ಮೈಸೂರು: ನಾಯಕ ಸುನಿಲ್ ರಮೇಶ್ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ಇಂಡಸ್ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ಅಂಧರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ವಿರುದ್ಧ 158 ರನ್ಗಳ ಜಯ ಸಾಧಿಸಿತು.
ಎಸ್ಜೆಸಿಇ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 17 ಓವರ್ಗಳಲ್ಲಿ 2 ವಿಕೆಟ್ಗೆ 256 ರನ್ ಪೇರಿಸಿತು. ಅಜೇಯ 206 (69 ಎಸೆತ, 46 ಬೌಂಡರಿ) ರನ್ ಗಳಿಸಿದ ಸುನಿಲ್ ಈ ಟೂರ್ನಿಯಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಗೋವಾ ತಂಡ ನಿಗದಿತ ಓವರ್ಗಳಲ್ಲಿ ಐದು ವಿಕೆಟ್ಗೆ 98 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆಳಿಗ್ಗೆ ಮಳೆ ಸುರಿದ ಕಾರಣ ಓವರ್ಗಳ ಸಂಖ್ಯೆಯನ್ನು 17ಕ್ಕೆ ಇಳಿಸಲಾಗಿತ್ತು.
ಮೈಸೂರು ಲೆಗ್ನ ಪಂದ್ಯಗಳು ಕೊನೆಗೊಂಡಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದ ಕರ್ನಾಟಕ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಟೂರ್ನಿಯ ಮುಂದಿನ ಲೆಗ್ನ ಪಂದ್ಯಗಳು ಫರೀದಾಬಾದ್ನಲ್ಲಿ ಆಯೋಜನೆಯಾಗಿವೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಜನವರಿಯಲ್ಲಿ ನಡೆಯಲಿವೆ.