ಬೆಂಗಳೂರು: ಪಾಕಿಸ್ತಾನದಲ್ಲಿ ಈಚೆಗೆ ನಡೆದಿದ್ದ ಡೇವಿಸ್ ಕಪ್ ಪಂದ್ಯದಲ್ಲಿ ಅಮೋಘ ಜಯ ಗಳಿಸಿದ್ದ ಭಾರತ ತಂಡದಲ್ಲಿ ಆಡಿದ್ದ ನಾಲ್ವರು ಆಟಗಾರರು ಇದೇ 12 ರಿಂದ 18ರವರೆಗೆ ನಡೆಯಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ರಾಮಕುಮಾರ್ ರಾಮನಾಥನ್, ಸಾಕೇತ್ ಮೈನೇನಿ, ಶ್ರೀರಾಮ್ ಬಾಲಾಜಿ ಹಾಗೂ ನಿಕಿ ಪೂಣಚ್ಚ ಅವರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ರಾಮಕುಮಾರ್ ಅವರು ಸಾಕೇತ್ ಜೊತೆಗೂಡಿ ಆಡಲಿದ್ದಾರೆ. ಈ ಜೋಡಿಯು 2022ರಲ್ಲಿ ಪ್ರಶಸ್ತಿ ಜಯಿಸಿತ್ತು. ಬಾಲಾಜಿ (ವಿಶ್ವ ರ್ಯಾಂಕಿಂಗ್ 78) ಅವರು ಜರ್ಮನಿಯ ಆ್ಯಂಡ್ರೆ ಬೆಗೆಮನ್ (ರ್ಯಾಂಕಿಂಗ್ 201) ಜೊತೆಗೆ ಆಡುವರು. 16 ತಂಡಗಳ ಡ್ರಾನಲ್ಲಿ ಈ ಜೋಡಿಯು 279ರ ಜಂಟಿ ರ್ಯಾಂಕ್ ಪಡೆಯಿತು.
ಮೈನೇನಿ (107) ಮತ್ತು ರಾಮಕುಮಾರ್ (210) ಜಂಟಿ 317ನೇ ರ್ಯಾಂಕ್ನಲ್ಲಿದ್ದಾರೆ. ಫ್ರಾನ್ಸ್ನ ಡ್ಯಾನ್ ಆ್ಯಡೆಡ್ ( 91) ಮತ್ತು ಕೊರಿಯಾದ ಯುನ್ ಸಾಂಗ್ ಚುಂಗ್ (167) ಜಂಟಿ 258ನೇ ರ್ಯಾಂಕ್ನಲ್ಲಿದ್ದು ಟೂರ್ನಿಯ ಅಗ್ರಸ್ಥಾನದಲ್ಲಿದೆ.
ಡ್ಯಾನ್ 11 ಡಬಲ್ಸ್ ಚಾಲೆಂಜರ್ಸ್ ಗೆಲುವು ಗಳಿಸಿದ್ದಾರೆ. ಹೋದ ಋತುವಿನಲ್ಲಿ ಅವರು ಅದ್ಭುತ ಫಾರ್ಮ್ನಲ್ಲಿದ್ದರು. ಅದೊಂದೇ ಅವಧಿಯಲ್ಲಿ ಅವರು 8 ಪ್ರಶಸ್ತಿ ಗೆದ್ದಿದ್ದರು. ನಿಕಿ ಪೂಣಚ್ಚ (147) ಅವರು ಈಚೆಗೆ ಇಸ್ಲಾಮಾ ಬಾದ್ನಲ್ಲಿ ನಡೆದಿದ್ದ ಡೇವಿಸ್ ಕಪ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಮುಹಮ್ಮದ್ ಶೋಯಬ್ ವಿರುದ್ಧ ಆಡಿದ್ದರು. ನಿಕಿ ಅವರು ಈ ಟೂರ್ನಿಯಲ್ಲಿ ಋತ್ವಿಕ್ ಚೌಧರಿ ಬೊಲಿಪಳ್ಳಿ ಅವರೊಂದಿಗೆ ಕಣಕ್ಕಿಳಿಯುವರು.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಆಶ್ರಯದಲ್ಲಿ ನಡೆಯಲಿರುವ ಈ ಟೂರ್ನಿಯ ಸಿಂಗಲ್ಸ್ನಲ್ಲಿ ಸುಮಿತ್ ನಗಾಲ್ ಮುಖ್ಯ ಆಕರ್ಷಣೆಯಾಗಿದ್ದಾರೆ. ಅವರು ಈಚೆಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಜಯಿಸಿದ್ದರು.