ಬೆಂಗಳೂರು: ರೋಚಕ ಹಣಾಹಣಿಯ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡ ಇಂಡಿಯನ್ ಸೂಪರ್ ಲೀಗ್ನ (ಐಎಸ್ಎಲ್) ಬುಧವಾರದ ಪಂದ್ಯದಲ್ಲಿ ಡ್ರಾ ಸಾಧಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯ 2–2ರಲ್ಲಿ ಡ್ರಾಗೊಂಡಿತು.
ಬಿಎಫ್ಸಿಗೆ ಇನ್ನು ನಾಲ್ಕು ಪಂದ್ಯ ಗಳು ಉಳಿದಿವೆ. ಈ ಪಂದ್ಯದಲ್ಲಿ ಗೆದ್ದಿದ್ದರೆ ಪ್ಲೇ ಆಫ್ ಹಂತದಲ್ಲಿ ಸ್ಥಾನ ಭದ್ರವಾಗುತ್ತಿತ್ತು. ಆದರೆ ತಂಡದ ಆಸೆಗೆ ಬ್ಲಾಸ್ಟರ್ಸ್ ತಣ್ಣೀರೆರಚಿತು.
ಬ್ಲಾಸ್ಟರ್ಸ್ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾಯಿತು. ಮೂರನೇ ನಿಮಿಷದಲ್ಲಿ ಸೆಮಿನ್ಲೆಲ್ ಡೊಂಗೆಲ್ ಬಿಎಫ್ಸಿ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿದರು. ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿದು ಹೊರಗೆ ಚಿಮ್ಮಿತು.
13ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಲಭಿಸಿದಾಗ ಬಿಎಫ್ಸಿ ಪಾಳಯದಲ್ಲಿ ಸಂತಸ ಮೂಡಿತು. ಆದರೆ ಉದಾಂತ ಸಿಂಗ್ ಅವರ ಪ್ರಯತ್ನವನ್ನು ಪ್ರೀತಮ್ ಸಿಂಗ್ ತಡೆದು ಮಿಂಚಿದರು. ಆದರೆ 16ನೇ ನಿಮಿಷದಲ್ಲಿ ಲಭಿಸಿದ ಕಾರ್ನರ್ ಅವಕಾಶವನ್ನು ಬ್ಲಾಸ್ಟರ್ಸ್ ಸದುಪಯೋಗ ಮಾಡಿಕೊಂಡಿತು. ಸ್ಲಾವಿಸಾ ಸ್ಲೊಜೊನಾವಿಚ್ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.
ವಿರಾಮಕ್ಕೆ ತೆರಳಲು ಐದು ನಿಮಿಷ ಬಾಕಿ ಇದ್ದಾಗ ಬ್ಲಾಸ್ಟರ್ಸ್ ಮತ್ತೊಂದು ಗೋಲು ಗಳಿಸಿ ಆತಿಥೇಯ ಪಾಳಯದಲ್ಲಿ ನಿರಾಸೆ ಮೂಡಿಸಿತು. ಸೆಮಿನ್ಲೆಲ್ ಡೊಂಗೆಲ್ ನೀಡಿದ ನಿಖರ ಪಾಸ್ನಲ್ಲಿ ಕರೇಜ್ ಪೆಕುನ್ಸನ್ ಗೋಲು ಗಳಿಸಿದರು.
ಉದಾಂತ, ಚೆಟ್ರಿ ಮ್ಯಾಜಿಕ್: 0–2ರ ಹಿನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಅಂಗಣಕ್ಕೆ ಇಳಿದ ಬಿಎಫ್ಸಿ ಪರಿಣಾಮಕಾರಿ ಆಟದ ಮೂಲಕ ಫುಟ್ಬಾಲ್ ಪ್ರಿಯರನ್ನು ರಂಜಿಸಿತು. ಉದಾಂತ ಸಿಂಗ್ ಮತ್ತು ಸುನಿಲ್ ಚೆಟ್ರಿ ಮೋಹಕ ಗೋಲುಗಳನ್ನು ಗಳಿಸಿ ತಂಡಕ್ಕೆ ಸಮಬಲ ಗಳಿಸಿಕೊಟ್ಟರು.
69ನೇ ನಿಮಿಷದಲ್ಲಿ ಬಿಫ್ಸಿ ಮೊದಲ ಗೋಲು ಗಳಿಸಿತು. ಎರಿಕ್ ಪಾರ್ಟಲು ದೂರದಿಂದ ನೀಡಿದ ಪಾಸ್ ಅನ್ನು ತಲೆಯಲ್ಲಿ ನಿಯಂತ್ರಿಸಿದ ಸುನಿಲ್ ಚೆಟ್ರಿ ಅವರು ಉದಾಂತ ಸಿಂಗ್ ಅವರತ್ತ ಕಳುಹಿಸಿದರು. ಆರು ಗಜ ದೂರದಿಂದ ಉದಾಂತ ಸಿಂಗ್ ಚೆಂಡನ್ನು ಹೆಡ್ ಮಾಡಿ ಗುರಿ ಮುಟ್ಟಿಸಿದರು.