<p>ಇಟಲಿಯ ಕ್ರೆಮೊನಾ ಪ್ರಾಂತ ಕೃಷಿ ಮತ್ತು ಹೈನು ಉದ್ಯಮಕ್ಕೆ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಬದಲಾವಣೆ ಗೋಚರಿಸುತ್ತಿದೆ. ಸ್ಥಳೀಯ ಟೆಲಿಫೋನ್ ಡಿರೆಕ್ಟರಿಯಲ್ಲಿ ಸಾಮಾನ್ಯ ಇಟಾಲಿಯನ್ ಅಡ್ಡ ಹೆಸರುಗಳಾದ `ಫೆರಾರಿ ಮತ್ತು ಗಲ್ಲಿ~ಗಳ ಜತೆಗೆ ಈಗ ಗಣನೀಯ ಪ್ರಮಾಣದಲ್ಲಿ `ಸಿಂಗ್~ಗಳನ್ನು ಕಾಣಬಹುದು.<br /> <br /> ಕಳೆದ ಎರಡು ದಶಕಗಳಲ್ಲಿ ಇಟಾಲಿಯನ್ ಕೃಷಿಯ ಹೃದಯ ಭಾಗವೆಂದೇ ಪರಿಗಣಿಸಲಾಗುವ ಈ ಪ್ರಾಂತದ ಕೃಷಿ ಕ್ಷೇತ್ರದಲ್ಲಿ ಪಂಜಾಬಿ ವಲಸೆಗಾರರು `ಬರ್ಗ್ಮಿನಿ~ಗಳಾಗಿ (ಸ್ಥಳೀಯ ಭಾಷೆಯಲ್ಲಿ ಪಶುಪಾಲನಾ ಡೇರಿ ಉದ್ಯೋಗಿಗಳು) ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.<br /> <br /> ಇಲ್ಲಿನ ಪೊ ಕಣಿವೆ ಇಡೀ ಇಟಲಿಯಲ್ಲೇ ವಿಶಿಷ್ಟವಾದ ಮತ್ತು ಬಹು ಬೇಡಿಕೆಯ `ಗ್ರಾನಾ ಪಡಾನೊ~ (ಸ್ಪಗೆಟ್ಟಿ ಖಾದ್ಯದ ಮೇಲೆ ಹಚ್ಚುವ ಗಟ್ಟಿಯಾದ ಟಾಪರ್) ಉತ್ಪಾದನೆಗೆ ಹೆಸರುವಾಸಿ. ಪಂಜಾಬಿ ವಲಸೆ ನೌಕರರೇನಾದರೂ ಮುಷ್ಕರ ಮಾಡಿದರೆ ಗ್ರಾನಾ ಪಡಾನೊ ತಯಾರಿಕೆಯನ್ನೇ ನಿಲ್ಲಿಸಬೇಕಾದೀತು ಎಂದು ಹೇಳುವಷ್ಟರಮಟ್ಟಿಗೆ ಅವರು ಇಲ್ಲಿ ಅನಿವಾರ್ಯ.<br /> <br /> ಈ ಮಾತನ್ನು ಇಟಲಿಯ ಅತಿ ದೊಡ್ಡ ಕೃಷಿ ಸಂಸ್ಥೆ `ಕೋಲ್ಡಿರೆಟಿ~ಯ ಕ್ರೆಮೊನಾ ಘಟಕದ ಅಧ್ಯಕ್ಷ ಸೈಮನ್ ಸೊಫ್ನೆಲ್ಲಿ ಕೂಡ ಒಪ್ಪುತ್ತಾರೆ. `ಅವರಿಲ್ಲದೆ ನಮ್ಮ ಕೃಷಿ ಮತ್ತು ಹೈನುಗಾರಿಕೆ ಮುಂದೆ ಸಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಅವರನ್ನು ನಾವು ಅವಲಂಬಿಸಿದ್ದೇವೆ~ ಎಂದು ಹೇಳುತ್ತಾರೆ. ಈ ಪ್ರಾಂತದಲ್ಲಿ ಇಡೀ ಇಟಲಿಯ ಶೇ 10 ರಷ್ಟು ಅಂದರೆ ಪ್ರತಿ ವರ್ಷ 10 ಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತದೆ.<br /> <br /> ಭಾರತೀಯರು ಅದರಲ್ಲೂ ಬಹುಪಾಲು ಪಂಜಾಬಿ ವಲಸೆಗಾರರು ಮೊದಲು ಇಟಲಿಗೆ ಬಂದದ್ದು ಡೇರಿ ಉದ್ಯಮದಲ್ಲಿನ ಸ್ಥಳೀಯ ನೌಕರರು ನಿವೃತ್ತಿಯಾಗುತ್ತಿದ್ದ ಸಂದರ್ಭದಲ್ಲಿ. `ವಲಸೆಗಾರರು ಬಂದು ನಮ್ಮ ಅರ್ಥ ವ್ಯವಸ್ಥೆ ಕಾಪಾಡಿದರು. ಇಲ್ಲದೆ ಹೋದರೆ ನಮ್ಮದು ನಾಯಿಪಾಡಾಗುತ್ತಿತ್ತು. ಏಕೆಂದರೆ ನಮ್ಮ ಯುವಕರು ಹಸುಗಳ ಆರೈಕೆ, ಹೈನುಗಾರಿಕೆ ಕೆಲಸ ಮಾಡಲು ತಯಾರಿಲ್ಲ~ ಎಂದು ನೆನಪಿಸಿಕೊಳ್ಳುತ್ತಾರೆ ಪ್ರೆಸಿನಾ ಕ್ರೆಮಾನೀಸ್ ಪಟ್ಟಣದ ಮೇಯರ್ ಡಲಿಡೊ ಮಲಾಗ್ಗಿ. <br /> <br /> `ಇಲ್ಲಿ ಡೇರಿ ಉದ್ಯಮದ ಬಹುಭಾಗ ಈಗ ಯಂತ್ರಗಳಿಂದಲೇ ನಡೆದರೂ ವರ್ಷದ 365 ದಿನವೂ ಕಾರ್ಮಿಕರ ಅಗತ್ಯ ಇದ್ದೇ ಇದೆ. ದಿನಕ್ಕೆ ತಲಾ ನಾಲ್ಕು ತಾಸುಗಳ ಎರಡು ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಮಯಕ್ಕೆ ಹೊಂದಿಕೊಳ್ಳಲು ನಮ್ಮ ಯುವಜನ ತಯಾರಿಲ್ಲ. <br /> <br /> ನಮ್ಮವರಿಗೆ ಏನಿದ್ದರೂ ವಾರಾಂತ್ಯ ರಜೆ, ಸಂಜೆ ಹೊತ್ತು ಆರಾಮವಾಗಿರುವ ಫ್ಯಾಕ್ಟರಿ ಕೆಲಸವೇ ಬೇಕು. ಇದು ವಲಸೆಗಾರರಿಗೂ ಗೊತ್ತು. ಅದಕ್ಕಾಗಿಯೇ ನಮ್ಮ ಯುವಕರು ಒಲ್ಲದ ಕೆಲಸವನ್ನು ಅವರು ಮಾಡುತ್ತಿದ್ದಾರೆ~ ಎನ್ನುತ್ತಾರೆ ಡಲಿಡೊ.<br /> <br /> ಇಪ್ಪತ್ತೈದು ವರ್ಷಗಳ ಹಿಂದೆ ಇಟಲಿಗೆ ವಲಸೆ ಬಂದ ಜಸವಿಂದರ್ ದುಹ್ರಾ ಅವರನ್ನು ಪ್ರಶ್ನಿಸಿದರೆ `ಹೌದು ಇದು ಹೈನುಗಾರಿಕೆ ನಾಡು. ನಾವೆಲ್ಲ ಭಾರತದ ನಮ್ಮ ಮನೆಯಲ್ಲಿ ಹಸು ಕರು ಸಾಕಿ ಹೈನುಗಾರಿಕೆ ಮಾಡಿದವರೇ. ಹೀಗಾಗಿ ಇಲ್ಲಿ ಈ ಕೆಲಸ ನಮಗೇನೂ ಅಪರಿಚಿತ ಎನಿಸಿಲ್ಲ~ ಎಂದು ಹೇಳುತ್ತಾರೆ. ಅವರು ಬಂದ ಆರಂಭದಲ್ಲಿ `ಬರ್ಗ್ಮಿನಿ~ ಆಗಿದ್ದರು. ಈಗ ಇಟಲಿಯ ಪ್ರಸಿದ್ಧ ಚೀಸ್ ತಯಾರಿಕಾ ಕಂಪೆನಿಯಲ್ಲಿ ಕೆಲಸಗಾರ.<br /> <br /> ಈ ಪ್ರಾಂತದ ಡೇರಿಗಳಲ್ಲಿ ಕೆಲಸ ಮಾಡುವ ಭಾರತೀಯ ವಲಸೆಗಾರರ ಅಧಿಕೃತ ಅಂಕಿಸಂಖ್ಯೆ ಲಭ್ಯವಿಲ್ಲ. ಆದರೆ ಇಲ್ಲಿನ ಹೊಲ ಗದ್ದೆಗಳಲ್ಲಿ ದುಡಿಯುವ ಸುಮಾರು ಮೂರು ಸಾವಿರ ಕೃಷಿ ಕಾರ್ಮಿಕರಲ್ಲಿ ಒಂದು ಸಾವಿರದಷ್ಟು ಭಾರತೀಯರು. <br /> <br /> <strong>ಗುರುದ್ವಾರ ಮತ್ತು ತಕರಾರು</strong><br /> ಕಳೆದ ತಿಂಗಳು ಇಲ್ಲಿ ಶ್ರೀ ಕಲಗಿದಾರ್ ಸಾಹೀಬ್ ಗುರುದ್ವಾರ ಆರಂಭವಾಯಿತು. ಇದು 600 ಭಕ್ತರು ಹಿಡಿಸುವಷ್ಟು ವಿಶಾಲವಾಗಿದೆ. ಆದರೆ ಅಂದು ವಾಸ್ತವವಾಗಿ ಇದರ ಆರು ಪಟ್ಟು ಜನ ಪೂಜೆ ಯಲ್ಲಿ ಭಾಗವಹಿಸಿದ್ದರು. <br /> <br /> ಯುರೋಪ್ನ ಈ ಭಾಗದಲ್ಲಿ ಅತ್ಯಂತ ದೊಡ್ಡ ಗುರುದ್ವಾರ ಎಂಬ ಕೀರ್ತಿಯೂ ಇದಕ್ಕೆ ಪ್ರಾಪ್ತವಾಗಿದೆ. ಇದರ ಹೊರತಾಗಿ ದೊಡ್ಡ ದೊಡ್ಡ ಕೋಳಿ ಸಾಕಣೆ ಕೇಂದ್ರಗಳು, ಗೋದಾಮುಗಳು ಇರುವಲ್ಲೆಲ್ಲ ಸಿಖ್ ಮಂದಿರಗಳನ್ನು ಕಾಣಬಹುದು.<br /> <br /> ಬಿಳಿ ಬಣ್ಣದ ಗುರುದ್ವಾರ ನಿರ್ಮಾಣದ ಹಾದಿ ಸುಲಭವಾಗಿರಲಿಲ್ಲ. ಪಕ್ಕದ ಮುನಿಸಿಪಾಲಿಟಿ ಮೊದಲು ಪರವಾನಗಿ ನೀಡಿ ನಂತರ ವಾಪಸ್ ಪಡೆದಿತ್ತು. <br /> <br /> ಗುರುದ್ವಾರ ನಿರ್ಮಾಣ ವಿಷಯ ರಾಜಕೀಯ ವಿವಾದಕ್ಕೆ ತಿರುಗಿದ್ದೇ ಇದಕ್ಕೆ ಕಾರಣ. ನಂತರ ಇನ್ನೊಂದು ಸ್ಥಳವನ್ನು ಗುರುತಿಸಲಾಯಿತು. `ಒಂದು ದಶಕಕ್ಕೂ ಹೆಚ್ಚು ಕಾಲ ನೌಕರಶಾಹಿ ಸಿಖ್ ಭಕ್ತರನ್ನು ಸತಾಯಿಸಿತು. ಅದೆಲ್ಲವನ್ನೂ ಪರಿಹರಿಸಿಕೊಂಡು ಚಂದಾ ಸಂಗ್ರಹಿಸಿ, ಕಡಿಮೆ ಬಿದ್ದ ಹಣಕ್ಕೆ ಬ್ಯಾಂಕ್ನಲ್ಲಿ ಸಾಲ ಎತ್ತಿ ಸುಮಾರು 30 ಲಕ್ಷ ಯುರೋ ಕೊಟ್ಟು ಈ ಜಾಗ ಕೊಂಡುಕೊಳ್ಳಲಾಯಿತು.<br /> <br /> ಗುರುದ್ವಾರದ ಎದುರು ಇರಬೇಕಾದ ಕಾರಂಜಿ ನಿರ್ಮಾಣ ಸಾಧ್ಯವಾಗಿಲ್ಲ. ಚಿನ್ನದ ತಗಡಿನ ವಿಶಿಷ್ಟ ಗೋಪುರಗಳೂ ಇಲ್ಲ. ಇಲ್ಲಿನ ಮಂಜಿನ ಹವಾಮಾನ ಇದಕ್ಕೆ ಕಾರಣ. ಆದರೂ ಪರ್ಯಾಯ ನಿರ್ಮಾಣ ಸಾಮಗ್ರಿಗಳ ಬಳಕೆ ಸಾಧ್ಯವೇ ಎಂಬ ಪರಿಶೀಲನೆ ನಡೆದಿದೆ ಎನ್ನುತ್ತಾರೆ ಮೇಯರ್ ಮಲಾಗ್ಗಿ.