ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ವಿಜಯದಲ್ಲಿ ಯಶ್‌ ಪಾಲು ದೊಡ್ಡದು: ಸೈಯದ್ ಕಿರ್ಮಾನಿ

ಸಹೋದರ ಯಶಪಾಲ್ ಶರ್ಮಾ ಜೊತೆಗೆ ಕೈಗೂಡದ ಮಾತುಕತೆ: ಕಿರ್ಮಾನಿ ವ್ಯಥೆ
Last Updated 13 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಇವತ್ತು ಬೆಳಿಗ್ಗೆ ನಮ್ಮ ‘ಚಾಂಪಿಯನ್ಸ್‌ ಫಾರೆವರ್‘ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ‘ಸಹೋದರ‘ ಯಶಪಾಲ್ ಶರ್ಮಾ ಇನ್ನಿಲ್ಲ. ಹೃದಯಸ್ತಂಭನದಿಂದ ನಿಧನರಾದರು ಎಂಬ ಸಂದೇಶ ನೋಡಿ ಆಘಾತಗೊಂಡೆ. ಮಾತೇ ಹೊರಡಲಿಲ್ಲ‘–

1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದಲ್ಲಿ ಯಶಪಾಲ್ ಶರ್ಮಾ ಅವರೊಂದಿಗೆ ಆಡಿದ್ದ ಕರ್ನಾಟಕದ ಸೈಯದ್ ಕಿರ್ಮಾನಿಯವರ ಮಾತುಗಳಿವು. ಜೊತೆಯಾಗಿ ಆಡಿದ, ಸ್ನೇಹಿತನಾಗಿ ಒಡನಾಡಿದ ನೆನಪುಗಳನ್ನು ಮಾಜಿ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಕಿರ್ಮಾನಿ ‘ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡಿದ್ದಾರೆ.

‘ವಿಶ್ವಕಪ್ ವಿಜಯಿ ತಂಡದ ನಾವೆಲ್ಲರೂ ಇಂದಿಗೂ ಪ್ರತಿದಿನ ಸಂಪರ್ಕದಲ್ಲಿದ್ದೇವೆ. ಮುಖತಃ ಭೇಟಿಯಾಗುವ ಅವಕಾಶಗಳನ್ನು ಎಂದಿಗೂ ಬಿಟ್ಟಿಲ್ಲ. ಇವತ್ತು ಕೂಡ ಅಂತಹ ಒಂದು ಅವಕಾಶ ಇತ್ತು. ನನ್ನ ಯೂಟ್ಯೂಬ್‌ ವಾಹಿನಿಗೆ ಯಶಪಾಲ್ ಇಂದು (ಮಂಗಳವಾರ) ರಾತ್ರಿ 8ಕ್ಕೆ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ನಾನು ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಮಗಳ ಮನೆಯಲ್ಲಿದ್ದೇನೆ. ಎರಡು ದಿನಗಳ ಹಿಂದೆ ಯಶಪಾಲ್ ಜೊತೆ ಮಾತನಾಡಿ, ಸಂದರ್ಶನ ನಿಗದಿ ಮಾಡಿದ್ದೆ. ಆದರೆ ದುರ್ವಿಧಿಯ ಆಟ ನೋಡಿ. ಇವತ್ತು ಬೆಳಿಗ್ಗೆಯೇ ಯಶ್ ನಮ್ಮನ್ನು ಅಗಲಿದರು. ಹೋದ ತಿಂಗಳು ವಿಶ್ವಕಪ್ ವಿಜಯದ ನೆನಪಿನ ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾಗಿದ್ದೇ ಕೊನೆಯಾಯಿತು‘ ಎಂದು ಕಿರ್ಮಾನಿ ಗದ್ಗದಿತರಾದರು.

‘ಆತನ ಆಟವನ್ನು ಮರೆಯಲು ಸಾಧ್ಯವೇ ಇಲ್ಲ. ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯಶ್ (61 ರನ್) ಮತ್ತು ಮೊಹಿಂದರ್ ಅಮರನಾಥ್ (46 ರನ್) ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ್ದ 92 ರನ್‌ಗಳು ಮತ್ತು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಸಂದೀಪ್ ಪಾಟೀಲ್ (ಅಜೇಯ 51) ಅವರೊಂದಿಗಿನ ಅಮೋಘ ಆಟವು ತಂಡದ ಜಯಕ್ಕೆ ಕಾರಣವಾಯಿತು. ಅವರ ನಿರ್ಭೀತ ಬ್ಯಾಟಿಂಗ್ ಈಗಲೂ ಕಣ್ಣಿಗೆ ಕಟ್ಟಿದಂಗೆ ಇದೆ. ಆ ಕಾಲದ ಶರವೇಗದ ಬೌಲರ್ ಬಾಬ್ ವಿಲ್ಲೀಸ್ ಅವರ ಯಾರ್ಕರ್ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ರೀತಿ ಮನಃಪಟಲದಲ್ಲಿ ಅಚ್ಚೊತ್ತಿದಂತಿದೆ. ನಾವೂ ಗೆಲ್ಲೋದಕ್ಕೆ ಇಲ್ಲಿ ಬಂದಿರೋದು ಎಂಬ ದಿಟ್ಟ ಧೋರಣೆ ಅವರ ಆಟದಲ್ಲಿತ್ತು’ ಎಂದು ಕಿರ್ಮಾನಿ ಸ್ಮರಿಸಿದರು.

‘ದೇಶಿ ಕ್ರಿಕೆಟ್‌ನಲ್ಲಿ ಪರಸ್ಪರ ವಿರುದ್ಧ ತಂಡಗಳಲ್ಲಿ ಆಡಿದ್ದೇವೆ. ಭಾರತ ತಂಡದಲ್ಲಿ ಜೊತೆಯಾಗಿ ಆಡಿದ್ದೇವೆ. ಕ್ರೀಡಾಂಗಣದ ಹೊರಗೆ ಒಳ್ಳೆಯ ಸ್ನೇಹಿತ. ಯಾವುದೇ ರೀತಿಯ ದುಶ್ಚಟಗಳಿಲ್ಲ. ಸಸ್ಯಾಹಾರದ ಶಿಸ್ತಿನ ವ್ಯಕ್ತಿ. ತಂಡದ ಸಭೆಗಳಲ್ಲಿ ಉತ್ತಮ ಸಲಹೆ ಕೊಡುತ್ತಿದ್ದರು. ಎಲ್ಲರೊಂದಿಗೂ ಬೆರೆಯುತ್ತಿದ್ದರು. ಮೈದಾನದಲ್ಲಿ ಎಂತಹದೇ ಒತ್ತಡದ ಸನ್ನಿವೇಶದಲ್ಲಿಯೂ ಎಲ್ಲರನ್ನೂ ಹುರಿದುಂಬಿಸುತ್ತಿರುತ್ತಿದ್ದರು‘ ಎಂದು ನೆನಪಿಸಿಕೊಂಡರು.

‘ಇವತ್ತು ದೆಹಲಿಯಲ್ಲಿ ಬೆಳಿಗ್ಗೆಯಿಂದ ಮಳೆ ಇದೆ. ಆದ್ದರಿಂದ ತಾವು ವಾಕಿಂಗ್ ಹೋಗುವುದಿಲ್ಲವೆಂದು ಪತ್ನಿಗೆ ಹೇಳಿ ಮನೆಯಲ್ಲಿಯೇ ಇದ್ದರಂತೆ ಯಶ್‌, ಅರಾಮಾವಾಗಿ ಇದ್ದಾಗಲೇ ಹೃದಯಸ್ಥಂಭನವಾಗಿದೆ. ನಾಲ್ಕನೇ ದಿನ ನಡೆಯಲಿರುವ ಯಶಪಾಲ್ ಗೌರವಾಂಜಲಿ ಮತ್ತು ಪೂಜಾ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ. ನನ್ನ ಸಹೋದರನಿಗೆ ನಮನ ಸಲ್ಲಿಸುತ್ತೇನೆ‘ ಎಂದರು. ಕಿರ್ಮಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT