ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ಅಂತಹ ಆಟಗಾರರಿಗೂ ನಿಯಮ ಅನ್ವಯಿಸಲಿ: ಇರ್ಫಾನ್ ಪಠಾಣ್

ಸರ್ವರಿಗೂ ನಿಯಮ ಒಂದೇ ಅಗಲಿ; ಇಶಾನ್, ಶ್ರೇಯಸ್ ಗುತ್ತಿಗೆ ರದ್ದು ಕುರಿತು ಇರ್ಫಾನ್ ಪಠಾಣ್
Published 29 ಫೆಬ್ರುವರಿ 2024, 13:10 IST
Last Updated 29 ಫೆಬ್ರುವರಿ 2024, 13:10 IST
ಅಕ್ಷರ ಗಾತ್ರ

ನವದೆಹಲಿ: ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡದ ಕಾರಣಕ್ಕೆ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈಬಿಡಲಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ಅವರಿಗೆ ರಿಯಾಯಿತಿ ನೀಡಿರುವುದು ಯಾಕೆ.  ನಿಯಮ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸಬೇಕಲ್ಲವೇ ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಇರ್ಫಾನ್ ಪಠಾಣ್ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಆಡದಿರುವಾಗ ಆಟಗಾರರು ದೇಶಿ ಟೂರ್ನಿಗಳಲ್ಲಿ ತಮ್ಮ ತವರು ರಾಜ್ಯಗಳ ತಂಡದಲ್ಲಿ ಆಡಬೇಕೆಂಬ ನಿಯಮ ಪಾಲಿಸದ ಕಾರಣ ಇಶಾನ್ ಮತ್ತು ಶ್ರೇಯಸ್ ಅವರನ್ನು ಬುಧವಾರ ಕೇಂದ್ರಿಯ ಗುತ್ತಿಗೆಯಿಂದ ಕೈಬಿಡಲಾಗಿತ್ತು. ಆದರೆ, ಪಾಂಡ್ಯ ಅವರು 2018ರಿಂದ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಲ್ಲ. ಆದರೂ ಅವರನ್ನು ಎ ಗ್ರೇಡ್‌ನಲ್ಲಿ ಉಳಿಸಲಾಗಿದೆ.

‘ಹಾರ್ದಿಕ್ ಅವರಂತಹ ಆಟಗಾರರು ಕೆಂಪು ಚೆಂಡಿನ ಕ್ರಿಕೆಟ್‌ ಆಡಲು ಇಷ್ಟಪಡದಿದ್ದರೆ, ಅವರು ಅಥವಾ ಅವರಂತಹವರು ಶ್ವೇತವರ್ಣದ ಚೆಂಡಿನ ಮಾದರಿ ಕ್ರಿಕೆಟ್‌ನಲ್ಲಿ ಆಡಬಹುದೇ. ಅದರೂ ಅವರು ರಾಷ್ಟ್ರೀಯ ತಂಡದಲ್ಲಿ ಇರದ ಸಂದರ್ಭದಲ್ಲಿ’ ಎಂದು ಇರ್ಫಾನ್ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಬಿಸಿಸಿಐ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

‘ಒಂದೊಮ್ಮೆ ಈ ನಿಯಮ ಎಲ್ಲರಿಗೂ ಸರಿಸಮನಾಗಿ ಅನ್ವಯವಾಗದಿದ್ದರೆ, ಭಾರತದ ಕ್ರಿಕೆಟ್‌ ರಂಗವು ನಿರೀಕ್ಷಿತ ಗುರಿಯನ್ನು ಸಾಧಿಸುವುದಿಲ್ಲ’ ಎಂದೂ ಅವರು ಉಲ್ಲೇಖಿಸಿದ್ದಾರೆ.

ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತ ತಂಡದಲ್ಲಿ ಇಶಾನ್ ಇದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳಿಂದಾಗ ಪ್ರವಾಸದಿಂದ ಅರ್ಧದಲ್ಲಿಯೇ ಭಾರತಕ್ಕೆ ಮರಳಿದ್ದರು. ಆದರೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತವರು ಜಾರ್ಖಂಡ್ ರಾಜ್ಯ ಪರ ಆಡಲಿಲ್ಲ. ಬಿಸಿಸಿಐ ಸೂಚನೆ ನೀಡಿದರೂ ಪಾಲಿಸಲಿಲ್ಲ.

ಆದರೆ ಅವರು ಸದ್ಯ ನಡೆಯುತ್ತಿರುವ ಡಿವೈ ಪಾಟೀಲ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಐಪಿಎಲ್‌ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಶ್ರೇಯಸ್ ಅವರು ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ತೊಡೆಯ ಸ್ನಾಯುವಿನ ಗಾಯದಿಂದಾಗಿ ತಂಡದಿಂದ ಹೊರನಡೆದಿದ್ದರು. ಇದೇ 2ರಿಂದ ಆರಂಭವಾಗಲಿರುವ ರಣಜಿ ಟೂರ್ನಿ ಸೆಮಿಫೈನಲ್‌ನಲ್ಲ ಅವರು ಮುಂಬೈ ತಂಡದಲ್ಲಿ ಆಡಲಿದ್ದಾರೆ. ಮಾರ್ಚ್ 22ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಅವರು ಕಣಕ್ಕಿಳಿಯುವರು.

‘ಇಶಾನ್ ಮತ್ತು ಶ್ರೇಯಸ್ ಅವರಿಬ್ಬರೂ ಪ್ರತಿಭಾವಂತ ಆಟಗಾರರು. ಅವರು ಮತ್ತಷ್ಟು ಬಲದೊಂದಿಗೆ ಕಣಕ್ಕೆ ಮರಳುವ ವಿಶ್ವಾಸವಿದೆ’ ಎಂದೂ ಇರ್ಫಾನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT