ಈ ಕುರಿತು ಐಪಿಎಲ್ ಅಧಿಕೃತ ಟ್ವೀಟ್ ಮಾಡಿದ್ದು, ಸನ್ರೈಸರ್ಸ್ ತಂಡದ ಎಡಗೈ ವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದನ್ನು ದೃಢಪಡಿಸಿದೆ. ಅಲ್ಲದೆ ಅವರ ನಿಕಟ ಸಂಪರ್ಕದಲ್ಲಿದ್ದ ಆರು ಮಂದಿ ಪ್ರತ್ಯೇಕ ವಾಸದಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಸಹ ಆಟಗಾರ ವಿಜಯ್ ಶಂಕರ್, ತಂಡದ ವ್ಯವಸ್ಥಾಪಕ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯ ಅಂಜನಾ ವಣ್ಣನ್, ಲಾಜಿಸ್ಟಿಕ್ ಮ್ಯಾನೇಜರ್ ತುಷಾರ್ ಖಾಡೇಕರ್ ಹಾಗೂ ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಪ್ರತ್ಯೇಕ ವಾಸದಲ್ಲಿದ್ದಾರೆ.
ನಿಕಟ ಸಂಪರ್ಕದಲ್ಲಿದ್ದ ಇತರೆಲ್ಲ ಆಟಗಾರರನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಫಲಿತಾಂಶ ವರದಿಯಾಗಿವೆ. ಹಾಗಾಗಿ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.