ನವದೆಹಲಿ: ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪದಕಗಳನ್ನು ಜಯಿಸಿದ ಕುಸ್ತಿಪಟು ವಿನೇಶಾ ಪೋಗಟ್ ಅವರು ತಮ್ಮ ಸಾಧನೆ ಗುರುತಿಸಿ ಸರ್ಕಾರ ನೀಡಿದ್ದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಕರ್ತವ್ಯ ಪಥದಲ್ಲಿ ಇಟ್ಟು ಶನಿವಾರ ಮರಳಿದ್ದಾರೆ.
ಪ್ರಶಸ್ತಿಗಳನ್ನು ಮರಳಿಸಲು ಪ್ರಧಾನಮಂತ್ರಿ ಕಚೇರಿಯತ್ತ ಹೊರಟ ಏಷ್ಯಾ ಗೇಮ್ಸ್ನ ಚಿನ್ನದ ಪದಕ ವಿಜೇತೆ ವಿನೇಶಾ ಅವರನ್ನು ಪೊಲೀಸರು ಕರ್ತವ್ಯ ಪಥದಲ್ಲಿ ತಡೆದರು. ಹೀಗಾಗಿ ಪ್ರಶಸ್ತಿಗಳು ಮತ್ತು ಪ್ರಧಾನಿಗೆ ಬರೆದ ಪತ್ರವನ್ನು ಅಲ್ಲಿಯೇ ಇಟ್ಟು ಮರಳಿದ್ದಾರೆ.
‘ಕುಸ್ತಿಪಟುಗಳು ನ್ಯಾಯ ಪಡೆಯಲು ಸಂಕಷ್ಟ ಎದುರಿಸುತ್ತಿರುವಾಗ ಇಂಥ ಪ್ರಶಸ್ತಿ ಹಾಗೂ ಗೌರವಗಳು ಅರ್ಥಹೀನ’ ಎಂದು ವಿನೇಶಾ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆಯನ್ನು ಪ್ರತಿಭಟಿಸಿ ಕುಸ್ತಿ ಪಟು ವಿನೇಶಾ ಫೋಗಟ್ ಅವರು ಪ್ರಶಸ್ತಿಗಳನ್ನು ಮರಳಿಸುವುದಾಗಿ ಮಂಗಳವಾರ ಹೇಳಿದ್ದರು.
यह दिन किसी खिलाड़ी के जीवन में न आए। देश की महिला पहलवान सबसे बुरे दौर से गुज़र रही हैं। #vineshphogat pic.twitter.com/bT3pQngUuI
— Bajrang Punia 🇮🇳 (@BajrangPunia) December 30, 2023
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಡೆಫ್ಲಿಂಪಿಕ್ಸ್ ಚಾಂಪಿಯನ್ ವಿರೇಂದರ್ ಸಿಂಗ್ ಯಾದವ್ ಅವರು ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ವಾಪಸು ಮಾಡಿದ ಬೆನ್ನಲ್ಲೇ ವಿನೇಶಾ ಅವರೂ ತಮ್ಮ ಪ್ರಶಸ್ತಿಗಳನ್ನು ಮರಳಿಸಿದ್ದಾರೆ.
ಕಳೆದ ಗುರುವಾರ ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಫೆಡರೇಷನ್ನ 15 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಬ್ರಿಜ್ ಭೂಷಣ್ ಬೆಂಬಲಿಗರು ಗೆದ್ದುಕೊಂಡಿದ್ದರು. ಬಜರಂಗ್, ವಿನೇಶಾ, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿ ಪೈಲ್ವಾನರು, ಬ್ರಿಜ್ ಭೂಷಣ್ ಆಪ್ತರಿಗೆ ಫೆಡರೇಷನ್ನಲ್ಲಿ ಸ್ಥಾನ ನೀಡಬಾರದು ಎಂದು ಆಗ್ರಹಿಸಿದ್ದರು.
ಅಧ್ಯಕ್ಷರಾಗಿ ಸಂಜಯ್ ಆಯ್ಕೆಯಾದ ಬೆನ್ನಲ್ಲೇ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಕ್ರೀಡಾ ಸಚಿವಾಲಯವು ನಿಯಮ ಉಲ್ಲಂಘನೆ ಕಾರಣಕ್ಕೆ ನೂತನ ಆಡಳಿತ ಸಮಿತಿಯನ್ನು ಅಮಾನತು ಮಾಡಿತ್ತು. ನೀತಿ ನಿಯಮಗಳನ್ನು ಪಾಲಿಸದೇ ಮತ್ತು ಕುಸ್ತಿಪಟುಗಳಿಗೆ ಕಾಲಾವಕಾಶ ನೀಡದೇ ಆತುರದಿಂದ 15 ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಪಂದ್ಯಾವಳಿಯ ದಿನಾಂಕ ಘೋಷಣೆ ಮಾಡಿದ್ದಕ್ಕೆ ಸಚಿವಾಲಯ ಕ್ರಮ ಕೈಗೊಂಡಿತ್ತು.
मैं अपना मेजर ध्यानचंद खेल रत्न और अर्जुन अवार्ड वापस कर रही हूँ।
— Vinesh Phogat (@Phogat_Vinesh) December 26, 2023
इस हालत में पहुँचाने के लिए ताकतवर का बहुत बहुत धन्यवाद 🙏 pic.twitter.com/KlhJzDPu9D
‘ತಮ್ಮ ಬದುಕು ಮಹಿಳೆಯರ ಸಬಲೀಕರಣ ಹಾಗೂ ಉನ್ನತಿ ಕುರಿತು ಸರ್ಕಾರ ಪ್ರಕಟಿಸುವ ಬಣ್ಣಬಣ್ಣದ ಜಾಹೀರಾತುಗಳಲ್ಲ’ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಕ್ರೀಡಾ ಸಚಿವಾಲಯದ ಸೂಚನೆಯಂತೆ, ತ್ರಿಸದಸ್ಯ ಅಡ್ಹಾಕ್ ಸಮಿತಿಯೊಂದನ್ನು ರಚಿಸಲಾಗಿದ್ದು, ಭಾರತ ಕುಸ್ತಿ ಫೆಡರೇಷನ್ ಬೆಳವಣಿಗೆ ಕುರಿತ ಪ್ರತಿದಿನದ ಮಾಹಿತಿ ಸಲ್ಲಿಸುವಂತೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.