ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆ: ಬಸವರಾಜ ಬೊಮ್ಮಾಯಿ

Published 25 ಜುಲೈ 2023, 10:36 IST
Last Updated 25 ಜುಲೈ 2023, 10:36 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಆರಂಭದಿಂದಲೂ ಗೋಚರಿಸುತ್ತಿದ್ದು, ಬಿ‌.ಕೆ. ಹರಿಪ್ರಸಾದ್ ಹೇಳಿಕೆಯಿಂದ ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಂಗಪುರ ಕಾರ್ಯತಂತ್ರದ ಕಥೆ ಹೇಳಿದ್ದಾರೆ. ಈ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂದ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಸ್ಪಷ್ಟ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರುವ ವಿಧಾನ, ಸಿಕ್ರೆಟ್ ಬ್ಯಾಲೆಟ್ ಬಳಕೆ ಮಾಡಿರುವುದು ಬಹುಮತ ಇದ್ದರೂ ಇಷ್ಟು ಸರ್ಕಸ್ ಮಾಡಿದ್ದು ಎಲ್ಲವೂ ಸರಿ ಇಲ್ಲ ಅಂತ ಆರ್ಥವಾಗುತ್ತದೆ.

ಸಿದ್ದರಾಮಯ್ಯ ಗ್ಯಾರೆಂಟಿಗಳಿಗೆ ಹಣ ನೀಡುವ ಸಲುವಾಗಿ ಅಭಿವೃದ್ಧಿಗೆ ಅನುದಾನ ಇಲ್ಲ ಅಂತ ಹೇಳಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಶಾಸಕರೇ ಬಹಿರಂಗವಾಗಿಯೇ ಹೇಳಿದ್ದಾರೆ. ಸಚಿವರುಗಳ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಸಿದ್ದರಾಮಯ್ಯ ಅರ್ಧ ಸತ್ಯ ಹೇಳಿದ್ದಾರೆ ಎಂದರು.

ಡ್ಯಾಮೇಜ್ ಕಂಟ್ರೊಲ್‌ಗೆ ಸಿಂಗಪುರ ಕಥೆ:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅವರ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯಿಂದ ಆಗಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಸಿಂಗಪುರ ತಂತ್ರದ ಬಗ್ಗೆ ಹೇಳಿದ್ದಾರೆ. ಸ್ವತಃ ಡಿ.ಕೆ ಶಿವಕುಮಾರ್ ಅವರು ಮುಂದೆ ಅವರು ತಾವು ಮಾಡುವ ಕಾರ್ಯತಂತ್ರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಇದು ಅವರಲ್ಲಿಯೆ ಸಮಾಧಾನ ಇಲ್ಲ ಎನ್ನುವುದು ತೋರಿಸಿದ್ದಾರೆ‌. ಬಿಜೆಪಿಯ ಹೈಕಮಾಂಡ್ ಈ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಲೋಚಿಸಿಲ್ಲ ಎಂದು ಹೇಳಿದರು.

ಭಿನ್ನಾಭಿಪ್ರಾಯ ಸತ್ಯ:

ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಸತ್ಯ. ಡಿ. ಕೆ. ಶಿವಕುಮಾರ್ ಸರ್ಕಾರದ ಅಸ್ಥಿರತೆಯ ಬಗ್ಗೆ ಎರಡು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದರೂ ಸಿಎಂಗೆ ಮಾಹಿತಿ ಇಲ್ಲ ಎಂದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಅಂತ ಅರ್ಥ ಎಂದು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈನ ಮುನಿ ಹತ್ಯೆಯಿಂದ ಹಿಡಿದು ನಿತ್ಯ ಕೊಲೆ ನಡೆಯುತ್ತಿವೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ನ್ಯಾಯಾಧೀಶರಿಗೆ ಅಂತಾರಾಷ್ಟ್ರೀಯ ಮಟ್ಟದ ಕೊಲೆ ಬೆದರಿಕೆ ಬರುತ್ತಿದೆ. ನ್ಯಾಯಾಧೀಶರಿಗೆ ರಕ್ಷಣೆ ಇಲ್ಲದಿದ್ದರೆ ಬೇರೆಯವರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಬಾಲಗ್ರಹ ಪೀಡೆ ಶುರುವಾಗಿದೆ

ಈ ಸರ್ಕಾರಕ್ಕೆ ಬಾಲ ಗೃಹ ಪೀಡೆ ಶುರುವಾಗಿದೆ. ಆಂತರಿಕ ಕಲಹ ಹೆಚ್ಚಾಗಿದೆ. ಈ ಸರ್ಕಾರ ಗ್ಯಾರೆಂಟಿಗಳ ಜಾರಿಗೆ ಪರಿಶಿಷ್ಟರಿಗೆ ಮೀಸಲಾದ ಹಣ ಬಳಕೆ ಮಾಡುತ್ತಿದ್ದಾರೆ. ಸುಮಾರು ₹13 ಸಾವಿರ ಕೋಟಿ ಎಸ್ಸಿಪಿ ಟಿಎಸ್ ಪಿ ಯೋಜನೆ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವರ್ಗಾಯಿಸಿದ್ದಾರೆ. ಇದು ಸಾಮಾಜಿಕ ನ್ಯಾಯದ ವಿರುದ್ದವಾಗಿದ್ದು, ಎಲ್ಲ ಸಮುದಾಯಗಳಿಗೂ ಅನ್ಯಾಯ ಮಾಡಿದಂತಾಗುತ್ತದೆ.

ಗ್ಯಾರೆಂಟಿ ಜಾರಿ ಮಾಡುವ ನೆಪದಲ್ಲಿ ನಮ್ಮ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ರೈತ ವಿದ್ಯಾನಿಧಿ, ಭೂ ರೈತಶಕ್ತಿ, ಭೂಸಿರಿ, ರೈತರಿಗೆ ನೀಡಿದ್ದ ಜೀವನ ಜ್ಯೋತಿ ವಿಮೆ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳನ್ನು ನಿಲ್ಲಿಸಿದ್ದಾರೆ‌. ಕೃಷಿ ಇಲಾಖೆಯಲ್ಲಿ₹4,500 ಕೋಟಿ, ನೀರಾವರಿ ಇಲಾಖೆಯಲ್ಲಿ ₹ 3,500 ಕೋಟಿ ಕಡಿತ ಮಾಡಿದ್ದಾರೆ.‌

ಈ ಸರ್ಕಾರ ಗ್ಯಾರೆಂಟಿಗಳನ್ನೂ ಸಂಪೂರ್ಣವಾಗಿ ಜಾರಿ ಮಾಡುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವುದರಿಂದ ಶಾಸಕರು ಅಸಮಾದಾನಗೊಂಡಿದ್ದಾರೆ.ಹೀಗಾಗಿ ಅಸಮಾಧಾನ ಸ್ಫೋ ಟಗೊಳ್ಳುತ್ತಿದೆ ಎಂದು ಹೇಳಿದರು.

ಇನ್ನು ನೈಸ್ ಅಕ್ರಮದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೈಸ್ ಅಕ್ರಮದ ಬಗ್ಗೆ ಈಗಾಗಲೇ ಸದನ ಸಮಿತಿ ನೀಡಿರುವ ವರದಿ ಆಧರಿಸಿ ಹೆಚ್ಚುವರಿ ಜಮೀನು ವಶಪಡಿಸಿಕೊಳ್ಳಬೇಕು ಅಂತ ಆಗ್ರಹಿಸಿದ್ದೇವೆ. ಅಲ್ಲದೇ ಹೆಚ್ಚಿಗೆ ಸಂಗ್ರಹಿಸಿರುವ ಟೋಲ್ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT