ನವದೆಹಲಿ: ‘ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಯಾರೊಂದಿಗೂ ಕೈಕುಲುಕುವುದಿಲ್ಲ. ಬದಲಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ನಮಸ್ಕಾರ ಹೇಳುತ್ತೇನೆ’ ಎಂದು ವಿಶ್ವ ಚಾಂಪಿಯನ್ ಆಟಗಾರ್ತಿ, ಭಾರತದ ಪಿ.ವಿ.ಸಿಂಧು ಹೇಳಿದ್ದಾರೆ. ವಿಶ್ವದೆಲ್ಲೆಡೆ ಹಬ್ಬುತ್ತಿರುವ ಕೋವಿಡ್–19 ಸೋಂಕು ಭೀತಿಯೇ ಇದಕ್ಕೆ ಕಾರಣ.
ವಿಶ್ವದಾದ್ಯಂತ 1,06,000ಕ್ಕಿಂತ ಹೆಚ್ಚು ಜನ ಕೋವಿಡ್ ಸೋಂಕು ಪೀಡಿತರಾಗಿದ್ದಾರೆ. 3,600 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನ ಭೀತಿಯು ಒಲಿಂಪಿಕ್ ವರ್ಷದಲ್ಲಿ ಕ್ರೀಡಾಪಟುಗಳ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡುತ್ತಿದೆ.
‘ಕೈಕುಲುಕುವುದನ್ನು ನಾವು ತಪ್ಪಿಸಬೇಕಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇದೊಂದು ಉತ್ತಮ ಕ್ರಮ. ಇದೇ 11ರಿಂದ 16ರವರೆಗೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕೇವಲ ನಮಸ್ತೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇನೆ’ ಎಂದು ವಿಶ್ವದ ಆರನೇ ರ್ಯಾಂಕಿನ ಆಟಗಾರ್ತಿ ಸಿಂಧು, ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.