ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್ 2015–16’ ಫೈನಲ್ ಸ್ಪರ್ಧೆಯಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳಾದ ಪ್ರಣವ್ ಮತ್ತು ಅಭಿನವ್ ಗೆಲುವು ಸಾಧಿಸಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಬೆಂಗಳೂರು ವಲಯಮಟ್ಟ ಮತ್ತು ಫೈನಲ್ ಸ್ಪರ್ಧೆ ಆಯೋಜಿಸಲಾಗಿತ್ತು.
ಬೆಂಗಳೂರು ವಲಯಮಟ್ಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳು ಫೈನಲ್ ಸ್ಪರ್ಧೆಯಲ್ಲಿ 80 ಅಂಕಗಳೊಂದಿಗೆ ಚಾಂಪಿಯನ್ಷಿಪ್ ತಮ್ಮದಾಗಿಸಿಕೊಂಡು ಗೆಲುವಿನ ನಗೆ ಬೀರಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳಾದ ಎಸ್.ಎಸ್. ಗೌತಮ್ ಮತ್ತು ಅಕ್ಷಯ್ ಭಾರದ್ವಾಜ್ 41 ಅಂಕ ಪಡೆದು ಎರಡನೇ ಸ್ಥಾನ ಪಡೆದರೆ, 40 ಅಂಕ ಗಳಿಸಿದ ಹೊಸನಗರದ ಶ್ರೀ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳಾದ ಕೆ.ಪಿ. ಹೇಮಂತ್ ಮತ್ತು ಸಚಿನ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.
ಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಫೈನಲ್ ಸ್ಪರ್ಧೆಯ ಕ್ವಿಜ್ ಮಾಸ್ಟರ್ ಆಗಿದ್ದರು. ವಿನಯ್ ಮೊದಲಿಯಾರ್ ವಲಯಮಟ್ಟದ ಕ್ವಿಜ್ ಮಾಸ್ಟರ್ ಆಗಿ ಭಾಗವಹಿಸಿದ್ದರು.
ವಿಜೇತರ ವಿವರ ಮೊದಲನೇ ಬಹುಮಾನ:
ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆ– ಪ್ರಣವ್, ಅಭಿನವ್ (80 ಅಂಕ) ತಂಡದ ಇಬ್ಬರಿಗೂ ತಲಾ ₹25 ಸಾವಿರ ನಗದು.
ಎರಡನೇ ಬಹುಮಾನ:
ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ– ಎಸ್.ಎಸ್. ಗೌತಮ್, ಅಕ್ಷಯ್ ಭಾರದ್ವಾಜ್ (41 ಅಂಕ) ತಂಡದ ಇಬ್ಬರಿಗೂ ತಲಾ ₹10 ಸಾವಿರ ಬೆಲೆಯ ಟ್ಯಾಬ್.
ಮೂರನೇ ಬಹುಮಾನ:
ಹೊಸನಗರದ ಶ್ರೀ ರಾಮಕೃಷ್ಣ ಶಾಲೆ– ಕೆ.ಪಿ. ಹೇಮಂತ್ ಮತ್ತು ಸಚಿನ್ (40 ಅಂಕ) ತಂಡದ ಇಬ್ಬರಿಗೂ ತಲಾ ₹5 ಸಾವಿರ ಬೆಲೆಯ ಮೊಬೈಲ್ ಫೋನ್.
ನಾಲ್ಕನೇ ಬಹುಮಾನ:
ಮಂಗಳೂರಿನ ಶಾರದಾ ವಿದ್ಯಾಲಯ– ಪ್ರಜ್ಞಾ ಹೆಬ್ಬಾರ್, ಸಮರ್ಥ ಎಂ. ಭಟ್ (20 ಅಂಕ) ತಂಡದ ಇಬ್ಬರಿಗೂ ತಲಾ ₹2 ಸಾವಿರ ಬೆಲೆಯ ಗಿಫ್ಟ್ ವೋಚರ್.