ಮೆಲ್ಬರ್ನ್: ಅಗತ್ಯ ಬಿದ್ದರೆ ಟಿ–20 ವಿಶ್ವಕಪ್ನ ಪ್ರತೀ ಪಂದ್ಯದಲ್ಲೂ ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡಲು ಸಿದ್ಧವಿರುವುದಾಗಿಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತವು ಕಳೆದ ಒಂದು ವರ್ಷದಲ್ಲಿ ಟಿ–20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು 29 ಕ್ರಿಕೆಟಿಗರನ್ನು ಬಳಸಿದೆ. ತಂಡದ ರಚನೆ, ಫಾರ್ಮ್, ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಬಳಸಲಾಗುತ್ತಿದೆ.
ಯಾವ ಆಟಗಾರರು ಸೂಕ್ತ ಎಂಬುದನ್ನು ಅವರ ಫಾರ್ಮ್ ಅವಲಂಬಿಸಿ ಆಯ್ಕೆ ಮಾಡಬೇಕಾಗುತ್ತದೆ. ಸಾಕಷ್ಟು ಡೇಟಾ ಅಧ್ಯಯನ ಮಾಡಿದ್ದೇವೆ. ಆಡುವ 11ರ ಬಳಗದಲ್ಲಿ ಬದಲಾವಣೆಗಳ ಬಗ್ಗೆ ನಾನು ಮುಕ್ತವಾಗಿದ್ದೇವೆ. ಪ್ರತೀ ಪಂದ್ಯದಲ್ಲಿ ಒಂದು ಅಥವಾ ಎರಡು ಬದಲಾವಣೆಗೆ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಐಸಿಸಿಯ ದೊಡ್ಡ ಕ್ರೀಡಾಕೂಟಗಳಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಿಲ್ಲ ಎಂಬುದನ್ನು ಒಪ್ಪಿಕೊಂಡ ಭಾರತ ತಂಡದ ನಾಯಕ, ತಮಗೆ ಒತ್ತಡಕ್ಕಿಂತ ಹೆಚ್ಚಾಗಿ ಸವಾಲು ಇದೆ ಎಂದು ಹೇಳಿದರು.
‘ಒತ್ತಡವು ನಿರಂತರವಾಗಿದೆ. ಆದರೆ, ಪಾಕಿಸ್ತಾನದ ವಿರುದ್ಧ ಗೆಲ್ಲುವುದು ಸವಾಲು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನಾವು ಒಂಬತ್ತು ವರ್ಷಗಳಿಂದ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ' ಎಂದು ರೋಹಿತ್ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಇಂದಿನಿಂದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತ ಆರಂಭವಾಗಲಿದೆ.
ಒಟ್ಟು ಏಳು ನಗರಗಳಲ್ಲಿ 33 ಪಂದ್ಯಗಳು ನಡೆಯಲಿವೆ. ಭಾರತ ತಂಡವು ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.