ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿನ ಭಾರತ ಕ್ರಿಕೆಟ್ ತಂಡದ ಆಯ್ಕೆಯು ಭಾನುವಾರ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಅಮೋಘ ಲಯದಲ್ಲಿರುವ ಕರ್ನಾಟಕದ ಯುವ ಎಡಗೈ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ಗೆ ಅವಕಾಶ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿಬ್ಯಾಟಿಂಗ್ ಪ್ರದರ್ಶನ ನೀಡಿರುವ ಪಡಿಕ್ಕಲ್, ಸತತ ನಾಲ್ಕು ಶತಕಗಳ ಸಾಧನೆ ಮಾಡಿದ್ದರು. ರನ್ ಬೇಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಪಡಿಕ್ಕಲ್ ಏಳು ಪಂದ್ಯಗಳಲ್ಲಿ 147.40ರ ಸರಾಸರಿಯಲ್ಲಿ ಒಟ್ಟು 737 ರನ್ ಕಲೆ ಹಾಕಿದ್ದರು.
ಅತ್ತ ಮುಂಬೈ ನಾಯಕ ಪೃಥ್ವಿ ಶಾ ಕೂಡಾ ತಮ್ಮ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಏಳು ಪಂದ್ಯಗಳಲ್ಲಿ 754 ರನ್ ಸಂಪಾದಿಸಿರುವ (ಭಾನುವಾರದ ಫೈನಲ್ ಹೊರತುಪಡಿಸಿ) ಪೃಥ್ವಿ, ಮಗದೊಮ್ಮೆ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ.
ಹಾಗಿದ್ದರೂ ಈ ಯುವ ಆಟಗಾರರು ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಯಬೇಕಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಭಾನುವಾರ ಘೋಷಿಸುವ ಸಾಧ್ಯತೆಯಿದೆ. ಟ್ವೆಂಟಿ-20 ವಿಶ್ವಕಪ್ಗೆ ತಯಾರಿ ನಡೆಸುತ್ತಿರುವುದರಿಂದ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷೆ ಮಾಡುವಂತಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದರು.
ಹಿರಿಯ ಆಟಗಾರರು ವಿಶ್ರಾಂತಿ ಬಯಸಿಲ್ಲ... ಅದೇ ಹೊತ್ತಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಸೇರಿದಹಿರಿಯ ಆಟಗಾರರು ವಿಶ್ರಾಂತಿ ಬಯಸಿಲ್ಲ. ಹಾಗಾಗಿ ಬಲಿಷ್ಠ ತಂಡವನ್ನೇ ಘೋಷಿಸುವ ಸಾಧ್ಯತೆಯಿದೆ.
ಐದು ಪಂದ್ಯಗಳ ಟಿ20 ಸರಣಿಯ ಬಳಿಕ ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯು ಆಯೋಜನೆಯಾಗಲಿದೆ. ಈ ಪಂದ್ಯಗಳು ಅಹರ್ನಿಶಿಯಾಗಿ ಸಾಗಲಿದ್ದು, ಅನುಕ್ರಮವಾಗಿ ಮಾರ್ಚ್ 23, 26 ಹಾಗೂ 28ರಂದು ನಡೆಯಲಿದೆ.