ಬೆಂಗಳೂರು: ಭಾನುವಾರ ನಿರೀಕ್ಷಿಸಿದಂತೆ ಚಳಿ ಗಾಲದ ಪ್ರತಿಷ್ಠಿತ ರೇಸ್ ಶ್ರೀ ಮೀನಾಕ್ಷಿ ಸುಂದರೇಶ್ವರ ಬೆಂಗಳೂರು ಡರ್ಬಿ ಗೆಲ್ಲುವುದರ ಮೂಲಕ ‘ವಾರ್ ಹ್ಯಾಮರ್’ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ತನ್ನ ಜೀವಿತದ ಎಲ್ಲ ಆರು ಓಟಗಳಲ್ಲಿಯೂ ಸತತವಾಗಿ ಗೆದ್ದಿರುವ ‘ವಾರ್ ಹ್ಯಾಮರ್’ 2400 ಮೀಟರ್ಸ್ ಓಟದ ದೂರವನ್ನು 2 ನಿಮಿಷ, 28.865 ಸೆಕೆಂಡುಗಳಲ್ಲಿ ಕ್ರಮಿಸಿತು.
ಪ್ರಸನ್ನ ಕುಮಾರ್ ಮಾರ್ಗದರ್ಶನದಲ್ಲಿ ಪಳಗಿರುವ ಏರ್ ಸಪೋರ್ಟ್–ಸೋವಿಯತ್ ಲೇಕ್ ಸಂತತಿಯ ಈ ನಾಲ್ಕು ವರ್ಷದ ಗಂಡು ಕುದುರೆಯನ್ನು ಜಾಕಿ ಸೂರಜ್ ನರೇಡು ಅವರು ಗೆಲುವಿನ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ಬೆಟ್ಟಿಂಗ್ನಲ್ಲಿ ‘ವಾರ್ ಹ್ಯಾಮರ್’ 1/1, ‘ಅನೀಝ್’ 4/1 ಮತ್ತು ಉಳಿದ ಕುದುರೆಗಳು 10/1 ಕ್ಕಿಂತಲೂ ಹೆಚ್ಚಿನ ಬೇಡಿಕೆಯಲ್ಲಿದ್ದವು.
ರೇಸ್ ಆರಂಭದಿಂದ ಕೊನೆಯ 600 ಮೀಟರ್ಸ್ ತಿರುವಿನವರೆಗೂ ‘ಸ್ಪೀಡ್ಸ್ಟರ್’ ಮುನ್ನುಗ್ಗಿ ಓಡುತ್ತಿದ್ದರೆ, ‘ಅನೀಝ್’ ಐದನೇ ಸ್ಥಾನದಲ್ಲಿ ಮತ್ತು ‘ವಾರ್ ಹ್ಯಾಮರ್’ ಏಳನೇ ಸ್ಥಾನದಲ್ಲಿ ಓಡುದ್ದವು. ಕೊನೆಯ 300 ಮೀಟರ್ಸ್ ಅಂತರ ಬಾಕಿ ಇರುವಾಗ ಅನೀಝ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನದತ್ತ ನುಗ್ಗಿತು. ಆದರೆ, ಅದೇ ಸಮಯದಲ್ಲಿ ‘ವಾರ್ ಹ್ಯಾಮರ್’ ಸಹ ಮಿಂಚಿನ ವೇಗದಿಂದ ಮುಂದಕ್ಕೆ ಸಾಗಿತು.
ಗೆಲುವಿನ ಗುರಿ ಸುಮಾರು 150 ಮೀಟರ್ಸ್ ಇರುವಾಗ ‘ಅನೀಝ್’ ಅನ್ನು ಹಿಂದಿಕ್ಕಿತು. ಇದರೊಂದಿಗೆ ವಾರ್ ಹ್ಯಾಮರ್ ಗೆಲುವಿನ ಗೆರೆಯನ್ನು ಮೆಟ್ಟಿದಾಗ, ಅನೀಝ್ ಇನ್ನೂ ನಾಲ್ಕು ಲೆಂಗ್ತ್ನಷ್ಟು ದೂರದಲ್ಲಿತ್ತು. ‘ಹಿಯರ್ ಅಂಡ್ ನೌ’ ಮೂರನೇ ಸ್ಥಾನ ಪಡೆಯಿತು.
ಈ ಗೆಲುವಿನೊಂದಿಗೆ ‘ವಾರ್ ಹ್ಯಾಮರ್’ ಕುದುರೆಯ ಜಂಟಿ ಮಾಲೀಕರಾದ ಸಿ.ಎ.ಪ್ರಶಾಂತ್, ಗೌತಮ್ ಬಸಪ್ಪ, ಮಂಜುನಾಥ್ ಬಿ ಮತ್ತು ಅಪ್ಪಣ್ನ ಸುಬ್ಬಯ್ಯ ಪಿ ಇವರಿಗೆ ₹ 2 ಲಕ್ಷ ಮೌಲ್ಯದ ಆಕರ್ಷಕ ಟ್ರೋಫಿ ಮತ್ತು ಬಹುಮಾನದ ಮೊತ್ತ ₹ 69,26,082 ಲಭಿಸಿತು.