ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾಯ್ತೋ ವಿಧಿ ‘ಆಟ’ ಇದೇನಾಯ್ತೋ !

Last Updated 1 ಏಪ್ರಿಲ್ 2019, 9:26 IST
ಅಕ್ಷರ ಗಾತ್ರ

ಇವತ್ತು ಏಪ್ರಿಲ್ 1. ಫೂಲ್ಸ್‌ ಡೇ ಎಂದೇ ಸುಪ್ರಸಿದ್ದ. ಒಬ್ಬರಿಗೊಬ್ಬರು ಕಾಲೆಳೆದು ಫೂಲ್‌ ಮಾಡಿ ನಕ್ಕು, ನಗಿಸುವ ದಿನ. ಪ್ರತಿಬಾರಿಯೂ ಕಪ್ ನಮ್ದೆ ಎಂದು ಕಣಕ್ಕಿಳಿಯುವ ಐಪಿಎಲ್‌ನ ಜನಪ್ರಿಯ ತಂಡ ಆರ್‌ಸಿಬಿಯು ಈ ಬಾರಿ ಮೊದಲ ಎರಡು ಪಂದ್ಯಗಳಲ್ಲಿ ಸೋಲಿನ ಆರಂಭ ಮಾಡಿದೆ. ಇದನ್ನು ಗುರು ಪಿ.ಎಸ್. ತಿಳಿ ಹಾಸ್ಯದ ಧಾಟಿಯಲ್ಲಿ ಹೀಗೆ ನೋಡಿದ್ದಾರೆ.

‘ಏ ನಾಯ್ತೋ,ಇದೇನಾಯ್ತೋ..ವಿಧಿಯಾಟ ಏನಾಯ್ತೋ' ಹಾಡು ಕೇಳುತ್ತಾ ಆಕಾಶ ನೋಡ್ತಿದ್ರು ಕೊಹ್ಲಿ. ಕಣ್ತುಂಬ ನೀರು, ಮೈತುಂಬಾ ಬೆವರು ಸುರೀತಿತ್ತು.

‘ನೀವು ಕ್ರಿಕೆಟ್ ನ ಸೂಪರ್ ಹೀರೋ. ನೀವೇ ಹೀಗೆ ಕೊರಗ್ತಾ ಕೂತರೆ ಹೇಗೆ..‌ ಪರಿಹಾರ ಹುಡುಕೋಣ ಸಮಾಧಾನ ಮಾಡ್ಕೊಳಿ’ ಪತಿಯ ಪರಿಸ್ಥಿತಿ ಕಂಡು ಸಂತೈಸಲು ಮುಂದಾದ್ರು ಅನುಷ್ಕಾ.

‘ಏನು! ನೀನೂ ನನ್ನನ್ನ ಚೋಕರ್ ಅಂದ್ಯಾ’ ಕೆಂಪಾದ ಕಣ್ಣನ್ನು ಮತ್ತಷ್ಟು ದೊಡ್ಡದು ಮಾಡಿ ದುರುಗುಟ್ಟಿದ್ರು ಕ್ಯಾಪ್ಟನ್‌.

‘ಅಯ್ಯೋ, ಸೂಪರ್ ಅಂದಿದ್ದು' ಹೆದರುತ್ತಲೇ ಉತ್ತರಿಸಿದ್ರು ಅನುಷ್ಕಾ.

‘ಛೇ... ಯಾರೇ ಹೊಗಳಿದ್ರೂ ಬೈದಂತೆಯೇ ಕೇಳಿಸ್ತಿದೆ ನಂಗೆ. ಇಂಡಿಯಾಗೆ ಎಷ್ಟೊಂದ್ ಟ್ರೋಫಿ ತಂದುಕೊಟ್ಟೆ. ಏಳು ಸಾಗರ ದಾಟಿ ಹೋಗಿ ಟೆಸ್ಟ್ ಸೀರೀಸ್ ಗೆದ್ದುಕೊಟ್ಟೆ. ಆದರೆ, ಇದು.. ಈ ಬೆಂಗಳೂರು ಟೀಂ ಗೆ ಒಂದ್ ಕಪ್ ಗೆದ್ದುಕೊಡೋಕಾಗ್ತಿಲ್ಲ’ ಕೈ ಹಿಸುಕಿಕೊಳ್ಳತೊಡಗಿದ್ರು ಕೊಹ್ಲಿ.

