ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ 7 ತಂಡಗಳ ಪೈಕಿ ನಾಲ್ಕನ್ನು ಈ ಬಾರಿ ಹೊಸ ನಾಯಕರು ಮುನ್ನಡೆಸುವರು. ಶನಿವಾರ ನಡೆದಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ತಂಡಗಳ ನಾಯಕರ ಹೆಸರನ್ನು ಘೋಷಿಸಲಾಯಿತು.
ಬೆಂಗಳೂರು ಬ್ಲಾಸ್ಟರ್ಸ್ ತಂಡವು ರಾಬಿನ್ ಉತ್ತಪ್ಪ ಬದಲಿಗೆ ಆರ್.ಜೊನಾಥನ್ ಹೆಗಲಿಗೆ ನಾಯಕತ್ವವನ್ನು ವಹಿಸಿದೆ. ಬೆಳಗಾವಿ ಪ್ಯಾಂಥರ್ಸ್ ತಂಡ ಸ್ಟುವರ್ಟ್ ಬಿನ್ನಿ ಬದಲಿಗೆ ಮಿರ್ ಕೌನೇನ್ ಅಬ್ಬಾಸ್ ಅವರನ್ನು ನಾಯಕನ್ನಾಗಿ ಮಾಡಿದೆ. ಅಭಿಮನ್ಯು ಮಿಥುನ್ ಶಿವಮೊಗ್ಗ ಲಯನ್ಸ್ ತಂಡವನ್ನು ಮುನ್ನಡೆಸುವರು. ಜೆ.ಸುಚಿತ್ ಬದಲಿಗೆ ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ಅಮಿತ್ ವರ್ಮಾ ಅವರಿಗೆ ನೀಡಲಾಗಿದೆ.
ಬಿಜಾಪುರ ಬುಲ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಕ್ರಮವಾಗಿ ಭರತ್ ಚಿಪ್ಲಿ, ಆರ್.ವಿನಯ ಕುಮಾರ್ ಹಾಗೂ ಸಿ.ಎಂ.ಗೌತಮ್ ಅವರನ್ನೇ ನಾಯಕ ಸ್ಥಾನದಲ್ಲಿ ಮುಂದುವರಿಸಿವೆ.
ನೆರೆ ಪರಿಹಾರಕ್ಕೆ ಮುಂದು: ನೆರೆಹಾವಳಿಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಪರಿಹಾರ ನೀಡಲು ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಕೆಪಿಎಲ್ ಫ್ರಾಂಚೈಸ್ ಮಾಲೀಕರು ಮುಂದೆ ಬಂದಿದ್ದಾರೆ.