<br /> <br /> ಗುರುದ್ವಾರ ನಿರ್ಮಾಣಕ್ಕೆ ಮೇಯರ್ ಅವರ ಬಲವಾದ ಬೆಂಬಲ ಇತ್ತು. ಪ್ರೆಸಿನಾ ಕ್ರೆಮಾನೀಸ್ ಪಟ್ಟಣ ಪ್ರವೇಶಿಸುವ ಸ್ಥಳದಲ್ಲೇ `ಇಲ್ಲಿ ಜನಾಂಗೀಯ ಭೇದಭಾವ ಇಲ್ಲ~ ಎಂಬ ದೊಡ್ಡ ಫಲಕ ಸ್ವಾಗತಿಸುತ್ತದೆ. ಆದರೆ ಸ್ಥಳೀಯ ರಾಜಕಾರಣಿಗಳ ತಕರಾರಂತೂ ಇದ್ದೇ ಇತ್ತು. <br /> <br /> ವಲಸೆ ವಿರೋಧಿ ಸಂಘಟನೆಗಳಿಗೆ ಹೆಚ್ಚು ಹತ್ತಿರವಾದ ನಾರ್ದನ್ ಲೀಗ್ ಪಕ್ಷದವರು ಬಹಳಷ್ಟು ವಿರೋಧ ಮಾಡಿದರು. ಕಟ್ಟಾ ಬಲಪಂಥೀಯ `ಫೋರ್ಜಾ ನೊವಾ~ ಪಾರ್ಟಿ ಕಾರ್ಯಕರ್ತರ ಒಂದು ಸಣ್ಣ ಗುಂಪು ಗುರುದ್ವಾರ ಆರಂಭೋತ್ಸವದ ಹೊತ್ತಿನಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿತ್ತು.<br /> <br /> ಗುರುದ್ವಾರ ನಿರ್ಮಾಣಕ್ಕೆ ವಿನಾಕಾರಣ ಪದೇಪದೇ ಅಡ್ಡಿ ಮಾಡಿದವರಲ್ಲಿ ಕ್ರೆಮೊನಾ ಪ್ರಾಂತೀಯ ಮಂಡಳಿಯ ನಾರ್ದನ್ ಲೀಗ್ ಪಾರ್ಟಿ ಸದಸ್ಯ ಮ್ಯಾನುವಲ್ ಗೆಲ್ಮಿನಿ ಮುಖ್ಯ ವ್ಯಕ್ತಿ. `ಸಂಪ್ರದಾಯವಾದಿ ಸಿಖ್ ಹಿರಿಯರು ಕೈಯಲ್ಲಿ ಸದಾ ಹಿಡಿದು ಕೊಂಡು ಸಂಚರಿಸುವ ಕಿರ್ಪಾನ್ (ಧಾರ್ಮಿಕ ಖಡ್ಗ) ಬಗ್ಗೆ ನನ್ನ ತಕರಾರಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಅದೊಂದು ಆಯುಧ. ಅದನ್ನು ಇಟ್ಟುಕೊಂಡು ಮುಕ್ತವಾಗಿ ತಿರುಗಾಡಲು ಬಿಡಬಾರದು~ ಎಂಬುದು ಅವರ ವಾದ.<br /> <br /> ಮಂದಿರದಲ್ಲಿ ಪಂಜಾಬಿ ಭಾಷೆ ಬಳಕೆಗೂ ಅವರ ತಕರಾರಿದೆ. `ವಲಸೆಗಾರರು ಇರುವುದು ಲೊಂಬಾರ್ಡಿ ಪಟ್ಟಣದಲ್ಲಿ. ಸಾರ್ವಜನಿಕ ಸ್ಥಳದಲ್ಲಿ ಅವರ ಭಾಷೆಯಲ್ಲೇ ಮಾತನಾಡಲು ಅವರಿಗೆ ಅವಕಾಶ ಕೊಟ್ಟರೆ ಭಾವೈಕ್ಯತೆ ಮೂಡುವುದಾದರೂ ಹೇಗೆ~ ಎಂದು ಗೆಲ್ಮಿನಿ ಪ್ರಶ್ನಿಸುತ್ತಾರೆ.<br /> <br /> ಆದರೂ ವಲಸೆ ಬಂದ ಭಾರತೀಯರು ಬರ್ಗಮನಿಗಳಾಗಿ ಕೆಲಸ ಮಾಡುವುದನ್ನು ನಾರ್ದನ್ ಲೀಗ್ ಪಾರ್ಟಿ ಬಹಿರಂಗವಾಗಿ ಯಂತೂ ವಿರೋಧಿಸುತ್ತಿಲ್ಲ. `ನಮ್ಮ ಕಾಯ್ದೆಗಳಿವೆ ಗೌರವಕೊಟ್ಟು ಕಾನೂನಿನ ಪ್ರಕಾರ ಇಲ್ಲಿದ್ದರೆ ಮತ್ತು ಇಟಾಲಿಯನ್ ಭಾಷೆ ಕಲಿತರೆ ನಮ್ಮದೇನೂ ತಕರಾರಿಲ್ಲ~ ಎಂದು ಅವರು ಹೇಳುತ್ತಾರೆ.<br /> <br /> ಹನ್ನೆರಡು ವರ್ಷಗಳ ಹಿಂದೆ ಇಟಲಿಯಲ್ಲಿ ಕಾಲಿಟ್ಟಾಗ ದಿಲ್ಬಾಗ್ ಸಿಂಗ್ಗೆ 14ರ ಹರೆಯ. ಆತ ಮಾಂಟುವಾ ಸಮೀಪದ ನೊಗಾರಾದ ನಿವಾಸಿ. ಸ್ಥಳೀಯ ಭಾಷೆಯನ್ನು ಅದೇ ಉಚ್ಚರಣೆ ಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾನೆ. `ನಾವು ಇಲ್ಲಿ ಕೆಲಸಕ್ಕೆ ಬಂದವರು. ಶಾಂತಿ ಸೌಹಾರ್ದದಿಂದ ಬದುಕಲು ಬಯಸುತ್ತೇವೆ~ ಎನ್ನುವ ಆತ `ಭಾರತೀಯ ವಲಸೆಗಾರರ ಬಗ್ಗೆ ಇಟಾಲಿಯನ್ನರು ತಿಳಿದುಕೊಳ್ಳಲಿ~ ಎಂಬ ಮಹದಾಸೆಯಿಂದ ಇಟಲಿ ಸಿಖ್ರ ಕುರಿತ ವೆಬ್ಸೈಟ್ ನಡೆಸುತ್ತಿದ್ದಾನೆ.<br /> <br /> ಇಟಲಿಯ ವ್ಯವಸಾಯ ಕ್ಷೇತ್ರದಲ್ಲಿ ಸುಮಾರು 16 ಸಾವಿರ ಭಾರತೀಯರು ಕಾಯ್ದೆಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಲ್ಯಾಟಿಯಂ ಪ್ರಾಂತ ಕೂಡ ಅವರನ್ನು ಆಕರ್ಷಿಸುತ್ತಿದೆ. ಇಲ್ಲಿ ಕೃಷಿ ಹಂಗಾಮಿನಲ್ಲಿ ಬಂದು ದುಡಿಯತೊಡಗಿದ್ದಾರೆ.