ನವದೆಹಲಿ: ಹಾಲಿ ಚಾಂಪಿಯನ್, ಭಾರತದ ಲಕ್ಷ್ಯ ಸೇನ್ ಮತ್ತು ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಮಂಗಳವಾರ ಆರಂಭವಾಗುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ ಮತ್ತು ಆಟಗಾರ್ತಿಯರಲ್ಲಿ ಪ್ರಮುಖರೆನಿಸಿದ್ದಾರೆ.
ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಈಗ ಉತ್ತಮ ಸ್ಥಿತಿಯಲ್ಲಿದೆ. ಸಿಂಧು (7), ಲಕ್ಷ್ಯ (10) ಮತ್ತು ಎಚ್.ಎಸ್.ಪ್ರಣಯ್ (8) ವಿಶ್ವ ರ್ಯಾಂಕಿಂಗ್ನ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 10ರೊಳಗಿನ ಸ್ಥಾನಗಳಲ್ಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಐದನೇ ಸ್ಥಾನದಲ್ಲಿದ್ದಾರೆ.
ಇಂಡಿಯಾ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಮುಖಾಮುಖಿಯಾಗಲಿದ್ದಾರೆ. ಕ್ವಾಲಾಲಂಪುರದಲ್ಲಿ ಕಳೆದ ವಾರ ನಡೆದಿದ್ದ ಮಲೇಷ್ಯಾ ಓಪನ್ ಟೂರ್ನಿಯಲ್ಲೂ ಇವರಿಬ್ಬರೂ ಪರಸ್ಪರ ಸೆಣಸಿದಾಗ ಪ್ರಣಯ್ ಗೆಲುವಿನ ನಗೆ ಬೀರಿದ್ದರು. ಕಿದಂಬಿ ಶ್ರೀಕಾಂತ್ ಅವರಿಗೆ ಕಠಿಣ ಸವಾಲು ಎದುರಾಗಿದ್ದು, ಎರಡು ಬಾರಿಯ ವಿಶ್ವ ಚಾಂಪಿಯನ್, ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ಎದುರು ಆಡುವರು.
ಡಬಲ್ಸ್ನಲ್ಲಿ ಸಾತ್ವಿಕ್–ಚಿರಾಗ್ ಅವರಿಗೆ ಡೆನ್ಮಾರ್ಕ್ನ ಜೆಪ್ಪೆ ಬೇ ಮತ್ತು ಲಾಸ್ಸೆ ಮೊಲ್ಹೆದೆ ಅವರ ಸವಾಲು ಎದುರಾಗಿದೆ. ಕೃಷ್ಣಪ್ರಸಾದ್ ಗರಗ–ವಿಷ್ಣುವರ್ಧನ್ ಗೌಡ್ ಪಿ. ಕೂಡ ಕಣಕ್ಕಿಳಿಯಲಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು ಅವರು ಥಾಯ್ಲೆಂಡ್ನ ಸುಪನಿದಾ ಕೇಟ್ಥೊಂಗ್ ಅವರನ್ನು ಎದುರಿಸುವರು. ಸೈನಾ ನೆಹ್ವಾಲ್ ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಮಹಿಳಾ ಡಬಲ್ಸ್ನಲ್ಲಿ ಮಾಳವಿಕಾ ಬನ್ಸೋದ್–ಆಕರ್ಷಿ ಕಶ್ಯಪ್, ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್– ಶಿಖಾ ಗೌತಮ್, ಮಿಶ್ರ ಡಬಲ್ಸ್ನಲ್ಲಿ ಇಶಾನ್ ಭಟ್ನಾಗರ್– ತನಿಶಾ ಕ್ರಾಸ್ತೊ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.