ಕೇಪ್ಟೌನ್: ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಸ್ಪಿನ್ನರ್ಗಳ ಪಾತ್ರ ನಿರ್ಣಾಯಕವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಬೌಲರ್ ಕೇಶವ್ ಮಹಾರಾಜ್ ಹೇಳಿದ್ದಾರೆ.
ಚುಟುಕು ವಿಶ್ವಕಪ್ನ 9ನೇ ಆವೃತ್ತಿಯು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರ ವರೆಗೆ ನಡೆಯಲಿದೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಟೂರ್ನಿ ಕುರಿತು ಮಾತನಾಡಿರುವ ಮಹಾರಾಜ್, ಮುಂಬರುವ ವಿಶ್ವಕಪ್ನಲ್ಲಿ ಸ್ಪಿನ್ನರ್ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಉತ್ತಮ ಪಿಚ್ ಮತ್ತು ಚಿಕ್ಕ ಬೌಂಡರಿಯುಳ್ಳ ಕ್ರೀಡಾಂಗಣಗಳಲ್ಲಿ ನಿಯಂತ್ರಣ ಸಾಧಿಸಲು ಪ್ರತಿ ತಂಡಕ್ಕೂ ಸ್ಪಿನ್ನರ್ಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಕ್ರಿಕೆಟ್ನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಚುಟುಕು ಮಾದರಿಯು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿರುವ ಅವರು, ಟಿ20 ವೇದಿಕೆಗಳು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳಿಗೆ ಇನ್ನಷ್ಟು ಮಹತ್ವದ ಪಾತ್ರ ನೀಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನಗೆ ಐಪಿಎಲ್ ಅನುಭವವಿಲ್ಲ. ಆದರೆ, ದಕ್ಷಿಣ ಆಫ್ರಿಕಾ 20 ಲೀಗ್ನಲ್ಲಿ ಆಡಿದ್ದೇನೆ. ಇದು ಕ್ರಿಕೆಟ್ ದೃಷ್ಟಿಯಿಂದ ತುಂಬಾ ಉತ್ತಮವಾದದ್ದಾಗಿದೆ. ಅಭಿಮಾನಿಗಳನ್ನು ಆಕರ್ಷಿಸುವ ಜೊತೆಗೆ, ಸ್ಥಳೀಯ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮಯ ಅನುವುಮಾಡಿಕೊಟ್ಟರೆ, ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ. ಅಯೋಧ್ಯೆ ಪ್ರವಾಸ ಕೈಗೊಳ್ಳಲು ಬಯಸುತ್ತೇನೆ ಎಂದೂ ಹೇಳಿದ್ದಾರೆ.
ಈವರೆಗೆ 27 ಟಿ20 ಪಂದ್ಯಗಳಲ್ಲಿ ಆಡಿರುವ ಮಹಾರಾಜ್, 24 ವಿಕೆಟ್ ಪಡೆದಿದ್ದಾರೆ.
ಮಹಾರಾಜ್ ಅವರ ಪೂರ್ವಜರು ಉತ್ತರ ಪ್ರದೇಶದ ಸುಲ್ತಾನ್ಪುರದವರು. ಅವರು 1874ರಲ್ಲಿ ಡರ್ಬನ್ಗೆ ವಲಸೆ ಹೋಗಿದ್ದರು.