ನವದೆಹಲಿ: ಈ ಹಿಂದೆ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವದಿಂದ ಬಹಳಷ್ಟು ಒಳ್ಳೆಯ ಪಾಠಗಳನ್ನು ಕಲಿತಿದ್ದೇನೆ. ಆಟಗಾರರು ಆದಷ್ಟು ಮಾನಸಿಕವಾಗಿ ನಿರಾಳವಾಗಿ ಇರುವಂತೆ ಮಾರ್ಗದರ್ಶನ ನೀಡುವುದು ಮುಖ್ಯವಾದ ಕೆಲಸ ಎಂದು ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಅವರು ಕೋಚ್ ಆಗಿ ನೇಮಕವಾಗಿದ್ದಾರೆ. ಈ ಕುರಿತು ಕುಂಬ್ಳೆ ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.
‘ನಾನು ಆರ್ಸಿಬಿಯಲ್ಲಿದ್ದಾಗ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಒಂದೆರಡು ಸಲ ತೀರಾ ಸನಿಹಕ್ಕೆ ಬಂದು ನಿರಾಶೆಗೊಂಡಿದ್ದೆವು. ಆದರೆ, ಮುಂಬೈ ಇಂಡಿಯನ್ಸ್ನೊಂದಿಗೆ ಇದ್ದಾಗ ಮೂರು ವರ್ಷ ಉತ್ತಮ ಫಲಿತಾಂಶ ಲಭಿಸಿತ್ತು. ಈ ಎಲ್ಲ ಅನುಭವಗಳು ಮುಂದಿನ ಕಾರ್ಯಕ್ಕೆ ಸಹಾಯಕವಾಗುತ್ತವೆ’ ಎಂದರು.