಿದ್ಧಿ ಇನ್ನಷ್ಟು ಹೆಚ್ಚಾಯಿತು. ಇದೇ ಸಂದರ್ಭದಲ್ಲಿ, ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಜೇನುಕುರುಬ ಹುಡುಗನೊಬ್ಬನ ಬಗ್ಗೆ ಹಾಗೂ ನಮ್ಮ ಎಸ್ವಿಎಂಎಂ ಚಟುವಟಿಕೆಗಳ ಬಗ್ಗೆ ಪುಸ್ತಕವೊಂದನ್ನು ಬರೆದರು. ಈ ಕೃತಿಯಲ್ಲಿ ನನ್ನನ್ನು ಕೇಂದ್ರ ಪಾತ್ರದ ಪರಿವರ್ತನೆಯ ಹರಿಕಾರನೆಂಬಂತೆ ಚಿತ್ರಿಸಿದರು. <br /> <br /> ಇವೆಲ್ಲಾ ನನ್ನ ತಲೆಯನ್ನು ಹೊಕ್ಕುತ್ತಿದ್ದಂತೆ ನಾನು ನಿಧಾನವಾಗಿ, ವಿವೇಕಾನಂದರು ಪ್ರತಿಪಾದಿಸಿದ ನಿರ್ಲಿಪ್ತ ಹಾಗೂ ನಿಷ್ಕಾಮ ಸೇವಾ ತತ್ವವನ್ನು ಮರೆತೇಬಿಟ್ಟೆ. <br /> ಅಂತಹ ಸಂದರ್ಭದಲ್ಲಿ ಅದೇ ವಿವೇಕಾನಂದರು ಆಡಿದ ಬೇರೊಂದು ಮಾತು ನೆನಪಾಯಿತು. `ಕರುವಿಗೆ ಜನ್ಮ ನೀಡುವ ಹಸುವಿಗೆ ಅದಕ್ಕೆ ಹೇಗೆ ಹಾಲೂಡಿಸಬೇಕೆಂಬುದೂ ಗೊತ್ತಿರುತ್ತದೆ. <br /> <br /> ತಾನು ಸೃಷ್ಟಿಸಿದ್ದನ್ನು ಹೇಗೆ ಪೋಷಿಸಬೇಕೆಂಬುದು ದೇವರಿಗೆ ಗೊತ್ತಿರುತ್ತದೆ. ಸುತ್ತಮುತ್ತ ಏನೇನು ಆಗುತ್ತಿದೆಯೋ ಅದಕ್ಕೆಲ್ಲಾ ನೀವೇ ಕಾರಣ ಎಂದು ಭಾವಿಸಬೇಡಿ. ಅದಕ್ಕೆ ಬದಲಾಗಿ, ದೇವರು ನಿಮ್ಮನ್ನು ತನ್ನ ಒಂದು ಸಾಧನವನ್ನಾಗಿ ಆಯ್ದುಕೊಂಡು ಅವಕಾಶ ನೀಡಿರುವುದಕ್ಕಾಗಿ ಸಂತಸಪಡಿ~ ಎಂದು ಅವರು ಹೇಳುತ್ತಿದ್ದರು.<br /> <br /> ನೀವು ನಿರ್ಮಿಸಿದ ಆಸ್ಪತ್ರೆಗಳು, ಶಾಲೆಗಳು ಪ್ರವಾಹ ಬಂದು ಒಂದೇ ಕ್ಷಣದಲ್ಲಿ ಕೊಚ್ಚಿಹೋಗಿಬಿಡಬಹುದು ಅಥವಾ ಭೂಕಂಪನವಾಗಿ ನೆಲಸಮವಾಗಬಹುದು. ಆದ್ದರಿಂದ ನಿಮ್ಮ ಬಗ್ಗೆ ನೀವೇ ಅತಿಯಾಗಿ ಪ್ರಶಂಸಿಸಿಕೊಳ್ಳಬೇಡಿ. ನೀವು ಏನನ್ನು ಮಾಡುತ್ತೀರೋ ಅದು ಮುಖ್ಯವಲ್ಲ, ಅದನ್ನು ಮಾಡುವ ರೀತಿ ಮುಖ್ಯ.<br /> <br /> ಯಾವುದೇ ಉತ್ತೇಜನ ಇಲ್ಲದಿದ್ದರೂ ಸೇವೆಯಲ್ಲಿ ತೊಡಗುವುದು ಶ್ರೇಷ್ಠ ಆಧ್ಯಾತ್ಮಿಕ ಚಟುವಟಿಕೆಯ ಸ್ವರೂಪ. ಇಂತಹ ಕಾರ್ಯ ಅಪೇಕ್ಷಿಸುವ ನಿರ್ಲಿಪ್ತತೆ ಹಾಗೂ ರಾಗದ್ವೇಷ ರಾಹಿತ್ಯ ಸದಾ ನೆನಪಿನಲ್ಲಿರಲಿ ಎಂದೂ ಅವರು ಹೇಳಿದ್ದಾರೆ.<br /> <br /> ನಾನು ನನ್ನ ವಿಕಸನದ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದಾಗ, ಈ ಹೇಳಿಕೆಗಳನ್ನು ನನಗಾಗಿಯೇ ಬರೆಯಲಾಗಿದೆಯೇನೋ ಎಂದು ಭಾಸವಾಯಿತು. ಸಾಮಾಜಿಕ ಸೇವೆಯಲ್ಲಿ ತೊಡಗಿದವರಿಗೆ ಇವು ಪ್ರಬಲ ಸಂದೇಶಗಳು. ಈ ಸ್ಫೂರ್ತಿಯೊಂದಿಗೆ ನಾವು ಸೇವಾ ಕಾರ್ಯ ಮಾಡಿದಾಗ ಮಾತ್ರ, ಅದು ನಮ್ಮನ್ನು ಹಾಗೂ ನಮ್ಮಂದಿಗೆ ತೊಡಗಿದವರನ್ನು ಸಶಕ್ತಗೊಳಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾಜಿಕ ಕಾರ್ಯದಲ್ಲಿ ತೊಡಗಿದವರಿಗೆ ತಮ್ಮ ಅರಿವಿಗೇ ಬಾರದಂತೆ ಕ್ರಮೇಣವಾಗಿ ಅಹಂಕಾರ ಬೆಳೆಯುವ ಅಪಾಯ ಇರುತ್ತದೆ. ಈ ಕ್ಷೇತ್ರಕ್ಕೆ ಇಳಿಯುವ ಬಹುತೇಕರು ಉನ್ನತ ಆದರ್ಶಗಳೊಂದಿಗೆ ತಾವು ಕೈಗೊಳ್ಳುವ ಕಾರ್ಯದ ಮೂಲಕ ಆತ್ಮಶೋಧನೆಯಲ್ಲಿ ತೊಡಗುವ ಉದ್ದೇಶ ಹೊಂದಿರುತ್ತಾರೆ.<br /> <br /> ಆದರೆ ಈ ಹಾದಿಯಲ್ಲಿ ತಮಗೇ ಅರಿಯದಂತೆ ತಮ್ಮನ್ನು ತಾವೇ ಕಳೆದುಕೊಳ್ಳುವ ಅಪಾಯ ಇರುತ್ತದೆ.ಆದರೆ, ವಿವೇಕಾನಂದರ ಬಳಿ ಇದಕ್ಕೂ ಉತ್ತರವಿದೆ. ಈ ಸವಾಲಿನ ಬಗ್ಗೆ ಅವರು ಸಮಗ್ರವಾಗಿ ಚಿಂತಿಸಿದ್ದರು. <br /> <br /> ವೇದಿಕೆಯ ಮೇಲೆ ನಿಂತು, ಬಡಜನರೇ ನನ್ನ ಮಾತನ್ನು ಆಲಿಸಿರಿ, ನಾನು ನೀಡುವ ಈ ಐದು ಕಾಸುಗಳನ್ನು ತೆಗೆದುಕೊಳ್ಳಿ ಎಂದು ಯಾವತ್ತೂ ಹೇಳಬೇಡಿ. ಅದಕ್ಕೆ ಬದಲಾಗಿ, ಬಡಜನರು ಇರುವುದರಿಂದಲೇ ಅವರ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದೆ ಎಂದೇ ಭಾವಿಸಿರಿ ಎಂದು ಅವರು ಹೇಳಿದ್ದರು.<br /> <br /> ಸಮಾಜದೊಂದಿಗೆ ನಾವು ಹೆಚ್ಚು ಹೆಚ್ಚು ಭಾಗಿಯಾಗುತ್ತಾ, ಅದಕ್ಕೆ ನಮಗೆ ಮನ್ನಣೆ ಹೆಚ್ಚಾಗುತ್ತಾ ಹೋದಂತೆ, ನಮ್ಮ ಗಮನ `ನಮ್ಮಿಂದ ಏನು ಕಾರ್ಯ ಆಗುತ್ತಿದೆ~ ಎಂಬುದಕ್ಕಿಂತ ಹೆಚ್ಚಾಗಿ `ನಾವು ಕೆಲಸ ಮಾಡುತ್ತಿದ್ದೇವೆ~ ಎಂದು ಅಂದುಕೊಳ್ಳುವುದರತ್ತಲೇ ಕೇಂದ್ರೀಕೃತವಾಗುತ್ತದೆ. <br /> <br /> ನಮ್ಮ ಕೆಲಸ, ನಮಗೆ ಬಂದ ಪ್ರಶಸ್ತಿ ಇತ್ಯಾದಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಿ, ಮನ್ನಣೆ ಇನ್ನಷ್ಟು ಹೆಚ್ಚಾದಾಗ ನಾವು ದಿಕ್ಕುತಪ್ಪುವ ಸಾಧ್ಯತೆ ಇರುತ್ತದೆ. ನಾವು ಅಗಾಧವಾದ ರಚನಾತ್ಮಕ ಕಾರ್ಯ ಮಾಡುತ್ತಿದ್ದೇವೆ ಎಂಬ ಭ್ರಮೆ ನಮ್ಮಲ್ಲಿ ಮೊಳೆಯತೊಡಗುತ್ತದೆ.