<br /> <br /> <strong>ಶೋಷಣೆ</strong><br /> ರೋಮ್ನಿಂದ ಬರೀ 100 ಕಿಮಿ ಒಳಗೆ ಹೋದರೂ ಸಾಕು. ಬಹಳಷ್ಟು ಜನರಿಗೆ ಅಪರಿಚಿತವಾದ ಇನ್ನೊಂದು ಲೋಕವೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎಂಬುದು ಹೆಸರಾಂತ ಸಾಕ್ಷ್ಯಚಿತ್ರ ನಿರ್ಮಾಪಕಿ ಪೆಟ್ರಿಷಿಯಾ ಸಂಟನ್ಗೆಲಿ ಹೇಳುವ ಕಿವಿಮಾತು. <br /> ಲಾಟಿನಾ ಪ್ರಾಂತದಲ್ಲಿನ ಸಿಖ್ ವಲಸೆಗಾರರ ಬಗ್ಗೆ ಅವರು ತೆಗೆದ ಚಿತ್ರ `ವಿಸಿಟ್ ಇಂಡಿಯಾ~ ಮುಂದಿನ ತಿಂಗಳು ತೆರೆ ಕಾಣಲಿದೆ. ವಲಸೆ ಬಂದವರು ಅನುಭವಿಸುತ್ತಿರುವ ತೊಂದರೆ, ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಇದರಲ್ಲಿ ವಿವರಗಳಿವೆ.<br /> <br /> `ಮನೆಯಿಲ್ಲದ ನಿರಾಶ್ರಿತರಂತೆ ಅನೇಕ ಸಲ ಅವರನ್ನು ಸಣ್ಣ ಕ್ಯಾಂಪ್ಗಳಲ್ಲಿ ಇಟ್ಟು ದುಡಿಸಿಕೊಳ್ಳಲಾಗುತ್ತದೆ. ಕೊಡುವ ಸಂಬಳವೂ ಕಡಿಮೆ. 12 ತಾಸಿನ ಕೆಲಸಕ್ಕೆ ಪ್ರತಿ ತಾಸಿಗೆ 2 ರಿಂದ 4 ಯುರೊ ಮಾತ್ರ. ಆದರೆ ನನ್ನ ಮನ ಕಲಕಿದ ಸಂಗತಿಯೆಂದರೆ ಇಷ್ಟೆಲ್ಲ ಕಷ್ಟಗಳ ನಡುವೆಯೂ ಅವರಿಗೆ ಬದುಕಿನ ಬಗ್ಗೆ ಆಶಾಭಾವನೆಯಿದೆ, ಭವಿಷ್ಯ ಉಜ್ವಲವಾಗುವ ಭರವಸೆಯಿದೆ~ ಎಂದಾಕೆ ಹೇಳುತ್ತಾರೆ.<br /> <br /> ದೇಶದ ಉತ್ತರ ಭಾಗದಲ್ಲಿ ಪರವಾಗಿಲ್ಲ. ಅಲ್ಲಿನ ವಲಸೆಗಾರರಿಗೆ ಇಷ್ಟೊಂದು ತೊಂದರೆ ಮೇಲ್ನೋಟಕ್ಕಂತೂ ಇಲ್ಲ. ಅನೇಕರು ಇಟಾಲಿಯನ್ ಪೌರತ್ವ ಪಡೆದಿದ್ದಾರೆ. ಮನೆ ಮಾಡಿದ್ದಾರೆ. ಕುಟುಂಬ ವರ್ಗವನ್ನು ಊರಿಂದ ಕರೆಸಿಕೊಂಡಿದ್ದಾರೆ.<br /> <br /> ರಾಷ್ಟ್ರೀಯ ಅಂಕಿಸಂಖ್ಯಾ ಏಜೆನ್ಸಿಯ ಮಾಹಿತಿ ಪ್ರಕಾರ ಭಾರತೀಯ ವಲಸೆಗಾರರಲ್ಲಿ ಶೇ 40ರಷ್ಟು ಮಹಿಳೆಯರು. ಆದರೆ ಇವರಲ್ಲಿ ಕೆಲಸ ಇರುವವರ ಸಂಖ್ಯೆ ತುಂಬ ಕಡಿಮೆ. ಅವರನ್ನೂ ಮುಖ್ಯವಾಹಿನಿಗೆ ತರಲು ಕಾರ್ಮಿಕ ಸಂಘಗಳು ಅವರಿಗೆ ವಿವಿಧ ಪಟ್ಟಣಗಳಲ್ಲಿ ಭಾಷೆ, ಉದ್ಯೋಗ ತರಬೇತಿ ಆಯೋಜಿಸುತ್ತಿವೆ. <br /> <br /> ಅನೇಕ ವಲಸೆ ಕುಟುಂಬಗಳಿಗೆ ಇಲ್ಲಿಯೇ ಮಕ್ಕಳಾಗಿವೆ. `ಆ ಮಕ್ಕಳು ಕಷ್ಟಪಟ್ಟು ಓದುತ್ತಾರೆ. ನಮ್ಮ ಮಕ್ಕಳಂತೆ ಪಡಪೋಸಿಗಳಲ್ಲ. ಆದರೆ ಅವಕ್ಕೆ ಅವರ ಅಪ್ಪ ಅಮ್ಮನಂತೆ ಹೊಲದಲ್ಲಿ, ಡೇರಿಯಲ್ಲಿ ಕಾರ್ಮಿಕರಾಗಿ ದುಡಿಯುವ ಉದ್ದೇಶ ಇಲ್ಲ. <br /> <br /> ಉನ್ನತ ವ್ಯಾಸಂಗ ಮಾಡಿ ಮುಂದೆ ಸಾಗಲು ಬಯಸುತ್ತಾರೆ~ ಎಂದು ಮೆಚ್ಚುಗೆಯಿಂದ ಹೇಳುತ್ತಾರೆ 1700 ಆಕಳುಗಳ ಡೇರಿ ಮಾಲೀಕ ಗಿಯಾನ್ಲುಗಿ ಫಿಯಾಮೆನಿ. ಅವರ ಹತ್ತಿರ ಏಳು ಭಾರತೀಯ ಕೆಲಸಗಾರರಿದ್ದಾರೆ.<br /> <br /> ಅಲ್ಲಿ ಕೆಲಸ ಮಾಡುವ ಪ್ರೇಮ್ಸಿಂಗ್ ಇಟಲಿಗೆ ಬಂದದ್ದು 1995ರಲ್ಲಿ. ನಂತರ ಆತನ ಅನೇಕ ಸಂಬಂಧಿಗಳೂ ಬಂದರು. ಈ ದಂಪತಿಗೆ ಮೂವರು ಮಕ್ಕಳು. ಶಾಲೆಯಲ್ಲಿ ಓದುತ್ತಿದ್ದಾರೆ. `ಅವರು ಇಟಲಿಯವರೇ ಆಗಿಬಿಟ್ಟಿದ್ದಾರೆ. <br /> <br /> ನನಗಂತೂ ವಾಪಸ್ ಭಾರತದಲ್ಲಿನ ನನ್ನೂರಿಗೆ ಹೋಗುವ ಆಲೋಚನೆ ಇಲ್ಲ. ನಾವು ಇಲ್ಲಿ ಬದುಕು ಕಂಡುಕೊಂಡಿದ್ದೇವೆ. ಇದೇ ನಮ್ಮ ಮನೆ~ ಎನ್ನುವ ಅವರ ಮಾತು ಬಹುಪಾಲು ಭಾರತೀಯ ವಲಸೆಗಾರರ ಅಭಿಪ್ರಾಯವನ್ನೇ ಧ್ವನಿಸುತ್ತದೆ. <br /> <strong>ದಿ ನ್ಯೂಯಾರ್ಕ್ ಟೈಂಸ್ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಟಲಿಯ ಕ್ರೆಮೊನಾ ಪ್ರಾಂತ ಕೃಷಿ ಮತ್ತು ಹೈನು ಉದ್ಯಮಕ್ಕೆ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಬದಲಾವಣೆ ಗೋಚರಿಸುತ್ತಿದೆ. ಸ್ಥಳೀಯ ಟೆಲಿಫೋನ್ ಡಿರೆಕ್ಟರಿಯಲ್ಲಿ ಸಾಮಾನ್ಯ ಇಟಾಲಿಯನ್ ಅಡ್ಡ ಹೆಸರುಗಳಾದ `ಫೆರಾರಿ ಮತ್ತು ಗಲ್ಲಿ~ಗಳ ಜತೆಗೆ ಈಗ ಗಣನೀಯ ಪ್ರಮಾಣದಲ್ಲಿ `ಸಿಂಗ್~ಗಳನ್ನು ಕಾಣಬಹುದು.