ನವದೆಹಲಿ: ಇನಿಂಗ್ಸ್ ಮುನ್ನಡೆಯ ಒತ್ತಡದಲ್ಲೇ ಆಡಿದಂತೆ ಕಂಡ ಕರ್ನಾಟಕ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಬುಧವಾರ ರೈಲ್ವೇಸ್ ಎದುರು ಪರದಾಡಿತು. ಆದರೆ ಮೂರನೇ ದಿನದಾಟದಲ್ಲಿ ಅಲ್ಪ ಮುನ್ನಡೆ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಯಿತು.
ಈ ಬಾರಿ ರೈಲ್ವೇಸ್ ತಂಡದ ನೀರಸ ಪ್ರದರ್ಶನದ ಜೊತೆಗೆ ಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ಮೊದಲ ದಿನದಾಟ ನೋಡಿದಾಗ ಕರ್ನಾಟಕ ಈ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯುವಂತೆ ಕಂಡಿತ್ತು. ಆದರೆ ಮೂರನೇ ದಿನ ಅಮಿತ್ ಮಿಶ್ರಾ (70ಕ್ಕೆ5) ಮತ್ತು ಹಿಮಾಂಶು ಸಂಗ್ವಾನ್ (47ಕ್ಕೆ3) ಅವರ ಬೌಲಿಂಗ್ ಎದುರು ತಿಣುಕಾಡಿತು.
ಮಂಗಳವಾರ 7 ವಿಕೆಟ್ಗೆ 160 ರನ್ ಗಳಿಸಿದ್ದ ರೈಲ್ವೇಸ್ ತಂಡವನ್ನು 182 ರನ್ನಿಗೆ ಆಲೌಟಾಯಿತು.ಪ್ರತೀಕ್ ಜೈನ್ 38 ರನ್ನಿಗೆ 5 ವಿಕೆಟ್ ಗಳಿಸಿದರೆ, ಮಿಥುನ್ ನಾಲ್ಕು ವಿಕೆಟ್ ಪಡೆದರು. ಕರ್ನಾಟಕ, ದಿನದ ಅಂತ್ಯಕ್ಕೆ 9 ವಿಕೆಟ್ಗೆ 199 ರನ್ ಗಳಿಸಿದೆ.ಮುನ್ನಡೆ 17 ರನ್. ಗುರುವಾರ ಪಂದ್ಯದ ಕೊನೆಯ ದಿನವಾಗಿದೆ.
ದೇವದತ್ತ ಪಡಿಕ್ಕಲ್ (75 ಎಸೆತಗಳಲ್ಲಿ 5%) ಬೆಳಿಗ್ಗೆ ಅರ್ಧ ಶತಕ ಗಳಿಸಿದ ನಂತರ, ಮಧ್ಯಾಹ್ನ ಶರತ್ ಶ್ರೀನಿವಾಸ್ ಅರ್ಧ ಶತಕ (ಬ್ಯಾಟಿಂಗ್ 56, 164 ಎ, 5 ಬೌಂ) ಗಳಿಸಿದ್ದರಿಂದ ಕರ್ನಾಟಕ ಮುಖಭಂಗ ತಪ್ಪಿಸಿಕೊಂಡಿತು.
ಕೆ. ಗೌತಮ್ ಅವರ ಆಕ್ರಮಣಕಾರಿ ಆಟ ಕಳೆಗುಂದಿದ ದಿನದಾಟಕ್ಕೆ ಕೆಲಕಾಲ ಜೀವಕಳೆ ತಂದಿತು. 110 ರನ್ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಆಡಿದ ಗೌತಮ್ ಕೇವಲ 31 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಒಳಗೊಂಡ 41 ರನ್ ಹೊಡೆದರು. ಶ್ರೀನಿವಾಸ್ ಜೊತೆ ಏಳನೆ ವಿಕೆಟ್ಗೆ ಗೌತಮ್ ಸೇರಿಸಿದ 64 ರನ್ಗಳಿಂದಾಗಿ ಕರ್ನಾಟಕದ ಮೇಲಿನ ಒತ್ತಡ ಒಂದಿಷ್ಟು ಕಡಿಮೆಯಾಯಿತು.