‘ಮೊದಲನೇ ಮ್ಯಾಚ್ ದೇವರಿಗೆ ಅಂದ್ಕೊಂಡು ಬಿಟ್ಟುಕೊಟ್ವಿ. ಜಗದ ತೀರ್ಪುಗಾರನಿಗೊಂದು ಪಂದ್ಯ ಕೊಟ್ಟ ಮೇಲೆ, ಮ್ಯಾಚ್ ನ ತೀರ್ಪುಗಾರನಾದ ನನಗೊಂದು ಬೇಡವೇ ಅಂದ್ಕೊಂಡು ಅಂಪೈರ್ ಎರಡನೇ ಮ್ಯಾಚ್ ಬಲಿ ತೆಗೆದುಕೊಂಡ್ರು.. ಹೀಗೆ ಒಬ್ಬೊಬ್ರೆ ಬಲಿ ತೆಗೆದುಕೊಳ್ತಾ ಹೋದ್ರೆ ನಾನು ಕಪ್ ಗೆಲ್ಲೋದು ಹೇಗೆ' ಕಣ್ಣೀರು ಕಪಾಳಕ್ಕೆ ಇಳಿಯಿತು.

‘ಏನಾಯ್ತೋ, ಇದೇನಾಯ್ತೋ.. ವಿಧಿಯಾಟ’ ಹಾಡಿನ ಸೌಂಡು ಮತ್ತಷ್ಟು ಜೋರಾಯ್ತು. ಗಂಡನ ಸ್ಥಿತಿ ಕಂಡು ಮಮ್ಮಲ ಮರುಗಿದ ಅನುಷ್ಕಾ, ಜ್ಯೋತಿಷಿಗೆ ಫೋನ್ ಮಾಡಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನ ಸರಣಿ ಸೋಲಿನ ಸಮಸ್ಯೆಗೆ ಪರಿಹಾರ ಕೇಳೋಕೇ ಅನುಷ್ಕಾರಿಂದ ಕರೆ ಬಂದಿದೆ ಎಂದುಕೊಂಡ ಜ್ಯೋತಿಷಿ, ಸಕಲ ಸಿದ್ಧತೆಯೊಂದಿಗೇ ಬಂದಿಳಿದರು.

‘ಆರ್‌ಸಿಬಿಯಲ್ಲಿ ಮೂಲ ದೋಷ (ಮಲ್ಯ ದೋಷ) ಇದೆ. ಬೇರೆ ಟೀಂನಲ್ಲಿದ್ದಾಗ ಸೂಪರ್ ಆಗಿ ಆಡೋರು ಇಲ್ಲಿ ಬಂದು ಫೇಲ್ ಆಗ್ತಾರೆ... ಇಲ್ಲಿ ಪ್ಲಾಫ್ ಆಗೋರು ಬೇರೆ ಟೀಮ್ ನಲ್ಲಿ ಹಿಟ್ ಆಗ್ತಾರೆ. ಕ್ರಿಸ್ ಗೇಲ್, ರಾಹುಲ್, ರಾಬಿನ್ ಆರ್ ಸಿಬಿಯಲ್ಲಿ ಸಕ್ಸಸ್ ಆಗ್ಲಿಲ್ಲ. ಆದರೆ, ಬೇರೆ ಕಡೆ ಹೋದಾಗ ಮ್ಯಾಚ್ ವಿನ್ನರ್ ಗಳಾದರು. ಬೇರೆ ಟೀಂ ನಲ್ಲಿದ್ದಾಗ ಬೌಲರ್ ಗಳ ಬೆವರಿಳಿಸುತ್ತಿದ್ದ ಡಿ ಕಾಕ್, ಮೆಕ್ಲಮ್ ಇಲ್ಲಿ ಸಪ್ಪೆಯಾದರು. ಇದಕ್ಕೆಲ್ಲ ಮೂಲ ದೋಷವೇ ಕಾರಣನಮ್ಮ, ಮೂಲದೋಷವೇ ಕಾರಣ' ಉದಾಹರಣೆ ಸಹಿತ ವಿವರಿಸಿದರು ಜ್ಯೋತಿಷಿ.

‘ಇದಕ್ಕೆ ಪರಿಹಾರ ಇಲ್ಲವೇ ಸ್ವಾಮೀಜಿ?’.

‘ಇದೆ ಕಣಮ್ಮ.. ಇದೆ’ ಎಕೊ ಸೆಟ್ಟಿಂಗ್ ಮೈಕ್ ನುಂಗಿದವರಂತೆ ಎರಡೆರಡು ಸಲ ಹೇಳತೊಡಗಿದರು ಗುರೂಜಿ, ‘ಸ್ವಾತಿ ನಕ್ಷತ್ರದವರನ್ನ ಸೋಲಿಸೋಕೆ ಯಾರಿಂದಲೂ ಆಗಲ್ಲ. ಅವರನ್ನ ಸೋಲಿಸೋಕೆ ಹೋದ್ರೆ ಅದು ರಿವರ್ಸ್ ಆಗೇ ಎದುರಾಳಿ ಟೀಮೇ ಸೋಲುತ್ತೆ. ಹಾಗಾಗಿ ಓಪನಿಂಗ್ ಬೌಲಿಂಗ್, ಬ್ಯಾಟಿಂಗ್ ನ ಸ್ವಾತಿ ನಕ್ಷತ್ರದವರಿಗೇ ಕೊಟ್ರೆ ಮ್ಯಾಚ್ ಗೆಲ್ಲಬಹುದು’ ಎಂದರು.

