ಮುಂಬೈ: ಐಪಿಎಲ್ 2022ರಲ್ಲಿ ಸತತ ನಾಲ್ಕು ಸೋಲುಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಹಾದಿಗೆ ಮರಳಿದೆ. ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ 23 ರನ್ ಅಂತರದ ಗೆಲುವು ದಾಖಲಿಸಿರುವ ಸಿಎಸ್ಕೆ, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.
ಈ ನಡುವೆ ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಲು ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿರುವ ಮಾಸ್ಟರ್ ಪ್ಲ್ಯಾನ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆರ್ಸಿಬಿ ಬ್ಯಾಟಿಂಗ್ ವೇಳೆ ಮುಕೇಶ್ ಚೌಧರಿ ಎಸೆದ ಇನ್ನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದರು. ಕೊನೆ ಕ್ಷಣದಲ್ಲಿ ಧೋನಿ ಮಾಡಿರುವ ಫೀಲ್ಡಿಂಗ್ ಬದಲಾವಣೆಯು ಕೊಹ್ಲಿ ವಿಕೆಟ್ ಪತನಕ್ಕೆ ಕಾರಣವಾಯಿತು. ಡೀಪ್ ಸ್ಕ್ವೇರ್ ಲೆಗ್ ಫೀಲ್ಡರ್ ನಿಲ್ಲುವ ಜಾಗದತ್ತ ಚಲಿಸಲು ಧೋನಿ ಫೈನ್ ಲೆಗ್ ಫೀಲ್ಡರ್ಗೆ ಸನ್ನೆ ಮಾಡಿದರು.
ಬಳಿಕದ ಎಸೆತದಲ್ಲಿ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶಿವಂ ದುಬೆ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಪರಿಣಾಮ ಆರ್ಸಿಬಿ ವಿರುದ್ಧ ಮೇಲುಗೈ ಸಾಧಿಸಲು ಚೆನ್ನೈಗೆ ಸಾಧ್ಯವಾಯಿತು.
ಪ್ರಸಕ್ತ ಸಾಲಿನ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ಆದರೆ ಮೈದಾನದಲ್ಲಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಬದಲಾವಣೆಯಲ್ಲಿ ನೂತನ ನಾಯಕ ರವೀಂದ್ರ ಜಡೇಜ ಅವರಿಗೆ ಅಮೂಲ್ಯ ಸಲಹೆಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.