ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND Vs BAN: ವಿಶ್ವಕಪ್‌ನಲ್ಲಿ ಅಜೇಯ ಓಟದತ್ತ ಭಾರತ ಚಿತ್ತ

Published 19 ಅಕ್ಟೋಬರ್ 2023, 0:25 IST
Last Updated 19 ಅಕ್ಟೋಬರ್ 2023, 0:25 IST
ಅಕ್ಷರ ಗಾತ್ರ

ಪುಣೆ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ‘ಹ್ಯಾಟ್ರಿಕ್ ಜಯ’ದ ಸಾಧನೆ ಮಾಡಿದೆ. ಅದೇ ಲಯವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದೆ.

ಗುರುವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂ.ಸಿ.ಎ) ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಮೇಲ್ನೋಟಕ್ಕೆ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳನ್ನು ಮಣಿಸಿರುವ ಭಾರತವು ಭರ್ತಿ ಆತ್ಮವಿಶ್ವಾಸದಲ್ಲಿದೆ.

ಆದರೆ ಟೂರ್ನಿಯಲ್ಲಿ ಈಗಾಗಲೇ ಎರಡು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಸಾಧಾರಣ ತಂಡಗಳಾದ ಅಫ್ಗಾನಿಸ್ತಾನವು  ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತು ನೆದರ್ಲೆಂಡ್ಸ್ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿವೆ.  ಆದ್ದರಿಂದ ಈಗ ಯಾವ ತಂಡವನ್ನು ಹಗುರವಾಗಿ ಪರಿಗಣಿಸುವುದು ಕಷ್ಟವಾಗಿದೆ. 

ಅಫ್ಗನ್ ಮತ್ತು ನೆದರ್ಲೆಂಡ್ಸ್ ತಂಡಗಳಿಗೆ ಹೋಲಿಕೆ ಮಾಡಿದರೆ ಬಾಂಗ್ಲಾದೇಶವು ಹೆಚ್ಚು ಅನುಭವಿ ಮತ್ತು ಬಲಶಾಲಿಯೇ ಆಗಿದೆ. ಆದ್ದರಿಂದ ಭಾರತ ತಂಡಕ್ಕೆ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯವೂ ಅದಕ್ಕಿದೆ.  ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಶಕೀಬ್ ಅಲ್ ಹಸನ್ ನಾಯಕತ್ವದ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಎದುರು ಜಯಿಸಿತ್ತು. ಆದರೆ ನ್ಯೂಜಿಲೆಂಡ್ ಮತ್ತು  ಇಂಗ್ಲೆಂಡ್ ಎದುರು ಶರಣಾಗಿತ್ತು. ನಾಲ್ಕರ ಘಟ್ಟಕ್ಕೆ ಹೋಗುವ ಕನಸು ಉಳಿಯಬೇಕಾದರೆ ಬಾಂಗ್ಲಾ ತಂಡವು ತನ್ನ ಪಾಲಿನಲ್ಲಿ ಉಳಿದಿರುವ ಆರು ಪಂದ್ಯಗಳಲ್ಲಿ ಕನಿಷ್ಠ ನಾಲ್ಕರಲ್ಲಿ  ಜಯಿಸಲೇಬೇಕು. 

ಅದಕ್ಕಾಗಿ ಭಾರತ ಎದುರಿನ ಪಂದ್ಯದಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಸವಾಲು ಬಾಂಗ್ಲಾಗೆ ಇದೆ. ಆದರೆ, ಭಾರತ ತಂಡವು ಈಗ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಲಯದಲ್ಲಿದೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರಂತೂ ಕಳೆದ ಎರಡೂ ಪಂದ್ಯಗಳಲ್ಲಿ ತಮ್ಮ ‘ಹಿಟ್‌ಮ್ಯಾನ್‌’ ಖ್ಯಾತಿಗೆ ತಕ್ಕಂತೆ ಆಡಿದ್ದಾರೆ. ಡೆಂಗಿ ಜ್ವರದಿಂದ ಚೇತರಿಸಿಕೊಂಡು ಬಂದಿರುವ ಶುಭಮನ್ ಗಿಲ್ ಕೂಡ ಉತ್ತಮ ಲಯಕ್ಕೆ ಮರಳುವ ಸೂಚನೆ ತೋರಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.

ಈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಬಾಂಗ್ಲಾದ ವೇಗಿ ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಇಸ್ಲಾಂ ಮತ್ತು ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಅವರ ಮುಂದಿರುವ ಪ್ರಮುಖ ಸವಾಲು. ಆದರೆ ಇದಕ್ಕಿಂತಲೂ ಕಠಿಣ ಸವಾಲು ಬಾಂಗ್ಲಾ ಬ್ಯಾಟರ್‌ಗಳ ಮುಂದಿದೆ. ಭಾರತದ ಸ್ಪಿನ್ ಜೋಡಿ ಕುಲದೀಪ್‌ ಯಾದವ್ ಮತ್ತು ರವೀಂದ್ರ ಜಡೇಜ, ವೇಗದ ಜೋಡಿ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಉರುಳಿಸುವಲ್ಲಿ ಮುಂಚೂಣಿಯಲ್ಲಿದ್ದು ದೊಡ್ಡ ಜೊತೆಯಾಟಗಳನ್ನು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ 

ಪಿಟಿಐ ಚಿತ್ರ

‌ಬಲಾಬಲ

ಪಂದ್ಯ; 40

ಭಾರತ ಜಯ; 31

ಬಾಂಗ್ಲಾ ಗೆಲುವು; 8

ಫಲಿತಾಂಶವಿಲ್ಲ;1

ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್

ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ 

–ಪಿಟಿಐ ಚಿತ್ರ

ತಂಡದ ಸಂಯೋಜನೆಯನ್ನು ಬದಲಾವಣೆ ಮಾಡುವ ಯಾವುದೇ ಮಾತುಕತೆಯೂ ನಡೆದಿಲ್ಲ. ಕಳೆದ ಮೂರು ಪಂದ್ಯಗಳ ಜಯದಲ್ಲಿ ಆಡಿರುವ ತಂಡವನ್ನೇ ಮುಂದುವರಿಸಲಾಗುವುದು. ಜಯದ ಲಯವನ್ನು ಮುಂದುವರಿಸುವುದೇ ನಮ್ಮ ಗುರಿ.
– ಪಾರಸ್ ಮಾಂಬ್ರೆ ಭಾರತ ತಂಡದ ಸಹಾಯಕ ಕೋಚ್
ಮೊದಲ ವಿಶ್ವಕಪ್ ಪಂದ್ಯ
ಪುಣೆಯಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯ ನಡೆಯಲಿದೆ.  2017ರಿಂದ ಇಲ್ಲಿಯವರೆಗೆ ಈ ತಾಣದಲ್ಲಿ ಐದು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ.  ಅದರಲ್ಲಿ ಮೂರು ಪಂದ್ಯಗಳಲ್ಲಿ ತಂಡಗಳು 300ಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ದಾಖಲಿಸಿವೆ. ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವಾಗುವ ಲಕ್ಷಣಗಳು ಪಿಚ್‌ನಲ್ಲಿವೆ. ಪಂದ್ಯದ ದಿನದಂದು ಮಳೆಯ ಸಾಧ್ಯತೆ ಹೆಚ್ಚಿಲ್ಲ.  ಆದರೆ ತಾಪ ಹೆಚ್ಚಿರುವ ಸಂಭವ ಇದೆ. 25 ವರ್ಷಗಳ ನಂತರ ಮುಖಾಮುಖಿ ಭಾರತ ತಂಡವು ತನ್ನ ತವರಿನಂಗಳದಲ್ಲಿ 25 ವರ್ಷಗಳ ನಂತರ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಆಡಲಿದೆ.  1998ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಬಾಂಗ್ಲಾ ತಂಡದಲ್ಲಿ ಮಿನಾಜುಲ್ ಅಬೆದಿನ್ ಖಾಲಿದ್ ಮೆಹಮೂದ್ ಮತ್ತು ಅತ್ತರ್ ಅಲಿ ಖಾನ್ ಆಡಿದ್ದರು. ಸದ್ಯ ಮಿನಾಜುಲ್ ಸದ್ಯ ಬಾಂಗ್ಲಾದೇಶದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಖಾಲಿದ್ ತಂಡದ ನಿರ್ದೇಶಕ ಮತ್ತು ಖಾನ್ ಟಿ.ವಿ. ವೀಕ್ಷಕ ವಿವರಣೆಗಾರ ಆಗಿದ್ದಾರೆ.
ಯಾವ ತಂಡವೂ ದೊಡ್ಡದಲ್ಲ: ಕೊಹ್ಲಿ
‘ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯಾವ ತಂಡವೂ ದೊಡ್ಡದಲ್ಲ. ಆದರೆ ಕೆಲವು ತಂಡಗಳನ್ನು ಮಾತ್ರ ದೊಡ್ಡ (ಬಲಾಢ್ಯ) ಎಂದು ಭಾವಿಸಿ ಅವುಗಳನ್ನಷ್ಟೇ ಗುರಿಯಾಗಿಟ್ಟುಕೊಂಡು ಆಡುವುದು ಅಪಾಯಕಾರಿ. ಅದರಿಂದಾಗಿ ನಾವು ದೊಡ್ಡದಲ್ಲ ಎಂದುಕೊಂಡ ತಂಡಗಳ ಎದುರು ಆಘಾತ ಅನುಭವಿಸಬೇಕಾಗುತ್ತದೆ’ ಎಂದು ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದರು. ಈ ಬಾರಿಯ ಟೂರ್ನಿಯಲ್ಲಿ ಹೊರಹೊಮ್ಮಿರುವ ಎರಡು ಅಚ್ಚರಿಯ ಫಲಿತಾಂಶಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ವಿರಾಟ್ ಪ್ರತಿಕ್ರಿಯಿಸಿದರು. ಬಾಂಗ್ಲಾ ತಂಡದ ಕುರಿತು ಮಾತನಾಡಿದ ಕೊಹ್ಲಿ ‘ಹಲವು ವರ್ಷಗಳಿಂದ ನಾನು ಶಕೀಬ್ ಅಲ್ ಹಸನ್ ಎದುರು ಆಡಿದ್ದೇನೆ. ಅದ್ಭುತ ಆಟಗಾರ. ಅನುಭವಿಯಾಗಿರುವ ಅವರು ಬ್ಯಾಟರ್‌ಗಳನ್ನು ವಂಚಿಸಿ ವಿಕೆಟ್ ಗಳಿಸುವ ಕುರಿತು ಚೆನ್ನಾಗಿ ತಿಳಿದಿದ್ದಾರೆ. ಉತ್ತಮ ಸ್ಪಿನ್ನರ್ ಆಗಿದ್ದಾರೆ‘ ಎಂದರು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್) ಶುಭಮನ್ ಗಿಲ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ಶಾರ್ದೂಲ್ ಠಾಕೂರ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಇಶಾನ್ ಕಿಶನ್ ಸೂರ್ಯಕುಮಾರ್ ಯಾದವ್ ಮೊಹಮ್ಮದ್ ಶಮಿ ಆರ್. ಅಶ್ವಿನ್.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ) ಮುಷ್ಫಿಕುರ್ ರಹೀಮ್ (ವಿಕೆಟ್‌ಕೀಪರ್) ಲಿಟನ್ ದಾಸ್ ತಂಜೀದ್ ಹಸನ್ ಮೆಹದಿ ಹಸನ್ ಮಿರಾಜ್ ನಜ್ಮುಲ್ ಹೊಸೇನ್ ಶಾಂತೊ ತೌಹಿದ್ ಹೃದಯ್ ಮೆಹಮುದುಲ್ಲಾ ತಸ್ಕಿನ್ ಅಹಮದ್ ಮುಸ್ತಫಿಜುರ್ ರೆಹಮಾನ್ ಶೊರಿಫುಲ್ ಇಸ್ಲಾಂ ತಂಜೀಂ ಹಸನ್ ಶಕೀಬ್ ಹಸನ್ ಮೆಹಮೂದ್ ಮೆಹೆದಿ ಹಸನ್ ನಸುಮ್ ಅಹಮದ್. ಪಂದ್ಯ ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT