ನವದೆಹಲಿ: ಕಳೆದ ಬಾರಿ ಐಪಿಎಲ್ ಪಂದ್ಯದಲ್ಲಿ ಅನುಭವಿಸಿದ ಸೋಲು ಬಹಳಷ್ಟು ಕಲಿಸಿದೆ. ಆಡಳಿತ ಮಂಡಳಿಯಿಂದಲೂ ಸಾಕಷ್ಟು ಬೆಂಬಲ ದೊರೆಯಿತು. ಹೀಗಾಗಿಯೇ ಈ ಬಾರಿ ನಾವು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.
ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ 8 ವಿಕೆಟ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತಂಡ ಜಯಭೇರಿ ಬಾರಿಸಿತು. ಗೆಲುವಿನ ಬಳಿಕ ಸ್ಮೃತಿ ಮಂದಾನ ಮಾತನಾಡಿ ಖುಷಿ ಹಂಚಿಕೊಂಡರು.
‘ಕಳೆದ ವರ್ಷ ಆಟಗಾರ್ತಿಯರಾಗಿ, ನಾಯಕಿಯಾಗಿ ಮತ್ತು ತಂಡವಾಗಿ ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ. ನಮ್ಮ ತಂಡದ ಬಗ್ಗೆ ಹೆಮ್ಮೆ ಪಡುತ್ತೇನೆ. ಹಲವು ಏರಿಳಿತಗಳನ್ನು ಅನುಭವಿಸಿದ್ದೇವೆ, ದೆಹಲಿಯಲ್ಲಿಯೇ ಎರಡು ಪಂದ್ಯದಲ್ಲಿ ಸೋಲು ಕಂಡಿದ್ದೆವು. ಇವೆಲ್ಲದರ ನಡುವೆಯೂ ಗೆಲುವು ಸಾಧಿಸಿರುವುದು ಖುಷಿ ನೀಡಿದೆ’ ಎಂದರು.
‘ಟ್ರೋಫಿ ಗೆದ್ದಿದ್ದು ನಾನೊಬ್ಬನೇ ಅಲ್ಲ, ತಂಡವೇ ಗೆದ್ದಿದೆ. ಫ್ರಾಂಚೈಸಿಯಾಗಿ ಆರ್ಸಿಬಿ ಗೆಲ್ಲುವುದು ನಿಜಕ್ಕೂ ವಿಶೇಷ. ಈ ಗೆಲುವು ಖಂಡಿತವಾಗಿಯೂ ಟಾಪ್ ಐದರಲ್ಲಿ ಒಂದಾಗಿದೆ. ಕಪ್ ಯಾವಾಗಲೂ ಬರುತ್ತದೆ. ಆದರೆ ಈ ಬಾರಿ ನಾನು ‘ಈ ಸಲ ಕಪ್ ನಮ್ದು’ ಎಂದು ಹೇಳಲು ಬಯಸುತ್ತೇನೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಆರ್ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ. ಆದರೆ ಇದೀಗ ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಡಬ್ಲ್ಯುಪಿಎಲ್ನ ಎರಡನೇ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಿಸಿದೆ.