ಮುಂಬೈ: ‘ಧೋನಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಅವರನ್ನೇ ಕೇಳುವುದು ಒಳಿತು.’
ಹೀಗೆಂದು ಮಾಧ್ಯಮಗಳಿಗೆ ಉತ್ತರಿಸಿದ್ದು ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ.
ಬಿಸಿಸಿಐನ 88ನೇ ವಾರ್ಷಿಕ ಮಹಾ ಸಭೆ ಭಾನುವಾರಮುಂಬೈನಲ್ಲಿ ನಡೆಯಿತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು, ‘ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ ಟೀಂ ಇಂಡಿಯಾದ ಭಾಗವಾಗಿರುವರೇ ಮಹೇಂದ್ರ ಸಿಂಗ್ ಧೋನಿ? ಎಂದು ಸೌರವ್ ಗಂಗೂಲಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿರುವ ಗಂಗೂಲಿ, ‘ಈ ವಿಷಯವನ್ನು ನೀವು ಧೋನಿ ಅವರ ಬಳಿಯೇ ಕೇಳಿಕೊಳ್ಳಿ,’ ಎಂದು ಹೇಳಿದ್ದಾರೆ.
ಶುಕ್ರವಾರ ಇದೇ ವಿಚಾರವಾಗಿ ಮಾತನಾಡಿದ್ದ ಗಂಗೂಲಿ ‘ಧೋನಿ ಅವರ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸುವ ಬಗ್ಗೆ ಟೀಂನ ಮುಖ್ಯಸ್ಥರಲ್ಲಿ ಸ್ಪಷ್ಟತೆ ಇದೆ. ಆದರೆ, ಅದನ್ನು ಬಹಿರಂಗಪಡಿಸಲು ಈಗ ಸಾಧ್ಯವಿಲ್ಲ. ಅದು ಸಮಯ ಬಂದಾಗ ಗೊತ್ತಾಗಲಿದೆ,’ ಎಂದು ಹೇಳಿದ್ದರು.
ಇನ್ನು ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ಬುಧವಾರ ಮಾತನಾಡಿದ್ದ ಧೋನಿ, ‘ಜನವರಿಯ ವರೆಗೆ ಏನನ್ನೂ ಕೇಳಬೇಡಿ,’ ಎಂದು ಮಾಧ್ಯಮಗಳಿಗೆ ತಾಕೀತು ಮಾಡಿದ್ದರು.