ಭುವನೇಶ್ವರ: ಭಾರತ ತಂಡ ಹೋರಾಟ ತೋರಿದರೂ, ಪ್ರಬಲ ಕತಾರ್ ತಂಡದ ಎದುರು 2026ರ ವಿಶ್ವಕಪ್ ಎರಡನೇ ಸುತ್ತಿನ ಕ್ವಾಲಿಫೈರ್ನ ತನ್ನ ಎರಡನೇ ಪಂದ್ಯದಲ್ಲಿ ಮಂಗಳವಾರ 0–3 ಗೋಲುಗಳಿಂದ ಸೋಲನುಭವಿಸಬೇಕಾಯಿತು.
ಕತಾರ್ ಆಟಗಾರರು ಗೋಲಿನ ಕೆಲವು ಅವಕಾಶಗಳಲ್ಲಿ ಎಡವದೇ ಹೋಗಿದ್ದಲ್ಲಿ ಆ ತಂಡದ ಗೆಲುವಿನ ಅಂತರ ಇನ್ನೂ ಹೆಚ್ಚಾಗುತಿತ್ತು. ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಬಹುತೇಕ ಅವಧಿಯಲ್ಲಿ ಪ್ರವಾಸಿ ತಂಡ ನಿರೀಕ್ಷೆಯಂತೆ ಪ್ರಾಬಲ್ಯ ಸಾಧಿಸಿತು.
ಕತಾರ್ ಪರ ಮೌಸ್ತಾಫಾ ತಾರೆಕ್ ಮಶಾಲ್ (4ನೇ ನಿಮಿಷ), ಅಲ್ಮಿಯೊಝ್ ಅಲಿ (47ನೇ ನಿಮಿಷ) ಮತ್ತು ಯೂಸುಫ್ ಅಡುರಿಸಗ್ (86ನೇ ನಿಮಿಷ) ಗೋಲುಗಳನ್ನು ಗಳಿಸಿದರು.
ನಾಲ್ಕು ವರ್ಷಗಳ ಹಿಂದೆ ದೋಹಾದಲ್ಲಿ ಇದೇ ತಂಡದ ವಿರುದ್ಧ 0–0 ಡ್ರಾ ಮಾಡಿಕೊಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಗೋಲು ಗಳಿಸುವ ಅವಕಾಶ ಸಿಕ್ಕಿದ್ದೇ ವಿರಳ. ಪೂರ್ವಾರ್ಧದ ಅಂತಿಮ ಕೆಲ ನಿಮಿಷಗಳಲ್ಲಿ ಅವಕಾಶಗಳು ಒದಗಿಬಂದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.
ಇನ್ನೊಂದೆಡೆ, ಭಾರತ ತಂಡದ ರಕ್ಷಣಾ ವಿಭಾಗದ ಹುಳುಕು ಎದುರಾಳಿಗಳಿಗೆ ಬಲುಬೇಗ ಗೊತ್ತಾಯಿತು. ನಾಲ್ಕನೇ ನಿಮಿಷವೇ ಕತಾರ್ ಮುನ್ನಡೆ ಪಡೆದಿತ್ತು.
ಸ್ಟಿಮಾಚ್ ತರಬೇತಿಯ ಭಾರತ ತಂಡಕ್ಕೆ ‘ಎ’ ಗುಂಪಿನಿಂದ ಎರಡನೆ ಸ್ಥಾನ ಪಡೆಯುವ ತಂಡವಾಗಿ ಮೂರನೇ ಸುತ್ತಿಗೆ ಮುನ್ನಡೆಯುವ ಅವಕಾಶ ಜೀವಂತವಾಗಿದೆ. ಅದು ತನ್ನ ಮೊದಲ ಪಂದ್ಯದಲ್ಲಿ ಕುವೈತ್ ತಂಡವನ್ನು ಸೋಲಿಸಿತ್ತು.
ಭಾರತವು ತನ್ನ ಮುಂದಿನ ಪಂದ್ಯವನ್ನು ಅಫ್ಗಾನಿಸ್ತಾನ ವಿರುದ್ಧ ತಟಸ್ಥ ತಾಣವಾದ ದುಶಾಂಬೆ (ತಜಿಕಿಸ್ತಾನ) ಯಲ್ಲಿ ಮಾರ್ಚ್ 21ರಂದು ಆಡಲಿದೆ.