<br /> <br /> ಕಳೆದ ಎರಡು ದಶಕಗಳಲ್ಲಿ ಇಟಾಲಿಯನ್ ಕೃಷಿಯ ಹೃದಯ ಭಾಗವೆಂದೇ ಪರಿಗಣಿಸಲಾಗುವ ಈ ಪ್ರಾಂತದ ಕೃಷಿ ಕ್ಷೇತ್ರದಲ್ಲಿ ಪಂಜಾಬಿ ವಲಸೆಗಾರರು `ಬರ್ಗ್ಮಿನಿ~ಗಳಾಗಿ (ಸ್ಥಳೀಯ ಭಾಷೆಯಲ್ಲಿ ಪಶುಪಾಲನಾ ಡೇರಿ ಉದ್ಯೋಗಿಗಳು) ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.<br /> <br /> ಇಲ್ಲಿನ ಪೊ ಕಣಿವೆ ಇಡೀ ಇಟಲಿಯಲ್ಲೇ ವಿಶಿಷ್ಟವಾದ ಮತ್ತು ಬಹು ಬೇಡಿಕೆಯ `ಗ್ರಾನಾ ಪಡಾನೊ~ (ಸ್ಪಗೆಟ್ಟಿ ಖಾದ್ಯದ ಮೇಲೆ ಹಚ್ಚುವ ಗಟ್ಟಿಯಾದ ಟಾಪರ್) ಉತ್ಪಾದನೆಗೆ ಹೆಸರುವಾಸಿ. ಪಂಜಾಬಿ ವಲಸೆ ನೌಕರರೇನಾದರೂ ಮುಷ್ಕರ ಮಾಡಿದರೆ ಗ್ರಾನಾ ಪಡಾನೊ ತಯಾರಿಕೆಯನ್ನೇ ನಿಲ್ಲಿಸಬೇಕಾದೀತು ಎಂದು ಹೇಳುವಷ್ಟರಮಟ್ಟಿಗೆ ಅವರು ಇಲ್ಲಿ ಅನಿವಾರ್ಯ.<br /> <br /> ಈ ಮಾತನ್ನು ಇಟಲಿಯ ಅತಿ ದೊಡ್ಡ ಕೃಷಿ ಸಂಸ್ಥೆ `ಕೋಲ್ಡಿರೆಟಿ~ಯ ಕ್ರೆಮೊನಾ ಘಟಕದ ಅಧ್ಯಕ್ಷ ಸೈಮನ್ ಸೊಫ್ನೆಲ್ಲಿ ಕೂಡ ಒಪ್ಪುತ್ತಾರೆ. `ಅವರಿಲ್ಲದೆ ನಮ್ಮ ಕೃಷಿ ಮತ್ತು ಹೈನುಗಾರಿಕೆ ಮುಂದೆ ಸಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಅವರನ್ನು ನಾವು ಅವಲಂಬಿಸಿದ್ದೇವೆ~ ಎಂದು ಹೇಳುತ್ತಾರೆ. ಈ ಪ್ರಾಂತದಲ್ಲಿ ಇಡೀ ಇಟಲಿಯ ಶೇ 10 ರಷ್ಟು ಅಂದರೆ ಪ್ರತಿ ವರ್ಷ 10 ಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತದೆ.<br /> <br /> ಭಾರತೀಯರು ಅದರಲ್ಲೂ ಬಹುಪಾಲು ಪಂಜಾಬಿ ವಲಸೆಗಾರರು ಮೊದಲು ಇಟಲಿಗೆ ಬಂದದ್ದು ಡೇರಿ ಉದ್ಯಮದಲ್ಲಿನ ಸ್ಥಳೀಯ ನೌಕರರು ನಿವೃತ್ತಿಯಾಗುತ್ತಿದ್ದ ಸಂದರ್ಭದಲ್ಲಿ. `ವಲಸೆಗಾರರು ಬಂದು ನಮ್ಮ ಅರ್ಥ ವ್ಯವಸ್ಥೆ ಕಾಪಾಡಿದರು. ಇಲ್ಲದೆ ಹೋದರೆ ನಮ್ಮದು ನಾಯಿಪಾಡಾಗುತ್ತಿತ್ತು. ಏಕೆಂದರೆ ನಮ್ಮ ಯುವಕರು ಹಸುಗಳ ಆರೈಕೆ, ಹೈನುಗಾರಿಕೆ ಕೆಲಸ ಮಾಡಲು ತಯಾರಿಲ್ಲ~ ಎಂದು ನೆನಪಿಸಿಕೊಳ್ಳುತ್ತಾರೆ ಪ್ರೆಸಿನಾ ಕ್ರೆಮಾನೀಸ್ ಪಟ್ಟಣದ ಮೇಯರ್ ಡಲಿಡೊ ಮಲಾಗ್ಗಿ. <br /> <br /> `ಇಲ್ಲಿ ಡೇರಿ ಉದ್ಯಮದ ಬಹುಭಾಗ ಈಗ ಯಂತ್ರಗಳಿಂದಲೇ ನಡೆದರೂ ವರ್ಷದ 365 ದಿನವೂ ಕಾರ್ಮಿಕರ ಅಗತ್ಯ ಇದ್ದೇ ಇದೆ. ದಿನಕ್ಕೆ ತಲಾ ನಾಲ್ಕು ತಾಸುಗಳ ಎರಡು ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಮಯಕ್ಕೆ ಹೊಂದಿಕೊಳ್ಳಲು ನಮ್ಮ ಯುವಜನ ತಯಾರಿಲ್ಲ. <br /> <br /> ನಮ್ಮವರಿಗೆ ಏನಿದ್ದರೂ ವಾರಾಂತ್ಯ ರಜೆ, ಸಂಜೆ ಹೊತ್ತು ಆರಾಮವಾಗಿರುವ ಫ್ಯಾಕ್ಟರಿ ಕೆಲಸವೇ ಬೇಕು. ಇದು ವಲಸೆಗಾರರಿಗೂ ಗೊತ್ತು. ಅದಕ್ಕಾಗಿಯೇ ನಮ್ಮ ಯುವಕರು ಒಲ್ಲದ ಕೆಲಸವನ್ನು ಅವರು ಮಾಡುತ್ತಿದ್ದಾರೆ~ ಎನ್ನುತ್ತಾರೆ ಡಲಿಡೊ.