ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನ ಬ್ಯಾಟರ್ ಸುರೇಶ್ ರೈನಾ ಬಿಕರಿಯಾಗದಿರುವುದಕ್ಕೆ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಖೇದ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಸುರೇಶ್ ರೈನಾ ಅವರು ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಬಿಕರಿಯಾಗದಿರುವುದನ್ನು ನೋಡಿ ದುಃಖವಾಗಿದೆ’ ಎಂದು ಬರೆದುಕೊಂಡಿದ್ದಾರೆ.
'ಮಿಸ್ಟರ್ ಐಪಿಎಲ್' ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಅವರು ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು.
ಬಿಡ್ ಪ್ರಕ್ರಿಯೆಯ ಮೊದಲ ದಿನ ಭಾರತದ 74 ಮತ್ತು ವಿದೇಶದ 20 ಆಟಗಾರರು ವಿವಿಧ ಫ್ರ್ಯಾಂಚೈಸಿಗಳಿಂದ ಖರೀದಿಯಾದರು. ಬಿಡ್ ಅಂತಿಮ ಪಟ್ಟಿಯಲ್ಲಿ 590 ಆಟಗಾರರು ಸ್ಥಾನ ಪಡೆದಿದ್ದಾರೆ. ಒಟ್ಟು 217 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.