ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸೋಲು ‘ನಮ್ಮ ಕಣ್ತೆರೆಸಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಆದರೆ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮೊದಲು ನಮ್ಮ ತಂಡವು ಸುಧಾರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಪ್ ಟೌನ್ನಲ್ಲಿ ನಡೆದ ಮೂರನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದ ಬಳಿಕ ಮಾತನಾಡಿದ ಅವರು, ‘ಕಳೆದ ವಿಶ್ವಕಪ್ ಬಳಿಕ ನಾವು ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ’ಎಂದು ಹೇಳಿದರು.
ಆದರೆ ಮುಂದಿನ ದಿನಗಳಲ್ಲಿ ಭಾರತ ಸಾಕಷ್ಟು ವೈಟ್ ಬಾಲ್ ಕ್ರಿಕೆಟ್ ಆಡಲು ಸಜ್ಜಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.
‘ವಿಶ್ವಕಪ್ಗೆ ಮೊದಲು ನಮಗೆ ಸಾಕಷ್ಟು ಸಮಯವಿದೆ. ಇದು ಕಲಿಯುವಿಕೆಗೆ ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಾವು ಉತ್ತಮಗೊಳ್ಳುತ್ತೇವೆ ಮತ್ತು ಸುಧಾರಿಸುತ್ತೇವೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೇಮಕಗೊಂಡ ನಾಯಕ ರೋಹಿತ್ ಶರ್ಮಾ ಮತ್ತು ಕೆಲ ಆಲ್ರೌಂಡರ್ಗಳು ಸೇರಿದಂತೆ ಹಲವು ಪ್ರಮುಖ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಭ್ಯವಿಲ್ಲ ಎಂಬುದನ್ನು ದ್ರಾವಿಡ್ ಒತ್ತಿ ಹೇಳಿದರು.
ಇದೇವೇಳೆ, ಏಳನೇ ಕ್ರಮಾಂಕದಲ್ಲಿ 54 ರನ್ ಸಿಡಿಸಿ ಉತ್ತಮ ಬ್ಯಾಟಿಂಗ್ ಮಾಡಿದ ದೀಪಕ್ ಚಾಹರ್ ಅವರನ್ನು ಶ್ಲಾಘಿಸಿದರು.
ಗಾಯದ ಕಾರಣ ರೋಹಿತ್ ಶರ್ಮಾ ಹಿಂದೆ ಸರಿದ ನಂತರ ನಾಯಕತ್ವ ವಹಿಸಿಕೊಂಡ ಕೆಎಲ್ ರಾಹುಲ್ ಅವರ ನಿರ್ವಹಣೆಯನ್ನು ದ್ರಾವಿಡ್ ಶ್ಲಾಘಿಸಿದರು.
‘ಅವರು(ಕೆ.ಎಲ್. ರಾಹುಲ್) ಉತ್ತಮವಾಗಿ ತಂಡವನ್ನು ನಿರ್ವಹಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ’ಎಂದು ದ್ರಾವಿಡ್ ಹೇಳಿದರು. ‘ಸೋಲುತ್ತಿದ್ದ ತಂಡವನ್ನು ಮುನ್ನಡೆಸುವುದು ಸುಲಭವಲ್ಲ. ಅವರು ನಾಯಕನಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ’ ಎಂದು ಹೇಳಿದರು.
‘ನಾಯಕತ್ವದ ಬಹುಪಾಲು ಭಾಗವು ನಿಮ್ಮ ಆಟಗಾರರ ಕೌಶಲ್ಯ ಮತ್ತು ಗುಣಮಟ್ಟವನ್ನು ಕಾರ್ಯಗತಗೊಳಿಸುವುದು. ಏಕದಿನ ತಂಡವಾಗಿ ನಾವು ಸ್ವಲ್ಪ ಹಿನ್ನಡೆ ಅನುಭವಿಸಿದ್ದೇವೆ’ ಎಂದು ಹೇಳಿದರು.