<br /> <br /> ಇಪ್ಪತ್ತೈದು ವರ್ಷಗಳ ಹಿಂದೆ ಇಟಲಿಗೆ ವಲಸೆ ಬಂದ ಜಸವಿಂದರ್ ದುಹ್ರಾ ಅವರನ್ನು ಪ್ರಶ್ನಿಸಿದರೆ `ಹೌದು ಇದು ಹೈನುಗಾರಿಕೆ ನಾಡು. ನಾವೆಲ್ಲ ಭಾರತದ ನಮ್ಮ ಮನೆಯಲ್ಲಿ ಹಸು ಕರು ಸಾಕಿ ಹೈನುಗಾರಿಕೆ ಮಾಡಿದವರೇ. ಹೀಗಾಗಿ ಇಲ್ಲಿ ಈ ಕೆಲಸ ನಮಗೇನೂ ಅಪರಿಚಿತ ಎನಿಸಿಲ್ಲ~ ಎಂದು ಹೇಳುತ್ತಾರೆ. ಅವರು ಬಂದ ಆರಂಭದಲ್ಲಿ `ಬರ್ಗ್ಮಿನಿ~ ಆಗಿದ್ದರು. ಈಗ ಇಟಲಿಯ ಪ್ರಸಿದ್ಧ ಚೀಸ್ ತಯಾರಿಕಾ ಕಂಪೆನಿಯಲ್ಲಿ ಕೆಲಸಗಾರ.<br /> <br /> ಈ ಪ್ರಾಂತದ ಡೇರಿಗಳಲ್ಲಿ ಕೆಲಸ ಮಾಡುವ ಭಾರತೀಯ ವಲಸೆಗಾರರ ಅಧಿಕೃತ ಅಂಕಿಸಂಖ್ಯೆ ಲಭ್ಯವಿಲ್ಲ. ಆದರೆ ಇಲ್ಲಿನ ಹೊಲ ಗದ್ದೆಗಳಲ್ಲಿ ದುಡಿಯುವ ಸುಮಾರು ಮೂರು ಸಾವಿರ ಕೃಷಿ ಕಾರ್ಮಿಕರಲ್ಲಿ ಒಂದು ಸಾವಿರದಷ್ಟು ಭಾರತೀಯರು. <br /> <br /> <strong>ಗುರುದ್ವಾರ ಮತ್ತು ತಕರಾರು</strong><br /> ಕಳೆದ ತಿಂಗಳು ಇಲ್ಲಿ ಶ್ರೀ ಕಲಗಿದಾರ್ ಸಾಹೀಬ್ ಗುರುದ್ವಾರ ಆರಂಭವಾಯಿತು. ಇದು 600 ಭಕ್ತರು ಹಿಡಿಸುವಷ್ಟು ವಿಶಾಲವಾಗಿದೆ. ಆದರೆ ಅಂದು ವಾಸ್ತವವಾಗಿ ಇದರ ಆರು ಪಟ್ಟು ಜನ ಪೂಜೆ ಯಲ್ಲಿ ಭಾಗವಹಿಸಿದ್ದರು. <br /> <br /> ಯುರೋಪ್ನ ಈ ಭಾಗದಲ್ಲಿ ಅತ್ಯಂತ ದೊಡ್ಡ ಗುರುದ್ವಾರ ಎಂಬ ಕೀರ್ತಿಯೂ ಇದಕ್ಕೆ ಪ್ರಾಪ್ತವಾಗಿದೆ. ಇದರ ಹೊರತಾಗಿ ದೊಡ್ಡ ದೊಡ್ಡ ಕೋಳಿ ಸಾಕಣೆ ಕೇಂದ್ರಗಳು, ಗೋದಾಮುಗಳು ಇರುವಲ್ಲೆಲ್ಲ ಸಿಖ್ ಮಂದಿರಗಳನ್ನು ಕಾಣಬಹುದು.<br /> <br /> ಬಿಳಿ ಬಣ್ಣದ ಗುರುದ್ವಾರ ನಿರ್ಮಾಣದ ಹಾದಿ ಸುಲಭವಾಗಿರಲಿಲ್ಲ. ಪಕ್ಕದ ಮುನಿಸಿಪಾಲಿಟಿ ಮೊದಲು ಪರವಾನಗಿ ನೀಡಿ ನಂತರ ವಾಪಸ್ ಪಡೆದಿತ್ತು. <br /> <br /> ಗುರುದ್ವಾರ ನಿರ್ಮಾಣ ವಿಷಯ ರಾಜಕೀಯ ವಿವಾದಕ್ಕೆ ತಿರುಗಿದ್ದೇ ಇದಕ್ಕೆ ಕಾರಣ. ನಂತರ ಇನ್ನೊಂದು ಸ್ಥಳವನ್ನು ಗುರುತಿಸಲಾಯಿತು. `ಒಂದು ದಶಕಕ್ಕೂ ಹೆಚ್ಚು ಕಾಲ ನೌಕರಶಾಹಿ ಸಿಖ್ ಭಕ್ತರನ್ನು ಸತಾಯಿಸಿತು. ಅದೆಲ್ಲವನ್ನೂ ಪರಿಹರಿಸಿಕೊಂಡು ಚಂದಾ ಸಂಗ್ರಹಿಸಿ, ಕಡಿಮೆ ಬಿದ್ದ ಹಣಕ್ಕೆ ಬ್ಯಾಂಕ್ನಲ್ಲಿ ಸಾಲ ಎತ್ತಿ ಸುಮಾರು 30 ಲಕ್ಷ ಯುರೋ ಕೊಟ್ಟು ಈ ಜಾಗ ಕೊಂಡುಕೊಳ್ಳಲಾಯಿತು.<br /> <br /> ಗುರುದ್ವಾರದ ಎದುರು ಇರಬೇಕಾದ ಕಾರಂಜಿ ನಿರ್ಮಾಣ ಸಾಧ್ಯವಾಗಿಲ್ಲ. ಚಿನ್ನದ ತಗಡಿನ ವಿಶಿಷ್ಟ ಗೋಪುರಗಳೂ ಇಲ್ಲ. ಇಲ್ಲಿನ ಮಂಜಿನ ಹವಾಮಾನ ಇದಕ್ಕೆ ಕಾರಣ. ಆದರೂ ಪರ್ಯಾಯ ನಿರ್ಮಾಣ ಸಾಮಗ್ರಿಗಳ ಬಳಕೆ ಸಾಧ್ಯವೇ ಎಂಬ ಪರಿಶೀಲನೆ ನಡೆದಿದೆ ಎನ್ನುತ್ತಾರೆ ಮೇಯರ್ ಮಲಾಗ್ಗಿ.