ನಾಯಕ ಕೆ.ಎಲ್. ರಾಹುಲ್ ಸ್ಪೋಟಕ ಬ್ಯಾಟಿಂಗ್ (91*) ಹಾಗೂ ಹರಪ್ರೀತ್ ಬ್ರಾರ್ ಆಲ್ರೌಂಡರ್ ಪ್ರದರ್ಶನದ (ಅಜೇಯ 25 ರನ್ ಹಾಗೂ 3 ವಿಕೆಟ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಕೆ.ಎಲ್. ರಾಹುಲ್ ಅಮೋಘ ಅರ್ಧಶತಕ (91*) ಹಾಗೂ ಕ್ರಿಸ್ ಗೇಲ್ (46) ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ತಂಡವು 179 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಕಿಂಗ್ಸ್ ದಾಳಿಗೆ ತತ್ತರಿಸಿದ ಬೆಂಗಳೂರು ಎಂಟು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಮೊದಲು ಬ್ಯಾಟಿಂಗ್ನಲ್ಲಿ 25 ರನ್ಗಳ ಅಮೂಲ್ಯ ಇನ್ನಿಂಗ್ಸ್ ಸೇರಿದಂತೆ ನಾಯಕ ರಾಹುಲ್ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದ ಬ್ರಾರ್ ಬಳಿಕ ಬೌಲಿಂಗ್ನಲ್ಲಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ವಿಕೆಟ್ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯ ಪಾತ್ರ ವಹಿಸಿದರು.
ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ (35), ರಜತ್ ಪಾಟೀದಾರ್ (31), ಹರ್ಷಲ್ ಪಟೇಲ್, ಕೈಲ್ ಜೇಮಿಸನ್ (16*), ದೇವದತ್ತ ಪಡಿಕ್ಕಲ್ (7), ಗ್ಲೆನ್ ಮ್ಯಾಕ್ಸ್ವೆಲ್ (0), ಎಬಿ ಡಿ ವಿಲಿಯರ್ಸ್ (3), ಶಹಬಾಜ್ ಅಹಮ್ಮದ್ (8), ಡ್ಯಾನಿಯನ್ ಸ್ಯಾಮ್ಸ್ (3) ನಿರಾಸೆ ಮೂಡಿಸಿದರು. ಎಂಟನೇ ವಿಕೆಟ್ಗೆ 48 ರನ್ಗಳ ಜೊತೆಯಾಟ ಕಟ್ಟಿದ ಹರ್ಷಲ್ ಹಾಗೂ ಜೆಮಿಸನ್, ಪಂಜಾಬ್ ಗೆಲುವನ್ನು ಅಲ್ಪ ವಿಳಂಬಗೊಳಿಸಿದರು.
ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಅವರನ್ನು ಸತತವಾದ ಎಸೆತಗಳಲ್ಲಿ ಕ್ಲೀನ್ ಬೌಲ್ಡ್ ಮಾಡಿದ ಬ್ರಾರ್, ಉಜ್ವಲ ಭವಿಷ್ಯವನ್ನು ಸಾರಿದರು. ಬಳಿಕ ಎಬಿ ಡಿ ಅವರಿಗೂ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಕೈಚಳಕ ಮೆರೆದರು. ಐಪಿಎಲ್ನಲ್ಲಿ ಬ್ರಾರ್ ಗಳಿಸಿದ ಮೊದಲ ಮೂರು ವಿಕೆಟ್ ಇದಾಗಿದೆ.
ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಒಂದು ಮೇಡನ್ ಸೇರಿದಂತೆ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇನ್ನುಳಿದಂತೆ ರವಿ ಬಿಷ್ಣೋಯಿ ಎರಡು ಮತ್ತು ರಿಲೇ ಮೆರೆಡಿತ್ ಹಾಗೂ ಕ್ರಿಸ್ ಜಾರ್ಡನ್ ತಲಾ ಒಂದು ವಿಕೆ್ಟ್ ಕಿತ್ತು ಮಿಂಚಿದರು.
ಮೊದಲು ಬ್ಯಾಟಿಂಗ್ ಬಳಿಕ ಬೌಲಿಂಗ್ನಲ್ಲೂ ಮಿಂಚಿದ ಹರಪ್ರೀತ್ ಬ್ರಾರ್, ಒಂದೇ ಓವರ್ನಲ್ಲಿ ಡಬಲ್ ಆಘಾತ ನೀಡುವ ಮೂಲಕ ತಿರುಗೇಟು ನೀಡಿದರು. ಸೆಟ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (35) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ರನ್ನು (0) ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಆರ್ಸಿಬಿ 62 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.