ದುಬೈ: ಋತುರಾಜ್ ಗಾಯಕವಾಡ್ ಮತ್ತು ಬ್ರಾವೋ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ರನ್ ಗಳಿಸಿದರು ಎಂದು ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಮೈದಾನಕ್ಕಿಳಿದ ಗಾಯಕವಾಡ್, ಅಜೇಯ 88 ರನ್ ಗಳಿಸಿ ತಂಡ 157 ರನ್ ಗುರಿ ನೀಡಲು ನೆರವಾದರು. ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಬ್ರಾವೋ 8 ಎಸೆತಗಳಲ್ಲಿ 23 ರನ್ ಸಿಡಿಸಿದರು.
ಅತ್ಯುತ್ತಮ ಬೌಲಿಂಗ್ ಪಡೆ ಹೊಂದಿರುವ ಚೆನ್ನೈ ತಂಡ ಐಪಿಎಲ್ 14ನೇ ಆವೃತ್ತಿಯ ದ್ವಿತಿಯಾರ್ಧದ ಮೊದಲ ಪಂದ್ಯವನ್ನು 20 ರನ್ಗಳಿಂದ ಗೆದ್ದುಕೊಂಡಿತು. 157 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ, ಎಂಟು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.
'ನಾವು ಸುಮಾರು 30 ರನ್ಗೆ4 ವಿಕೆಟ್ ಕಳೆದುಕೊಂಡಾಗ ಒಂದು ಗೌರವಾನ್ವಿತ ಮೊತ್ತ ಪೇರಿಸಲು ಇಚ್ಛಿಸಿದ್ದೆವು. ಋತು ಮತ್ತು ಬ್ರಾವೋ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ರನ್ ಮಾಡಿದರು. ನಾವು 140 ರನ್ ನಮ್ಮನಿರೀಕ್ಷೆಯಾಗಿತ್ತು.160ರ ಹತ್ತಿರದ ಮೊತ್ತ ನಿಜಕ್ಕೂ ಅದ್ಭುತವಾದುದು’ ಎಂದು ಧೋನಿ ಪಂದ್ಯದ ಬಳಿಕ ಹೇಳಿದರು.
‘ರಾಯುಡು ಗಾಯಗೊಂಡು ನಿರ್ಗಮಿಸಿದ ಬಳಿಕ ಕಮ್ಬ್ಯಾಕ್ ಮಾಡುವುದು ಕಷ್ಟಕರವಾಗಿತ್ತು, ಆದರೆ, ನಾವು ತುಂಬಾ ಜಾಗರೂಕತೆಯಿಂದ ಬ್ಯಾಟಿಂಗ್ ಮಾಡಿ, ಅದ್ಭುತವಾಗಿ ಮುಗಿಸಿದೆವು. ಒಬ್ಬ ಬ್ಯಾಟ್ಸ್ಮನ್ ಕೊನೆಯವರೆಗೂ ಬ್ಯಾಟಿಂಗ್ಮಾಡುವುದು ಸಂವೇದನಾಶೀಲವಾದುದು’ ಎಂದು ಧೋನಿ ಹೊಗಳಿದ್ದಾರೆ
ಗಾಯಗೊಂಡು ನಿರ್ಗಮಿಸಿದ ಅಂಬಟಿ ರಾಯುಡು ಮುಂದಿನ ಪಂದ್ಯಕ್ಕೆ ಲಭ್ಯರಾಗುವ ವಿಶ್ವಾಸ ಇದೆ ಎಂದು ಧೋನಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.