<br /> <br /> ಸಾಮಾಜಿಕ ಕಾರ್ಯದಲ್ಲಿ ತೊಡಗುವ ನಿಜವಾದ ಉದ್ದೇಶವನ್ನು ಎಷ್ಟು ಬೇಗ ಮರೆತೇಬಿಡುತ್ತೇವೆ ಎಂಬುದಕ್ಕೆ ನನ್ನ ಸ್ವಂತ ಅನುಭವವನ್ನೇ ಇಲ್ಲಿ ಹೇಳುತ್ತೇನೆ.<br /> ಸ್ವಾಮಿ ವಿವೇಕಾನಂದ ಯುವ ಆಂದೋಲನ ಸ್ಥಾಪಿಸಿ ಹಲವು ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ನನ್ನ ಅಂತರಂಗದ ಪ್ರಯಾಣವೂ ಆರಂಭವಾಗಿತ್ತು. <br /> <br /> ಹಲವು ವರ್ಷಗಳ ಕಾಲ ಈ ಸೇವಾ ಕಾರ್ಯ ನನ್ನೊಳಗಿನ ಆಧ್ಯಾತ್ಮಿಕ ವಿಕಸನದ ಬಾಹ್ಯ ಅಭಿವ್ಯಕ್ತಿಗೆ ಒಂದು ವೇದಿಕೆ ಎಂದೇ ನಾನು ಭಾವಿಸಿದ್ದೆ. ನಮ್ಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದಂತೆಯೇ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ಬಂದು, ಅದರಲ್ಲಿ ತೊಡಗಿಸಿಕೊಂಡಿದ್ದ ನಮ್ಮೆಲ್ಲರಿಗೂ ಮನ್ನಣೆಯೂ ಹೆಚ್ಚಾಗುತ್ತಾ ಹೋಯಿತು.<br /> <br /> ನಮ್ಮ ಶಾಲೆಗಳಲ್ಲಿ ನೂರಾರು ಆದಿವಾಸಿ ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಓದುತ್ತಿದ್ದಾರೆಂಬ ಹಾಗೂ ನಮ್ಮ ಆಸ್ಪತ್ರೆಗಳಿಂದ ಸಾವಿರಾರು ರೋಗಿಗಳಿಗೆ ಪ್ರಯೋಜನವಾಗುತ್ತಿದೆ ಎಂಬ ಕಾರಣಕ್ಕೆ ಸಮಾಜದಿಂದ ಶ್ಲಾಘನೆ ಜಾಸ್ತಿಯಾಗುತ್ತಿದ್ದಂತೆಯೇ ನನ್ನ ಆಂತರಿಕ ವಿಕಸನಕ್ಕೆ ಕತ್ತಲು ಕವಿಯಿತು.<br /> <br /> ನಮ್ಮ ಕಾರ್ಯದ ಬಗ್ಗೆ ದಿನಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಲೇಖನಗಳು/ ವರದಿಗಳು ಪ್ರಕಟವಾದಾಗ ಪ್ರಸಿದ್ಧಿ ಇನ್ನಷ್ಟು ಹೆಚ್ಚಾಯಿತು. ಇದೇ ಸಂದರ್ಭದಲ್ಲಿ, ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಜೇನುಕುರುಬ ಹುಡುಗನೊಬ್ಬನ ಬಗ್ಗೆ ಹಾಗೂ ನಮ್ಮ ಎಸ್ವಿಎಂಎಂ ಚಟುವಟಿಕೆಗಳ ಬಗ್ಗೆ ಪುಸ್ತಕವೊಂದನ್ನು ಬರೆದರು. ಈ ಕೃತಿಯಲ್ಲಿ ನನ್ನನ್ನು ಕೇಂದ್ರ ಪಾತ್ರದ ಪರಿವರ್ತನೆಯ ಹರಿಕಾರನೆಂಬಂತೆ ಚಿತ್ರಿಸಿದರು. <br /> <br /> ಇವೆಲ್ಲಾ ನನ್ನ ತಲೆಯನ್ನು ಹೊಕ್ಕುತ್ತಿದ್ದಂತೆ ನಾನು ನಿಧಾನವಾಗಿ, ವಿವೇಕಾನಂದರು ಪ್ರತಿಪಾದಿಸಿದ ನಿರ್ಲಿಪ್ತ ಹಾಗೂ ನಿಷ್ಕಾಮ ಸೇವಾ ತತ್ವವನ್ನು ಮರೆತೇಬಿಟ್ಟೆ. <br /> ಅಂತಹ ಸಂದರ್ಭದಲ್ಲಿ ಅದೇ ವಿವೇಕಾನಂದರು ಆಡಿದ ಬೇರೊಂದು ಮಾತು ನೆನಪಾಯಿತು. `ಕರುವಿಗೆ ಜನ್ಮ ನೀಡುವ ಹಸುವಿಗೆ ಅದಕ್ಕೆ ಹೇಗೆ ಹಾಲೂಡಿಸಬೇಕೆಂಬುದೂ ಗೊತ್ತಿರುತ್ತದೆ. <br /> <br /> ತಾನು ಸೃಷ್ಟಿಸಿದ್ದನ್ನು ಹೇಗೆ ಪೋಷಿಸಬೇಕೆಂಬುದು ದೇವರಿಗೆ ಗೊತ್ತಿರುತ್ತದೆ. ಸುತ್ತಮುತ್ತ ಏನೇನು ಆಗುತ್ತಿದೆಯೋ ಅದಕ್ಕೆಲ್ಲಾ ನೀವೇ ಕಾರಣ ಎಂದು ಭಾವಿಸಬೇಡಿ. ಅದಕ್ಕೆ ಬದಲಾಗಿ, ದೇವರು ನಿಮ್ಮನ್ನು ತನ್ನ ಒಂದು ಸಾಧನವನ್ನಾಗಿ ಆಯ್ದುಕೊಂಡು ಅವಕಾಶ ನೀಡಿರುವುದಕ್ಕಾಗಿ ಸಂತಸಪಡಿ~ ಎಂದು ಅವರು ಹೇಳುತ್ತಿದ್ದರು.<br /> <br /> ನೀವು ನಿರ್ಮಿಸಿದ ಆಸ್ಪತ್ರೆಗಳು, ಶಾಲೆಗಳು ಪ್ರವಾಹ ಬಂದು ಒಂದೇ ಕ್ಷಣದಲ್ಲಿ ಕೊಚ್ಚಿಹೋಗಿಬಿಡಬಹುದು ಅಥವಾ ಭೂಕಂಪನವಾಗಿ ನೆಲಸಮವಾಗಬಹುದು. ಆದ್ದರಿಂದ ನಿಮ್ಮ ಬಗ್ಗೆ ನೀವೇ ಅತಿಯಾಗಿ ಪ್ರಶಂಸಿಸಿಕೊಳ್ಳಬೇಡಿ. ನೀವು ಏನನ್ನು ಮಾಡುತ್ತೀರೋ ಅದು ಮುಖ್ಯವಲ್ಲ, ಅದನ್ನು ಮಾಡುವ ರೀತಿ ಮುಖ್ಯ.<br /> <br /> ಯಾವುದೇ ಉತ್ತೇಜನ ಇಲ್ಲದಿದ್ದರೂ ಸೇವೆಯಲ್ಲಿ ತೊಡಗುವುದು ಶ್ರೇಷ್ಠ ಆಧ್ಯಾತ್ಮಿಕ ಚಟುವಟಿಕೆಯ ಸ್ವರೂಪ. ಇಂತಹ ಕಾರ್ಯ ಅಪೇಕ್ಷಿಸುವ ನಿರ್ಲಿಪ್ತತೆ ಹಾಗೂ ರಾಗದ್ವೇಷ ರಾಹಿತ್ಯ ಸದಾ ನೆನಪಿನಲ್ಲಿರಲಿ ಎಂದೂ ಅವರು ಹೇಳಿದ್ದಾರೆ.<br /> <br /> ನಾನು ನನ್ನ ವಿಕಸನದ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದಾಗ, ಈ ಹೇಳಿಕೆಗಳನ್ನು ನನಗಾಗಿಯೇ ಬರೆಯಲಾಗಿದೆಯೇನೋ ಎಂದು ಭಾಸವಾಯಿತು. ಸಾಮಾಜಿಕ ಸೇವೆಯಲ್ಲಿ ತೊಡಗಿದವರಿಗೆ ಇವು ಪ್ರಬಲ ಸಂದೇಶಗಳು. ಈ ಸ್ಫೂರ್ತಿಯೊಂದಿಗೆ ನಾವು ಸೇವಾ ಕಾರ್ಯ ಮಾಡಿದಾಗ ಮಾತ್ರ, ಅದು ನಮ್ಮನ್ನು ಹಾಗೂ ನಮ್ಮಂದಿಗೆ ತೊಡಗಿದವರನ್ನು ಸಶಕ್ತಗೊಳಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>