<br /> <br /> ಗುರುದ್ವಾರ ನಿರ್ಮಾಣಕ್ಕೆ ಮೇಯರ್ ಅವರ ಬಲವಾದ ಬೆಂಬಲ ಇತ್ತು. ಪ್ರೆಸಿನಾ ಕ್ರೆಮಾನೀಸ್ ಪಟ್ಟಣ ಪ್ರವೇಶಿಸುವ ಸ್ಥಳದಲ್ಲೇ `ಇಲ್ಲಿ ಜನಾಂಗೀಯ ಭೇದಭಾವ ಇಲ್ಲ~ ಎಂಬ ದೊಡ್ಡ ಫಲಕ ಸ್ವಾಗತಿಸುತ್ತದೆ. ಆದರೆ ಸ್ಥಳೀಯ ರಾಜಕಾರಣಿಗಳ ತಕರಾರಂತೂ ಇದ್ದೇ ಇತ್ತು. <br /> <br /> ವಲಸೆ ವಿರೋಧಿ ಸಂಘಟನೆಗಳಿಗೆ ಹೆಚ್ಚು ಹತ್ತಿರವಾದ ನಾರ್ದನ್ ಲೀಗ್ ಪಕ್ಷದವರು ಬಹಳಷ್ಟು ವಿರೋಧ ಮಾಡಿದರು. ಕಟ್ಟಾ ಬಲಪಂಥೀಯ `ಫೋರ್ಜಾ ನೊವಾ~ ಪಾರ್ಟಿ ಕಾರ್ಯಕರ್ತರ ಒಂದು ಸಣ್ಣ ಗುಂಪು ಗುರುದ್ವಾರ ಆರಂಭೋತ್ಸವದ ಹೊತ್ತಿನಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿತ್ತು.<br /> <br /> ಗುರುದ್ವಾರ ನಿರ್ಮಾಣಕ್ಕೆ ವಿನಾಕಾರಣ ಪದೇಪದೇ ಅಡ್ಡಿ ಮಾಡಿದವರಲ್ಲಿ ಕ್ರೆಮೊನಾ ಪ್ರಾಂತೀಯ ಮಂಡಳಿಯ ನಾರ್ದನ್ ಲೀಗ್ ಪಾರ್ಟಿ ಸದಸ್ಯ ಮ್ಯಾನುವಲ್ ಗೆಲ್ಮಿನಿ ಮುಖ್ಯ ವ್ಯಕ್ತಿ. `ಸಂಪ್ರದಾಯವಾದಿ ಸಿಖ್ ಹಿರಿಯರು ಕೈಯಲ್ಲಿ ಸದಾ ಹಿಡಿದು ಕೊಂಡು ಸಂಚರಿಸುವ ಕಿರ್ಪಾನ್ (ಧಾರ್ಮಿಕ ಖಡ್ಗ) ಬಗ್ಗೆ ನನ್ನ ತಕರಾರಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಅದೊಂದು ಆಯುಧ. ಅದನ್ನು ಇಟ್ಟುಕೊಂಡು ಮುಕ್ತವಾಗಿ ತಿರುಗಾಡಲು ಬಿಡಬಾರದು~ ಎಂಬುದು ಅವರ ವಾದ.<br /> <br /> ಮಂದಿರದಲ್ಲಿ ಪಂಜಾಬಿ ಭಾಷೆ ಬಳಕೆಗೂ ಅವರ ತಕರಾರಿದೆ. `ವಲಸೆಗಾರರು ಇರುವುದು ಲೊಂಬಾರ್ಡಿ ಪಟ್ಟಣದಲ್ಲಿ. ಸಾರ್ವಜನಿಕ ಸ್ಥಳದಲ್ಲಿ ಅವರ ಭಾಷೆಯಲ್ಲೇ ಮಾತನಾಡಲು ಅವರಿಗೆ ಅವಕಾಶ ಕೊಟ್ಟರೆ ಭಾವೈಕ್ಯತೆ ಮೂಡುವುದಾದರೂ ಹೇಗೆ~ ಎಂದು ಗೆಲ್ಮಿನಿ ಪ್ರಶ್ನಿಸುತ್ತಾರೆ.<br /> <br /> ಆದರೂ ವಲಸೆ ಬಂದ ಭಾರತೀಯರು ಬರ್ಗಮನಿಗಳಾಗಿ ಕೆಲಸ ಮಾಡುವುದನ್ನು ನಾರ್ದನ್ ಲೀಗ್ ಪಾರ್ಟಿ ಬಹಿರಂಗವಾಗಿ ಯಂತೂ ವಿರೋಧಿಸುತ್ತಿಲ್ಲ. `ನಮ್ಮ ಕಾಯ್ದೆಗಳಿವೆ ಗೌರವಕೊಟ್ಟು ಕಾನೂನಿನ ಪ್ರಕಾರ ಇಲ್ಲಿದ್ದರೆ ಮತ್ತು ಇಟಾಲಿಯನ್ ಭಾಷೆ ಕಲಿತರೆ ನಮ್ಮದೇನೂ ತಕರಾರಿಲ್ಲ~ ಎಂದು ಅವರು ಹೇಳುತ್ತಾರೆ.<br /> <br /> ಹನ್ನೆರಡು ವರ್ಷಗಳ ಹಿಂದೆ ಇಟಲಿಯಲ್ಲಿ ಕಾಲಿಟ್ಟಾಗ ದಿಲ್ಬಾಗ್ ಸಿಂಗ್ಗೆ 14ರ ಹರೆಯ. ಆತ ಮಾಂಟುವಾ ಸಮೀಪದ ನೊಗಾರಾದ ನಿವಾಸಿ. ಸ್ಥಳೀಯ ಭಾಷೆಯನ್ನು ಅದೇ ಉಚ್ಚರಣೆ ಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾನೆ. `ನಾವು ಇಲ್ಲಿ ಕೆಲಸಕ್ಕೆ ಬಂದವರು. ಶಾಂತಿ ಸೌಹಾರ್ದದಿಂದ ಬದುಕಲು ಬಯಸುತ್ತೇವೆ~ ಎನ್ನುವ ಆತ `ಭಾರತೀಯ ವಲಸೆಗಾರರ ಬಗ್ಗೆ ಇಟಾಲಿಯನ್ನರು ತಿಳಿದುಕೊಳ್ಳಲಿ~ ಎಂಬ ಮಹದಾಸೆಯಿಂದ ಇಟಲಿ ಸಿಖ್ರ ಕುರಿತ ವೆಬ್ಸೈಟ್ ನಡೆಸುತ್ತಿದ್ದಾನೆ.<br /> <br /> ಇಟಲಿಯ ವ್ಯವಸಾಯ ಕ್ಷೇತ್ರದಲ್ಲಿ ಸುಮಾರು 16 ಸಾವಿರ ಭಾರತೀಯರು ಕಾಯ್ದೆಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಲ್ಯಾಟಿಯಂ ಪ್ರಾಂತ ಕೂಡ ಅವರನ್ನು ಆಕರ್ಷಿಸುತ್ತಿದೆ. ಇಲ್ಲಿ ಕೃಷಿ ಹಂಗಾಮಿನಲ್ಲಿ ಬಂದು ದುಡಿಯತೊಡಗಿದ್ದಾರೆ.<br /> <br /> <strong>ಶೋಷಣೆ</strong><br /> ರೋಮ್ನಿಂದ ಬರೀ 100 ಕಿಮಿ ಒಳಗೆ ಹೋದರೂ ಸಾಕು. ಬಹಳಷ್ಟು ಜನರಿಗೆ ಅಪರಿಚಿತವಾದ ಇನ್ನೊಂದು ಲೋಕವೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎಂಬುದು ಹೆಸರಾಂತ ಸಾಕ್ಷ್ಯಚಿತ್ರ ನಿರ್ಮಾಪಕಿ ಪೆಟ್ರಿಷಿಯಾ ಸಂಟನ್ಗೆಲಿ ಹೇಳುವ ಕಿವಿಮಾತು. <br /> ಲಾಟಿನಾ ಪ್ರಾಂತದಲ್ಲಿನ ಸಿಖ್ ವಲಸೆಗಾರರ ಬಗ್ಗೆ ಅವರು ತೆಗೆದ ಚಿತ್ರ `ವಿಸಿಟ್ ಇಂಡಿಯಾ~ ಮುಂದಿನ ತಿಂಗಳು ತೆರೆ ಕಾಣಲಿದೆ. ವಲಸೆ ಬಂದವರು ಅನುಭವಿಸುತ್ತಿರುವ ತೊಂದರೆ, ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಇದರಲ್ಲಿ ವಿವರಗಳಿವೆ.<br /> <br /> `ಮನೆಯಿಲ್ಲದ ನಿರಾಶ್ರಿತರಂತೆ ಅನೇಕ ಸಲ ಅವರನ್ನು ಸಣ್ಣ ಕ್ಯಾಂಪ್ಗಳಲ್ಲಿ ಇಟ್ಟು ದುಡಿಸಿಕೊಳ್ಳಲಾಗುತ್ತದೆ. ಕೊಡುವ ಸಂಬಳವೂ ಕಡಿಮೆ. 12 ತಾಸಿನ ಕೆಲಸಕ್ಕೆ ಪ್ರತಿ ತಾಸಿಗೆ 2 ರಿಂದ 4 ಯುರೊ ಮಾತ್ರ. ಆದರೆ ನನ್ನ ಮನ ಕಲಕಿದ ಸಂಗತಿಯೆಂದರೆ ಇಷ್ಟೆಲ್ಲ ಕಷ್ಟಗಳ ನಡುವೆಯೂ ಅವರಿಗೆ ಬದುಕಿನ ಬಗ್ಗೆ ಆಶಾಭಾವನೆಯಿದೆ, ಭವಿಷ್ಯ ಉಜ್ವಲವಾಗುವ ಭರವಸೆಯಿದೆ~ ಎಂದಾಕೆ ಹೇಳುತ್ತಾರೆ.<br /> <br /> ದೇಶದ ಉತ್ತರ ಭಾಗದಲ್ಲಿ ಪರವಾಗಿಲ್ಲ. ಅಲ್ಲಿನ ವಲಸೆಗಾರರಿಗೆ ಇಷ್ಟೊಂದು ತೊಂದರೆ ಮೇಲ್ನೋಟಕ್ಕಂತೂ ಇಲ್ಲ. ಅನೇಕರು ಇಟಾಲಿಯನ್ ಪೌರತ್ವ ಪಡೆದಿದ್ದಾರೆ. ಮನೆ ಮಾಡಿದ್ದಾರೆ. ಕುಟುಂಬ ವರ್ಗವನ್ನು ಊರಿಂದ ಕರೆಸಿಕೊಂಡಿದ್ದಾರೆ.<br /> <br /> ರಾಷ್ಟ್ರೀಯ ಅಂಕಿಸಂಖ್ಯಾ ಏಜೆನ್ಸಿಯ ಮಾಹಿತಿ ಪ್ರಕಾರ ಭಾರತೀಯ ವಲಸೆಗಾರರಲ್ಲಿ ಶೇ 40ರಷ್ಟು ಮಹಿಳೆಯರು. ಆದರೆ ಇವರಲ್ಲಿ ಕೆಲಸ ಇರುವವರ ಸಂಖ್ಯೆ ತುಂಬ ಕಡಿಮೆ. ಅವರನ್ನೂ ಮುಖ್ಯವಾಹಿನಿಗೆ ತರಲು ಕಾರ್ಮಿಕ ಸಂಘಗಳು ಅವರಿಗೆ ವಿವಿಧ ಪಟ್ಟಣಗಳಲ್ಲಿ ಭಾಷೆ, ಉದ್ಯೋಗ ತರಬೇತಿ ಆಯೋಜಿಸುತ್ತಿವೆ. <br /> <br /> ಅನೇಕ ವಲಸೆ ಕುಟುಂಬಗಳಿಗೆ ಇಲ್ಲಿಯೇ ಮಕ್ಕಳಾಗಿವೆ. `ಆ ಮಕ್ಕಳು ಕಷ್ಟಪಟ್ಟು ಓದುತ್ತಾರೆ. ನಮ್ಮ ಮಕ್ಕಳಂತೆ ಪಡಪೋಸಿಗಳಲ್ಲ. ಆದರೆ ಅವಕ್ಕೆ ಅವರ ಅಪ್ಪ ಅಮ್ಮನಂತೆ ಹೊಲದಲ್ಲಿ, ಡೇರಿಯಲ್ಲಿ ಕಾರ್ಮಿಕರಾಗಿ ದುಡಿಯುವ ಉದ್ದೇಶ ಇಲ್ಲ. <br /> <br /> ಉನ್ನತ ವ್ಯಾಸಂಗ ಮಾಡಿ ಮುಂದೆ ಸಾಗಲು ಬಯಸುತ್ತಾರೆ~ ಎಂದು ಮೆಚ್ಚುಗೆಯಿಂದ ಹೇಳುತ್ತಾರೆ 1700 ಆಕಳುಗಳ ಡೇರಿ ಮಾಲೀಕ ಗಿಯಾನ್ಲುಗಿ ಫಿಯಾಮೆನಿ. ಅವರ ಹತ್ತಿರ ಏಳು ಭಾರತೀಯ ಕೆಲಸಗಾರರಿದ್ದಾರೆ.<br /> <br /> ಅಲ್ಲಿ ಕೆಲಸ ಮಾಡುವ ಪ್ರೇಮ್ಸಿಂಗ್ ಇಟಲಿಗೆ ಬಂದದ್ದು 1995ರಲ್ಲಿ. ನಂತರ ಆತನ ಅನೇಕ ಸಂಬಂಧಿಗಳೂ ಬಂದರು. ಈ ದಂಪತಿಗೆ ಮೂವರು ಮಕ್ಕಳು. ಶಾಲೆಯಲ್ಲಿ ಓದುತ್ತಿದ್ದಾರೆ. `ಅವರು ಇಟಲಿಯವರೇ ಆಗಿಬಿಟ್ಟಿದ್ದಾರೆ. <br /> <br /> ನನಗಂತೂ ವಾಪಸ್ ಭಾರತದಲ್ಲಿನ ನನ್ನೂರಿಗೆ ಹೋಗುವ ಆಲೋಚನೆ ಇಲ್ಲ. ನಾವು ಇಲ್ಲಿ ಬದುಕು ಕಂಡುಕೊಂಡಿದ್ದೇವೆ. ಇದೇ ನಮ್ಮ ಮನೆ~ ಎನ್ನುವ ಅವರ ಮಾತು ಬಹುಪಾಲು ಭಾರತೀಯ ವಲಸೆಗಾರರ ಅಭಿಪ್ರಾಯವನ್ನೇ ಧ್ವನಿಸುತ್ತದೆ. <br /> <strong>ದಿ ನ್ಯೂಯಾರ್ಕ್ ಟೈಂಸ್ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>