ಮುಂಬೈ: ಬ್ಯಾಟಿಂಗ್ ದೈತ್ಯ ಸಚಿನ್ ತೆಂಡೂಲ್ಕರ್ ಮತ್ತು ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ಮುಖಾಮುಖಿಯಾಗಲಿದ್ದಾರೆ.
ರಸ್ತೆ ಸುರಕ್ಷತೆಗಾಗಿ ನಡೆಯುತ್ತಿರುವ ವಿಶ್ವ ಟ್ವೆಂಟಿ–20 ಕ್ರಿಕೆಟ್ ಸರಣಿಯ ತಮ್ಮ ಮೊದಲ ಪಂದ್ಯಗಳನ್ನು ಗೆದ್ದಿರುವ ಭಾರತ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಮಂಗಳವಾರ ಎರಡನೇ ಪಂದ್ಯದಲ್ಲಿ ಕಣಕ್ಕೆ ಇಳಿಯಲಿವೆ.
ವೆಸ್ಟ್ ಇಂಡೀಸ್ ಲೆಜೆಂಡ್ಸ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ಸ್ ಏಳು ವಿಕೆಟ್ಗಳಿಂದ ಗೆದ್ದಿತ್ತು. ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ಭಾನುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ಏಳು ರನ್ಗಳಿಂದ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಿ 29 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ವೀರೇಂದ್ರ ಸೆಹ್ವಾಗ್ ಜೊತೆ ಮೊದಲ ವಿಕೆಟ್ಗೆ 83 ರನ್ ಸೇರಿಸಿದ್ದರು.
ಮುರಳೀಧರನ್ ಮೊದಲ ಪಂದ್ಯದಲ್ಲಿ ಮಿಂಚಲಿಲ್ಲ. ವಿಕೆಟ್ ಗಳಿಸಲು ವಿಫಲರಾಗಿದ್ದ ಅವರು ಮೂರು ಓವರ್ಗಳಲ್ಲಿ 26 ರನ್ ನೀಡಿದ್ದರು. ಹೀಗಾಗಿ ಮಂಗಳವಾರ ಪುಟಿದೇಳುವ ಪ್ರಯತ್ನ ಮಾಡಲಿದ್ದಾರೆ.