ಚೆನ್ನೈ: ಚೆಸ್ ಕೇರಳ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಆನ್ಲೈನ್ ಬ್ಲಿಟ್ಜ್ ಟೂರ್ನಿಯ ಮೂಲಕ ಕೇರಳ ಸಿಎಂ ಪರಿಹಾರ ನಿಧಿಗೆ ₹ 4 ಲಕ್ಷ ದೇಣಿಗೆ ನೀಡಲಾಗಿದೆ. ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಇದನ್ನು ಬಳಸಲಾಗುತ್ತದೆ. ‘ದ ಚೆಕ್ಮೇಟ್ ಕೋವಿಡ್–19 ಬ್ಲಿಟ್ಜ್ ಓಪನ್’ ಹೆಸರಿನಲ್ಲಿ ನಡೆದ ಈ ಟೂರ್ನಿಯಲ್ಲಿ ಗ್ರ್ಯಾಂಡ್ಮಾಸ್ಟರ್ ಎಸ್.ಎಲ್.ನಾರಾಯಣನ್ ಚಾಂಪಿಯನ್ ಆದರು.
ನಾರಾಯಣನ್ ಹಾಗೂ ಎರಡನೇ ಸ್ಥಾನ ಗಳಿಸಿದ ಕಾಮನ್ವೆಲ್ತ್ ಚಾಂಪಿಯನ್ ಅಭಿಜಿತ್ ಗುಪ್ತಾ ಅವರು ಕ್ರಮವಾಗಿ ₹ 12,000 ಹಾಗೂ ₹ 8,000 ನಗದು ಗೆದ್ದರು. ತಮ್ಮ ಬಹುಮಾನ ಮೊತ್ತವನ್ನು ಕೋವಿಡ್–19 ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದರು.
ಭಾರತ, ರಷ್ಯಾ, ಅಮೆರಿಕ, ಅರ್ಜೆಂಟೀನಾ, ಚಿಲಿ, ಪೆರು, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳ 429 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.