ಜ್ಯೋತಿಷಿಯ ಕನ್ನಡವನ್ನು ಅರ್ಧಂಬರ್ಧ ಅರ್ಥ ಮಾಡಿಕೊಂಡ ಅನುಷ್ಕಾ, ಪರಿಹಾರ ಸಿಕ್ಕೇ ಬಿಡ್ತು ಅನ್ನೋ ಖುಷಿಲಿ ಒಳಗೆ ಓಡಿ ಹೋದ್ರು, ‘ರೀ ನಿಮಗೆ ಸ್ವಾತಿ ಗೊತ್ತಾ?'. ‘ಅಯ್ಯೋ, ನನಗೆ ನೀನು ಬಿಟ್ರೆ ಯಾವ ಸ್ವಾತಿನೂ ಗೊತ್ತಿಲ್ಲ, ಸಾಕ್ಷಿನೂ ಗೊತ್ತಿಲ್ಲ ಕಣೆ’ ಯಾವುದೋ ಹೊಸ ಆರೋಪ ಮೈಮೇಲೆ ಬಂತು ಅನ್ನೋ ಚಿಂತೆಯಲ್ಲಿ ಹೇಳಿದ್ರು ಕೊಹ್ಲಿ.

ಇದ್ಯಾಕೋ ಬೇರೆ ರೂಟ್ ನಲ್ಲಿ ಹೋಗ್ತಿದೆ ಅಂದ್ಕೊಂಡು ಜ್ಯೋತಿಷಿಯೂ ಒಳಗೋಡಿ ಬಂದ್ರು. ಹೀಗೀಗೇ ಹೀಗೀಗೆ ಅಂತಾ ಪರಿಹಾರ ಹೇಳಿದ್ರು.

‘ಕ್ರಿಕೆಟ್‌ಗೂ, ಜ್ಯೋತಿಷ್ಯಕ್ಕೂ ಸಂಬಂಧ ಇದೆಯಾ?’ ಕೇಳಿದ್ರು ಕೊಹ್ಲಿ.

‘ಅಯ್ಯೋ ಯಾಕಿಲ್ಲ... ಮೊನ್ನೆ ಫ್ಯಾನ್ ಒಬ್ರು ಬಂದಾಗ ಧೋನಿ ಕಳ್ಳ-ಪೊಲೀಸ್ ಆಟ ಆಡಿದ್ರಲ್ಲ, ಆ ಐಡಿಯಾನಾ ನಾನೇ ಕೊಟ್ಟಿದ್ದು. ಅವರಿಗೆ ಕಾಡಿಸೋ ನೆಪದಲ್ಲಿ ಪಿಚ್ ಪ್ರದಕ್ಷಿಣೆ ಹಾಕಿದ್ರೆ ಗೆಲುವು ನಿಮ್ಮದಾಗುತ್ತೆ ಅಂದಿದ್ದೆ. ಅವರು ಹಾಗೇ ಮಾಡುದ್ರು, ಗೆದ್ರು’ ತಮ್ಮ ತ್ರಿಕಾಲ ಜ್ಞಾನದ ಶಕ್ತಿಯನ್ನು ಅನಾವರಣಗೊಳಿಸಿದರು ಜ್ಯೋತಿಷಿ.

‘ಸದ್ಯ ನಮ್ ಟೀಂನಲ್ಲಿ ಸ್ವಾತಿ ನಕ್ಷತ್ರದವರು ಯಾರೂ ಇಲ್ವಲ್ಲ’ ತಲೆಕೆರೆದುಕೊಂಡ್ರು ಕ್ಯಾಪ್ಟನ್. ಮತ್ತೊಮ್ಮೆ ಹರಾಜು ಪ್ರಕ್ರಿಯೆ ನಡೀತು.

ಧೋನೀದು ಸ್ವಾತಿ ನಕ್ಷತ್ರ ಇರಬಹುದು ಅಂದ್ರು ಜ್ಯೋತಿಷಿ.

‘ಆರ್ ಸಿಬಿಗೆ ಮಹೇಂದ್ರಸಿಂಗ್ ಧೋನಿ’ ಬ್ರೇಕಿಂಗ್ ನ್ಯೂಸ್ ಬಂತು.

‘ಇಲ್ಲಿಗೆ ನನ್ನ ಕ್ರಿಕೆಟ್‌ ಕರಿಯರ್ ಮುಗೀತು’ ಎಂದು ತಲೆ ಮೇಲೆ ಕೈ ಹೊತ್ಕೊಂಡ್ರು ಧೋನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT