ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಧೋನಿ ಬಿಟ್ಟಿದ್ದು ಒಂದು ಅಚ್ಚರಿಯಾದರೆ, ಜಡೇಜ ಅವರನ್ನು ನಾಯಕತ್ವದ ಪಟ್ಟಕ್ಕೇರಿಸಿದ್ದು ಅನಿರೀಕ್ಷಿತ. ಏಕೆಂದರೆ, ಸುಮಾರು ಒಂದೂವರೆ ದಶಕದಿಂದ ಭಾರತ ತಂಡವನ್ನು ಎಲ್ಲ ಮಾದರಿಗಳಲ್ಲಿಯೂ ಪ್ರತಿನಿಧಿಸುತ್ತಿರುವ ಜಡೇಜ ಹೆಸರು ಯಾವತ್ತೂ ನಾಯಕತ್ವದ ರೇಸ್ನಲ್ಲಿ ಕೇಳಿಬಂದಿರಲಿಲ್ಲ. ಇತ್ತೀಚೆಗೆ ವಿರಾಟ್ ಬದಲಿಗೆ ನಾಯಕತ್ವದ ಹೊಣೆ ಯಾರಿಗೆಂಬ ಪ್ರಶ್ನೆ ಬಂದಾಗ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರ ಹೆಸರುಗಳು ಕೇಳಿಬಂದಿದ್ದವು.