ಪರ್ಲ್, ದಕ್ಷಿಣ ಆಫ್ರಿಕಾ: ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿರುವಬೆನ್ನಲ್ಲೇಟೆಸ್ಟ್ತಂಡವನ್ನು ಮುನ್ನಡೆಸುವ ಅವಕಾಶ ನೀಡಿದರೆ ನಿರಾಕರಿಸಲಾರೆ. ಭಾರತ ತಂಡದ ನಾಯಕನಾಗುವುದೆಂದರೆ ಅದೃಷ್ಟವೇ ಸರಿ ಎಂದು ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನಲು ಯಾವ ಆಟಗಾರನಿಗೂ ಸಾಧ್ಯವಿಲ್ಲ. ಅದರಿಂದ ನಾನೇನು ಭಿನ್ನವಲ್ಲ. ಅವಕಾಶ ಲಭಿಸಿದರೆ ತಂಡದ ಶ್ರೇಯಸ್ಸಿಗಾಗಿ ಶಕ್ತಿಮೀರಿ ಪ್ರಯತ್ನಿಸುವೆ’ ಎಂದರು.
ಮುಂದಿನ ನಾಯಕ ಯಾರು ಎಂದು ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ರೋಹಿತ್ ಶರ್ಮಾ ಅವರನ್ನು ಉಪನಾಯಕನ್ನಾಗಿ ಮಾಡಲಾಗಿತ್ತು. ಆದರೆ ಅವರು ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿರಲಿಲ್ಲ. ಎರಡನೇ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾಗ ರಾಹುಲ್ ತಂಡವನ್ನು ಮುನ್ನಡೆಸಿದ್ದರು.
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ತೊರೆದಿರುವುದು ಕ್ರಿಡಾ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.