ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಭಾರತದ ಕ್ರಿಕೆಟ್‌ಗೆ ಮತ್ತೊಬ್ಬ ಅಜರ್‌!

Last Updated 19 ಜನವರಿ 2021, 1:01 IST
ಅಕ್ಷರ ಗಾತ್ರ

ಮೊಹಮ್ಮದ್‌ ಅಜರುದ್ದೀನ್‌... ಈ ಹೆಸರು ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಹೈದರಾಬಾದ್‌ನ ಅಜರ್‌, ವಿಶ್ವ ಕ್ರಿಕೆಟ್‌ ಕಂಡ ಶ್ರೇಷ್ಠ ಆಟಗಾರ. ಜೊತೆಗೆ ಚಾಣಾಕ್ಷ ನಾಯಕನೆಂದೇ ಗುರ್ತಿಸಿಕೊಂಡಿದ್ದವರು. ಅವರ ಮುಂದಾಳತ್ವದಲ್ಲಿ ಭಾರತ ತಂಡವು ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿತ್ತು. 2000ರಲ್ಲಿ ನಡೆದಿದ್ದ ಮ್ಯಾಚ್‌ ಫಿಕ್ಸಿಂಗ್‌ ಹಗರಣ ಅವರ ಕ್ರೀಡಾ ಬದುಕಿಗೆ ಉರುಳಾಗಿ ಪರಿಣಮಿಸಿತ್ತು. ಅದಕ್ಕಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನಿಂದ (ಐಸಿಸಿ) ಆಜೀವ ನಿಷೇಧಕ್ಕೂ ಗುರಿಯಾಗಿದ್ದರು.

ನಿಷೇಧ ಕ್ರಮದ ವಿರುದ್ಧ ಕಾನೂನು ಸಮರ ಸಾರಿದ್ದ ಅಜರ್‌ ಈ ಹೋರಾಟದಲ್ಲಿ ಗೆದ್ದು (2012ರಲ್ಲಿ) ಬೀಗಿದ್ದರು. ಅವರು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಗಾದಿಗೆ ಏರುವ (2019) ಮೂಲಕ ಹೊಸ ಇನಿಂಗ್ಸ್‌ ಶುರು ಮಾಡಿರುವುದು ಎಲ್ಲರಿಗೂ ಗೊತ್ತಿದೆ.

ಮೊಹಮ್ಮದ್‌ ಅಜರುದ್ದೀನ್‌ ಮತ್ತು ಸೌರವ್‌ ಗಂಗೂಲಿ
ಮೊಹಮ್ಮದ್‌ ಅಜರುದ್ದೀನ್‌ ಮತ್ತು ಸೌರವ್‌ ಗಂಗೂಲಿ

ಅಂದ ಹಾಗೆ.. ಮುತ್ತಿನ ನಗರಿಯ ಕಲಾತ್ಮಕ ಆಟಗಾರನ ಕ್ರೀಡಾ ಬದುಕನ್ನು ಮೆಲುಕು ಹಾಕಲು ಕಾರಣವಿದೆ. ಈಗ ಕ್ರಿಕೆಟ್‌ ಅಂಗಳದಲ್ಲಿ ಮತ್ತೊಬ್ಬ ಅಜರುದ್ದೀನ್‌ನ ಅಬ್ಬರ ಶುರುವಾಗಿದೆ. ಕೇರಳದ ಕಾಸರಗೋಡಿನ ಈ ಆಟಗಾರ ಹೋದ ವಾರ ನಡೆದಿದ್ದ ಮುಷ್ತಾಕ್‌ ಅಲಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಶತಕ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಅಜ್ಮಲ್‌, ಅಜರುದ್ದೀನ್‌ ಆದ ಕಥೆ..

ಕೇರಳದ ಅಜರ್‌ ಜನಿಸಿದ್ದು ಕಾಸರಗೋಡಿನ ತಳಂಗೆರೆಯಲ್ಲಿ. ಅವರ ಮೂಲ ಹೆಸರು ಅಜ್ಮಲ್‌. ಅವರ ಹಿರಿಯ ಸಹೋದರ ಕಮರುದ್ದೀನ್‌ಗೆ ಕ್ರಿಕೆಟ್‌ ಎಂದರೆ ಪ್ರಾಣ. ಮೊಹಮ್ಮದ್‌ ಅಜರುದ್ದೀನ್‌ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ತನ್ನ ತಮ್ಮನೂ ಅಜರ್‌ ಅವರಂತೆ ಭಾರತೀಯ ಕ್ರಿಕೆಟ್‌ನಲ್ಲಿ ಬೆಳಗಬೇಕು ಎಂಬುದು ಕಮರುದ್ದೀನ್‌ ಕನಸಾಗಿತ್ತು. ಹೀಗಾಗಿಯೇ ಅವರು ಎಳವೆಯಲ್ಲೇ ಸಹೋದರನ ಕೈಗೆ ಕ್ರಿಕೆಟ್‌ ಬ್ಯಾಟ್‌ ಕೊಟ್ಟರು. ಆತನಿಗೆ ಮೊಹಮ್ಮದ್‌ ಅಜರುದ್ದೀನ್‌ ಎಂದು ಹೆಸರನ್ನೂ ಇಟ್ಟರು.

ಅಜ್ಮಲ್‌ ಅವರದ್ದು ಕ್ರಿಕೆಟ್‌ ಕುಟುಂಬ. ಅವರಿಗೆ ಏಳು ಮಂದಿ ಸಹೋದರರು. ಅವರೆಲ್ಲರೂ ಕ್ರಿಕೆಟ್‌ ಆಡಿದವರೇ. ಹೀಗಿದ್ದರೂ ಅವರ‍್ಯಾರಿಗೂ ಈ ಆಟದಲ್ಲಿ ದೊಡ್ಡ ಹೆಸರು ಮಾಡಲು ಆಗಲಿಲ್ಲ. ಸಹೋದರರನ್ನು ಬಹುವಾಗಿ ಕಾಡುತ್ತಿದ್ದ ಆ ಕೊರಗನ್ನು ಅಜರ್‌ ನೀಗಿಸಿದ್ದಾರೆ. ದಾಖಲೆಯ ಶತಕ ಬಾರಿಸುವ ಮೂಲಕ ಅಣ್ಣಂದಿರೆಲ್ಲಾ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.

ವಾಟ್ಮೋರ್‌ ‘ವಿಲನ್’ ಆಗಿದ್ದು...

ಬಲಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್‌ ಆಗಿರುವ ಅಜರುದ್ದೀನ್‌, ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟಿದ್ದು 2015ರಲ್ಲಿ. ಆ ವರ್ಷದ ನವೆಂಬರ್‌ 15ರಂದು ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷದ ಡಿಸೆಂಬರ್‌ 10ರಂದು ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲಿ (ಲಿಸ್ಟ್‌ ಎ) ಆಡುವ ಅವಕಾಶ ಅವರಿಗೆ ಒಲಿದಿತ್ತು. ಚೊಚ್ಚಲ ರಣಜಿ ಪಂದ್ಯದಲ್ಲೇ (ಗೋವಾ ವಿರುದ್ಧ) ಅವರು 31 ರನ್‌ ಬಾರಿಸಿ ಭರವಸೆ ಮೂಡಿಸಿದ್ದರು.

ಡೇವ್‌ ವಾಟ್ಮೋರ್‌, ಕೇರಳ ತಂಡದ ಮುಖ್ಯ ಕೋಚ್‌ ಹುದ್ದೆಗೆ ಏರಿದ(2017–18) ನಂತರ ಅಜರುದ್ದೀನ್‌ ಕ್ರಿಕೆಟ್‌ ಬದುಕು ಮಸುಕಾಗತೊಡಗಿತು. ಆರಂಭಿಕನಾಗಿ ಆಡುತ್ತಿದ್ದ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವಂತೆ ವಾಟ್ಮೋರ್‌ ಸೂಚಿಸಿದ್ದರು. ಇದರಿಂದಾಗಿ ಅವರ ಸಾಮರ್ಥ್ಯ ಕ್ಷೀಣಿಸತೊಡಗಿತ್ತು. ವಾಟ್ಮೋರ್‌ ಇದ್ದಷ್ಟು ಕಾಲ ಒಲ್ಲದ ಮನಸ್ಸಿನಿಂದಲೇ ಮಧ್ಯಮ ಕ್ರಮಾಂಕದಲ್ಲಿ ಆಡಿದರು.

‘ವಾಟ್ಮೋರ್‌ ಅವರು ಕೋಚ್‌ ಗಾದಿಗೆ ಏರುವ ಮುನ್ನ ತಂಡದಲ್ಲಿ ಆರಂಭಿಕನ ಪಾತ್ರ ನಿಭಾಯಿಸುತ್ತಿದ್ದೆ. ನಂತರ ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಸೂಚಿಸಲಾಯಿತು. ಅದು ನನಗೆ ಒಗ್ಗುವ ಕ್ರಮಾಂಕವಾಗಿರಲಿಲ್ಲ. ಆದರೂ ಅನಿವಾರ್ಯವಾಗಿ ಆಡಬೇಕಾಯಿತು’ ಎಂದು ಅಜರುದ್ದೀನ್‌ ಹಿಂದೊಮ್ಮೆ ಹೇಳಿದ್ದರು.

ಬದುಕು ಬದಲಿಸಿದ ಆ ಇನಿಂಗ್ಸ್‌...

ಇದೇ ತಿಂಗಳ 13ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಬಲ ಮುಂಬೈ ಎದುರು ನಡೆದಿದ್ದ ಮುಷ್ತಾಕ್‌ ಅಲಿ ಟ್ರೋಫಿ ಪಂದ್ಯ ಅಜರುದ್ದೀನ್‌ ಬದುಕಿಗೆ ಹೊಸ ತಿರುವು ನೀಡಿತು. ಆ ಹಣಾಹಣಿಯಲ್ಲಿ ಅವರು 37 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಟಿ–20 ಮಾದರಿಯಲ್ಲಿ ಅತಿ ವೇಗವಾಗಿ ಶತಕ ದಾಖಲಿಸಿದ ಭಾರತದ ಮೂರನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಅದಕ್ಕೂ ಮುನ್ನ ರಿಷಭ್‌ ಪಂತ್‌ (32 ಎಸೆತ) ಮತ್ತು ರೋಹಿತ್‌ ಶರ್ಮಾ (35 ಎಸೆತ) ಈ ಸಾಧನೆ ಮಾಡಿದ್ದರು. ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಶತಕ ಬಾರಿಸಿದ ಕೇರಳದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಅವರು ಭಾಜನರಾದರು.

ಒಟ್ಟು 54 ಎಸೆತಗಳನ್ನು ಎದುರಿಸಿದ್ದ ಅಜರ್‌ 137 ರನ್‌ ಬಾರಿಸಿ ಅಜೇಯವಾಗುಳಿದಿದ್ದರು. 9 ಬೌಂಡರಿ ಹಾಗೂ 11 ಸಿಕ್ಸರ್‌ಗಳನ್ನೊಳಗೊಂಡ ಅವರ ಇನಿಂಗ್ಸ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವೀರೇಂದ್ರ ಸೆಹ್ವಾಗ್‌, ಹರ್ಷ ಬೋಗ್ಲೆ ಸೇರಿದಂತೆ ಅನೇಕರು ಅಜರ್‌ ಆಟವನ್ನು ಕೊಂಡಾಡಿದ್ದರು. ಕೇರಳ ಕ್ರಿಕೆಟ್‌ ಸಂಸ್ಥೆಯು (ಕೆಸಿಎ) ಅಜರ್‌ಗೆ ರನ್‌ವೊಂದಕ್ಕೆ ₹1,000ದಂತೆ ಒಟ್ಟು ₹1.37 ಲಕ್ಷ ಬಹುಮಾನ ಕೂಡ ಪ್ರಕಟಿಸಿತ್ತು.

ಅಜರ್‌ ಅವರ ಕೆಚ್ಚೆದೆಯ ಬ್ಯಾಟಿಂಗ್‌ನಿಂದಾಗಿ ಕೇರಳ ತಂಡಕ್ಕೆ ಸ್ಮರಣೀಯ ಗೆಲುವೂ ಒಲಿದಿತ್ತು. ಮುಂಬೈ ಎದುರು ಕೇರಳ ಜಯಿಸಿದ ಮೊದಲ ಪಂದ್ಯ ಅದಾಗಿತ್ತು.

‘ನನ್ನದು ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್‌. ಹೀಗಾಗಿ ಆರಂಭಿಕ ಕ್ರಮಾಂಕದಲ್ಲಿ ಆಡಲು ಅನುವು ಮಾಡಿಕೊಡುವಂತೆ ಕೋಚ್‌ ಟಿನು ಯೊಹಾನನ್‌ ಅವರಿಗೆ ಮನವಿ ಮಾಡಿದ್ದೆ. ಅದಕ್ಕವರು ಒಪ್ಪಿಕೊಂಡರು. ಈ ಬದಲಾವಣೆ ನನ್ನಲ್ಲಿ ಹೊಸ ಹುರುಪು ಮೂಡಿಸಿತು. ಮುಂಬೈ ಎದುರು ಶತಕ ಬಾರಿಸಲೂ ಸಾಧ್ಯವಾಯಿತು’ ಎಂದು ಅಜರುದ್ದೀನ್‌, ಕೋಚ್‌ ಸಹಕಾರವನ್ನು ಸ್ಮರಿಸಿದ್ದರು.

‘ಎರಡು ಸಲ (ಹೈದರಾಬಾದ್‌ ಮತ್ತು ಕಾಸರಗೋಡಿನಲ್ಲಿ) ಅಜರ್‌ ಅವರನ್ನು ಭೇಟಿ ಮಾಡಿದ್ದೇನೆ. ನನಗೆ ಅವರ ಹೆಸರು ಇಟ್ಟಿರುವ ಹಿನ್ನೆಲೆಯ ಬಗ್ಗೆಯೂ ತಿಳಿಸಿದ್ದೆ. ನನ್ನಣ್ಣನಂತೆ ನಾನು ಅಜರ್‌ ಅವರ ಹುಚ್ಚು ಅಭಿಮಾನಿಯಲ್ಲ. ಅವರ ಆಟವನ್ನೂ ಹೆಚ್ಚಾಗಿ ನೋಡಿಲ್ಲ’ ಎಂದೂ ಅವರು ವಿನಯದಿಂದ ಒಪ್ಪಿಕೊಳ್ಳುತ್ತಾರೆ.

ಗಮನ ಸೆಳೆದ ‘ಬಕೆಟ್‌ ಲಿಸ್ಟ್‌’...

ಶತಕ ಸಿಡಿಸಿದ ಬೆನ್ನಲ್ಲೇ ಅಜರುದ್ದೀನ್‌ ಅವರು ಪ್ರಕಟಿಸಿರುವ ‘ಬಕೆಟ್‌ ಲಿಸ್ಟ್‌’ (ತಮ್ಮ ಬದುಕಿನ ಬಯಕೆಗಳು) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮೊದಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಬೇಕು. ನಂತರ ಮರ್ಸಿಡಿಸ್‌ ಬೆಂಜ್‌ ಕಾರು ಖರೀದಿಸಬೇಕು ಎಂಬುದು ಅವರ ಅಭಿಲಾಷೆ.

ರಣಜಿ ಋತುವೊಂದರಲ್ಲಿ ನಾಲ್ಕು ಶತಕಗಳನ್ನು ಸಿಡಿಸಬೇಕು, 2023ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಹೆಬ್ಬಯಕೆಗಳನ್ನೂ ಅವರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT