ಜೈಪುರ: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು, ಬುಧವಾರ ಇಲ್ಲಿ ಆರಂಭವಾಗುವ ಭಾರತ ಎದುರಿನ ಟಿ–20 ಸರಣಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ನವೆಂಬರ್ 25ರಂದು ಕಾನ್ಪುರದಲ್ಲಿ ಆರಂಭವಾಗುವ ಟೆಸ್ಟ್ ಸರಣಿಯ ಕಡೆ ಪೂರ್ಣ ಗಮನಹರಿಸಲು ಅವರು ಬಯಸಿದ್ದಾರೆ.
ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಅವರು ಬ್ಲ್ಯಾಕ್ ಕ್ಯಾಪ್ಸ್ ತಂಡದ ನೇತೃತ್ವ ವಹಿಸಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ಪಂದ್ಯಗಳಿರುವ ಟಿ–20 ಸರಣಿಯ ಮೊದಲ ಪಂದ್ಯ ಬುಧವಾರ ರಾತ್ರಿ ಇಲ್ಲಿ ನಡೆಯಲಿದೆ. ಎರಡನೇ ಪಂದ್ಯ ರಾಂಚಿಯಲ್ಲಿ ಶುಕ್ರವಾರ ಮತ್ತು ಅಂತಿಮ ಪಂದ್ಯ ಕೋಲ್ಕತ್ತದಲ್ಲಿ ಭಾನುವಾರ ನಡೆಯಲಿದೆ.
ಟೆಸ್ಟ್ ಮಾತ್ರ ಆಡುವ ತಂಡದ ಜೊತೆ ಸಿದ್ಧತೆಯಲ್ಲಿ ವಿಲಿಯಮ್ಸನ್ ಸೇರಿಕೊಳ್ಳಲಿದ್ದಾರೆ.
‘ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ ಎರಡೂ ಸರಣಿಗೆ ಲಭ್ಯರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಮೀನಖಂಡದ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿದ್ದು, ಅವರು ಟಿ–20 ಸರಣಿಗೂ ಲಭ್ಯರಾಗುವ ನಿರೀಕ್ಷೆ ಮೂಡಿದೆ.