ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಭಾರತ ಕುಸ್ತಿ ತಂಡದಲ್ಲಿ ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಅವರಿಗೆ ನೇರ ಅರ್ಹತೆ ಕೊಟ್ಟಿರುವುದನ್ನು ವಿರೋಧಿಸಿ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿದೆ.
ಜೂನಿಯರ್ ಕುಸ್ತಿಪಟುಗಳು, ಅವರ ಪಾಲಕರು ಮತ್ತು ತರಬೇತುದಾರರು ಗುರುವಾರ ದೆಹಲಿಯಲ್ಲಿರುವ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಭವನಕ್ಕೆ ತೆರಳಿದರು. 150ಕ್ಕೂ ಹೆಚ್ಚು ಪ್ರತಿಭಟನಾಕಾರರು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಡ್ ಹಾಕ್ ಸಮಿತಿಯ ಮುಖ್ಯಸ್ಥ ಭೂಪೆಂದರ್ ಸಿಂಗ್ ಬಜ್ವಾ ಅವರನ್ನು ಭೇಟಿಯಾದರು.
ಬುಧವಾರ ಹರಿಯಾಣದ ಹಿಸಾರ್ನಲ್ಲಿ ಪ್ರತಿಭಟನೆ ಆರಂಭವಾಗಿತ್ತು.
‘ಐಒಎ ಮುಖ್ಯಸ್ಥರನ್ನು ಭೇಟಿಯಾಗುವುದು ನಮ್ಮ ಉದ್ದೇಶವಾಗಿತ್ತು. ಯಾವುದೇ ರೀತಿಯ ಏಕಪಕ್ಷೀಯ ತೀರ್ಮಾನಗಳನ್ನು ನಾವು ಒಪ್ಪುವುದಿಲ್ಲ. ಇದು ತಪ್ಪು. ಬಜರಂಗ್ ಮತ್ತು ವಿನೇಶಾ ಅವರಿಗೆ ಟ್ರಯಲ್ಸ್ನಿಂದ ನೀಡಿರುವ ವಿನಾಯಿತಿಯನ್ನು ಹಿಂಪಡೆಯಬೇಕು’ ಎಂದು ಜೂನಿಯರ್ ಕುಸ್ತಿಪಟು ಅಂತಿಮ ಪಂಘಾಲ್ ಅವರ ಕೋಚ್ ವಿಕಾಸ್ ಭಾರದ್ವಾಜ್ ಆಗ್ರಹಿಸಿದರು.
20 ವರ್ಷದೊಳಗಿನವರ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಅಂತಿಮ ಪಂಘಾಲ್ ಮತ್ತು 23 ವರ್ಷದೊಳಗಿನವರ ಚಾಂಪಿಯನ್ ಸುಜೀತ್ ಕಲಾಕಲ್ ಅವರು ಅಡ್ಹಾಕ್ ಸಮಿತಿಯ ತೀರ್ಮಾನವನ್ನು ಕಟುವಾಗಿ ವಿರೋಧಿಸಿದ್ದಾರೆ. ಅಲ್ಲದೇ ತಮಗೆ ಅವಕಾಶ ಕೊಟ್ಟರೆ ಬಜರಂಗ್ ಮತ್ತು ವಿನೇಶಾ ಅವರನ್ನು ಸೋಲಿಸಲೂ ಸಮರ್ಥರಾಗಿರುವುದಾಗಿ ಸವಾಲು ಹಾಕಿದ್ದಾರೆ.
‘ಪುರುಷರ ಫ್ರೀಸ್ಟೈಲ್ 65ಕೆ.ಜಿ. ಮತ್ತು ಮಹಿಳೆಯರ 53 ಕೆ.ಜಿ ವಿಭಾಗಗಳಲ್ಲಿ ತಂಡಗಳನ್ನು ಅಂತಿಮಗೊಳಿಸಲಾಗಿದೆ. ಉಳಿದ ವಿಭಾಗಗಳ ಆಯ್ಕೆಗೆ ಟ್ರಯಲ್ಸ್ ನಡೆಸಲಾಗುವುದು‘ ಎಂದು ಬಜ್ವಾ ಅವರು ಮಂಗಳವಾರ ಪ್ರಕಟಿಸಿದ್ದರು.
ಪಂಘಾಲ್ ಮತ್ತು ಸುಜೀತ್ ಅವರು ಅಡ್ಹಾಕ್ ಸಮಿತಿಯ ತೀರ್ಮಾನವನ್ನು ವಿರೋಧಿಸಿ ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.