ಪುದುಚೇರಿ: ಕರ್ನಾಟಕದ ಮಯಂಕ್ ಅಗರವಾಲ್ ನಾಯಕತ್ವದ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿ ಜಯದ ವಿಶ್ವಾಸದಲ್ಲಿದೆ.
ಹೋದ ತಿಂಗಳು ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಜಯಿಸಿದ್ದ ತಂಡವು ಈ ಬಾರಿಯ ದೇಶಿ ಋತುವಿನ ಎರಡನೇ ಪ್ರಶಸ್ತಿಗೆ ಮುತ್ತಿಡುವ ಉತ್ಸಾಹದಲ್ಲಿದೆ. ಗುರುವಾರ ನಡೆಯಲಿರುವ ಫೈನಲ್ನಲ್ಲಿ ಪೂರ್ವ ವಲಯವನ್ನು ಎದುರಿಸಲಿದೆ.
ಈ ಟೂರ್ನಿಯ ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಅಜೇಯವಾಗಿರುವ ಮಯಂಕ್ ಬಳಗವು ಫೈನಲ್ನಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದೆ. ತಂಡದಲ್ಲಿರುವ ಕರ್ನಾಟಕದ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಮಯಂಕ್ (278 ರನ್), ಮಧ್ಯಮವೇಗಿಗಳಾದ ವಿದ್ವತ್ ಕಾವೇರಪ್ಪ (11 ವಿಕೆಟ್), ವಿ. ಕೌಶಿಕ್ (7 ವಿಕೆಟ್) ಮತ್ತು ವೈಶಾಖ ವಿಜಯಕುಮಾರ್(6 ವಿಕೆಟ್) ಟೂರ್ನಿಯುದ್ದಕ್ಕೂ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ.
ಉಳಿದಂತೆ ಬ್ಯಾಟಿಂಗ್ ನಲ್ಲಿ ರೋಹನ್ ಕುನ್ನುಮ್ಮಾಳ್ (204 ರನ್) ಹಾಗೂ ಬಿ. ಸಾಯಿ ಸುದರ್ಶನ್ (185 ) ಉತ್ತಮ ಲಯದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಆರ್. ಸಾಯಿಕಿಶೋರ್ ಕೂಡ ಇದುವರೆಗೆ ಉತ್ತಮ ಬೌಲಿಂಗ್ ಮಾಡಿದ್ದು, ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ.
ಪೂರ್ವ ವಲಯ ತಂಡದಲ್ಲಿಯೂ ಉತ್ತಮವಾದ ಆಟಗಾರರು ಇದ್ದಾರೆ. ಲೀಗ್ ಹಂತದಲ್ಲಿ ಒಟ್ಟು 16 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿತ್ತು. ತಂಡದಲ್ಲಿರುವ ಮೂವರು ಸ್ಪಿನ್ನರ್ಗಳಾದ ಶಹಬಾಜ್ ಅಹಮದ್ (10 ವಿಕೆಟ್), ರಿಯಾನ್ ಪರಾಗ್ (9) ಮತ್ತು ಮಣಿಶಂಕರ್ ಮುರಾಸಿಂಗ್ (8 ) ತಂಡವನ್ನು ಜಯದತ್ತ ನಡೆಸಬಲ್ಲ ಸಮರ್ಥರು. ದಕ್ಷಿಣ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.